ಬೃಹತ್ ಸಾಂಸ್ಕೃತಿಕ ಕೇಂದ್ರ ರಾಮನಗರದ ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ

| Published : Sep 29 2024, 01:33 AM IST / Updated: Sep 29 2024, 11:27 AM IST

ಬೃಹತ್ ಸಾಂಸ್ಕೃತಿಕ ಕೇಂದ್ರ ರಾಮನಗರದ ಕರ್ನಾಟಕ ಜಾನಪದ ಪರಿಷತ್ತಿಗೆ ಯುನೆಸ್ಕೋ ಮಾನ್ಯತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ "ಜಾನಪದ ಲೋಕ "ವನ್ನು ನಿರ್ಮಾಣ ಮಾಡಿರುವ ರಾಮನಗರದ ಕರ್ನಾಟಕ ಜಾನಪದ ಪರಿಷತ್ತಿಗೆ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಯುನೆಸ್ಕೋದಿಂದ ನೀಡುವ ಮಾನ್ಯತೆ ಪಡೆದಿದೆ.

ಎಂ.ಅಫ್ರೋಜ್ ಖಾನ್ 

ರಾಮನಗರ : ಕನ್ನಡ ನಾಡಿನಲ್ಲಷ್ಟೇ ಅಲ್ಲ. ಭಾರತದಲ್ಲಿಯೇ ಅತ್ಯಂತ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ "ಜಾನಪದ ಲೋಕ "ವನ್ನು ನಿರ್ಮಾಣ ಮಾಡಿರುವ ಕರ್ನಾಟಕ ಜಾನಪದ ಪರಿಷತ್ತಿಗೆ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಉದ್ದೇಶಕ್ಕಾಗಿ ಯುನೆಸ್ಕೋದಿಂದ ನೀಡುವ ಮಾನ್ಯತೆ ಪಡೆದಿದೆ.

ಕಳೆದ ಜೂನ್ ತಿಂಗಳಲ್ಲಿ ಯುನೆಸ್ಕೋ ಮುಖ್ಯಾಲಯದಲ್ಲಿ ನಡೆದ ಹತ್ತನೇ ಅಧಿವೇಶನದ ಸಮಯದಲ್ಲಿ ಕರ್ನಾಟಕ ಜಾನಪದ ಪರಿಷತ್ತಿಗೆ ಈ ಮಾನ್ಯತೆಯನ್ನು ಘೋಷಿಸಲಾಗಿದೆ. ಇದು ವಿಶ್ವದ 58 ಸಾರ್ವಜನಿಕ ಸೇವಾ ಸಂಸ್ಥೆಗಳ ಪೈಕಿ ಕರ್ನಾಟಕ ಜಾನಪದ ಪರಿಷತ್ತನ್ನು ಒಂದು ಎಂದು ಗುರುತಿಸಿದೆ.ಯುನೆಸ್ಕೂದ "ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಅಂತರಿಕ ಸಮಿತಿ "ಗೆ ಸಲಹೆಗಳನ್ನು ನೀಡಲು ಈಗ ಪರಿಷತ್ತು ಮಾನ್ಯತೆ ಪಡೆದಿದೆ. ಈ ಮಾನ್ಯತೆಯಿಂದ ಕರ್ನಾಟಕ ಜಾನಪದ ಪರಿಷತ್ತು ಕರ್ನಾಟಕದ ಶ್ರೀಮಂತ ಮತ್ತು ವೈವಿಧ್ಯಮಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪರಿಷತ್ತಿನ ಬದ್ಧತೆಯನ್ನು ಹೆಚ್ಚಿಸಿದಂತಾಗಿದೆ.

ಜಾನಪದ ಕಲೆಗಳು ನಮ್ಮ ಪೂರ್ವಜನರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ಪುರಾತನ ಕಲೆಗಳು. ಇಂತಹ ಕಲೆಗಳು ಇಂದಿನ ನವ ನಾಗರಿಕತೆಯ ವೇಗದಲ್ಲಿ ತನ್ನ ಇರುವಿಕೆಯನ್ನು ಕಳೆದುಕೊಳ್ಳುತ್ತಿವೆಯಾದರೂ ಇವುಗಳನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. 

ಇಂತಹ ಅವಿಸ್ಮರಣೀಯ ಕಾರ್ಯಕ್ಕೆ ವೇದಿಕೆಯಾಗಿರುವುದು ಬೆಂಗಳೂರು-ಮೈಸೂರು ರಸ್ತೆಯ ರಾಮನಗರದ ಬಳಿ ಇರುವ ಜಾನಪದ ಲೋಕ ಎಂಬುದು ಹೆಮ್ಮೆಯ ವಿಷಯವಾಗಿದೆ.ಕಳೆದ 38 ವರ್ಷಗಳ ಹಿಂದೆ ನಾಡೋಜ ಎಚ್.ಎಲ್.ನಾಗೇಗೌಡರು ಸ್ಥಾಪಿಸಿದ ಜಾನಪದ ಲೋಕ ಇಂದು ತನ್ನದೆ ಆದ ನೆಲೆಯನ್ನು ಕಂಡುಕೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಸಾವಿರಾರು ವಿದ್ಯಾರ್ಥಿಗಳು ಸಂಶೋಧಕರು ಜಾನಪದ ಕಲೆಯ ಬಗ್ಗೆ ಇಲ್ಲಿ ಅಭ್ಯಸಿಸಿದ್ದಾರೆ.

ನಾಡೋಜ ಎಚ್.ಎಲ್.ನಾಗೇಗೌಡರ ಕನಸಿನ ಕೂಸಾದ ಜಾನಪದ ಲೋಕ ನಾಡಿನ ಜಾನಪದ ಸಾರಸ್ವತ ಲೋಕಕ್ಕೆ ಕೀರ್ತಿ ಕಳಶವಾಗಿದೆ. ಸದ್ಯ ವಿಶ್ವದಲ್ಲಿ ತನ್ನದೆ ಆದಂತಹ ಸ್ಥಾನವನ್ನು ಪಡೆದುಕೊಂಡಿದೆ. 2500 ಗಂಟೆಗಳ ಕಾಲ ಕೇಳಬಹುದಾದ ಜನಪದ ಗೀತ ಸಾಹಿತ್ಯ, 800 ಗಂಟೆಗಳ ಕಾಲ ನೋಡಬಹುದಾದ ಜನಪದ ಸಂಸ್ಕೃತಿಯ ವಿವಿಧ ಪ್ರಕಾರಗಳ ವಿಡಿಯೋ ಚಿತ್ರೀಕರಣ ಮತ್ತು ಸಾವಿರಾರು ವರ್ಣ ಪಾರದರ್ಶಿಕೆಗಳು ಇಲ್ಲಿವೆ.ಜಾನಪದ ಲೋಕದಲ್ಲಿ ಗ್ರೀಕ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಬಯಲು ರಂಗ ಮಂದಿರ ತನ್ನದೇ ಆದ ವಿಶೇಷತೆ ಹೊಂದಿದೆ. 

ಇಲ್ಲಿನ ಲೋಕ ಮಹಲ್ ವಸ್ತು ಸಂಗ್ರಹಾಲಯದಲ್ಲಿ ಜಾನಪದ ಕಲಾವಿದರ ವಿವಿಧ ವೇಷ ಭೂಷಣಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ವಿವಿಧ ಬುಡಕಟ್ಟು ಸಮುದಾಯಗಳ 6 ಮನೆಗಳ ಮಾದರಿಗಳನ್ನು ನಿರ್ಮಾಣ ಮಾಡಲಾಗಿದೆ. ಗೊರವ, ಕಿನ್ನರಿ ಜೋಗಿ, ಅಲಂಕೃತಗೊಂಡ ಬಸವ, ಯಕ್ಷಗಾನದಲ್ಲಿನ ರಾವಣ, ರಾಮ, ಉದ್ದನೆ ಬಾಲದ ಹನುಮಂತ ಮತ್ತಿತರ ಕಲಾ ಕೃತಿಗಳ ಸಂಗ್ರಹ ಅಮೋಘವಾಗಿದೆ. 

ಚಿತ್ರ ಕುಟೀರದಲ್ಲಿ ನಾಗೇಗೌಡರು ಸಂಗ್ರಹಿಸಿರುವ ಸಾವಿರಾರು ವರ್ಣ ಪಾರದರ್ಶಿಕೆಗಳು ಮತ್ತು ಅವರ ಕೃತಿಗಳ ಪ್ರದರ್ಶನ ಮನ ಮೋಹಕವಾಗಿವೆ. ವಸ್ತು ಸಂಗ್ರಹಾಲಯದಲ್ಲಿ ನಮ್ಮ ಹತ್ತಾರು ತಲೆಮಾರುಗಳ ಹಿಂದಿನ ಮಕ್ಕಳನ್ನು ತೂಗುತ್ತ್ದಿದ್ದ ಬಿದಿರು ತೊಟ್ಟಿಲು, ಹಸುವಿನ ಮುಖಕ್ಕೆ ಹಾಕುವ ಕುಣಿಕೆ, ದವಸ ತುಂಬುವ ಗುಡಾಣ ಮುಂತಾದವುಗಳ ಸಂಗ್ರಹ ಆಕರ್ಷಕವಾಗಿದೆ.

ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಮಾತನಾಡಿ, ಯುನೆಸ್ಕೋದಿಂದ ನೀಡಿರುವ ಈ ಮಾನ್ಯತೆಯನ್ನು ನಾವು ತುಂಬು ಗೌರವದಿಂದ ಸ್ವೀಕರಿಸಲು ಸಂತೋಷ ಪಡುತ್ತೇವೆ. ಇದು ನಾಡೋಜ ಎಚ್. ಎಲ್. ನಾಗೇಗೌಡರ ಜನಪದ ಕಳಕಳಿಗೆ ಗೌರವ ತಂದುಕೊಟ್ಟಿರುವುದಲ್ಲದೇ, ಕರ್ನಾಟಕದ ಜಾನಪದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ, ಸಂವರ್ಧನೆ ಮತ್ತು ಪ್ರಸಾರ, ಪ್ರಚಾರ, ದಾಖಲಾತಿಗಳ ಈ ನಮ್ಮ ಕಾರ್ಯದ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ ಎಂದರು.

ಸಿರಿಗಂಧ ಧಾರವಾಹಿ ಪ್ರಸಾರ:

ಜಾನಪದ ಕೀರ್ತೀ ಹೆಚ್ಚಳ

ಬೆಂಗಳೂರು ದೂರದರ್ಶನದಲ್ಲಿ 108 ಸಂಚಿಕೆಗಳ `ಸಿರಿಗಂಧ'''''''''''''''' ಧಾರವಾಹಿಯನ್ನು ಪ್ರಸಾರ ಮಾಡಿ ರಾಜ್ಯದ ಮನೆ ಮನೆಗಳಲ್ಲಿ ಜಾನಪದ ಸೊಗಡನ್ನು ಪಸರಿಸಿದ ಕೀರ್ತಿಗೆ ಜಾನಪದ ಲೋಕ ಪಾತ್ರವಾಗಿದೆ. 

ಜಾನಪದ ಲೋಕ ಉದ್ಘಾಟನೆಯಾದಾಗಿನಿಂದ ಇಲ್ಲಿಯವರೆಗೆ ಸುಮಾರು 800ಕ್ಕೂ ಹೆಚ್ಚು ಅಜ್ಞಾತ ಕಲಾವಿದರನ್ನು ಗುರುತಿಸಿ ಅವರಿಗೆ ಸೋಬಾನೆ ಚಿಕ್ಕಮ್ಮ, ದೊಡ್ಡಮನೆ, ದೊಡ್ಡಮನೆ ಲಿಂಗೇಗೌಡ, ಜಾನಪದ ಲೋಕ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷ ನಡೆಸುವ ಲೋಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ಜಾನಪದ ಕಲಾವಿದರಷ್ಟೆ ಅ್ಲಲದೆ ನೆರೆ ರಾಜ್ಯದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮೂಲಕ ಕಲಾವಿದರನ್ನು ಕರೆತಂದು ಅ್ಲಲಿನ ಜಾನಪದ ಸಂಸ್ಕೃತಿಯನ್ನು ನಮ್ಮ ಜನರಿಗೆ ನಾಗೇಗೌಡರು ಉಣ ಬಡಿಸಿದ್ದಾರೆ. 

ಸುಮಾರು ಐದು ಸಾವಿರಕ್ಕೂ ಹೆಚ್ಚು ಜಾನಪದ ವಸ್ತುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಜಾನಪದ ಲೋಕ ವಿಶ್ವದಲ್ಲಿಯೇ ವಿಶಿಷ್ಠ ಸ್ಥಳವಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಜಾನಪದ ಡಿಪ್ಲೊಮಾ ಮತ್ತು ಸರ್ಟಿಪಿಕೇಟ್ ಕೋರ್ಸ್‌ನಲ್ಲಿ ತೇರ್ಗಡೆಯಾಗಿದ್ದಾರೆ. 

45 ವರ್ಷದಿಂದ ಸೇವೆ

1979ರಲ್ಲಿ ನಾಡೋಜ ಎಚ್. ಎಲ್. ನಾಗೇಗೌಡರಿಂದ ಸ್ಥಾಪನೆಯಾದ ಕರ್ನಾಟಕ ಜಾನಪದ ಪರಿಷತ್ತು ಕಳೆದ 45 ವರ್ಷಗಳಿಂದಲೂ ಜಾನಪದ ಕ್ಷೇತ್ರದಲ್ಲಿ ಅಮೂಲ್ಯವಾದ ಕೆಲಸ ಮಾಡುತ್ತಿದೆ. ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ 15 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕವು ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರವಾಗಿದೆ.

ಯುನೆಸ್ಕೋ ಮಾನ್ಯತೆ ನಮ್ಮನ್ನು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯ ಜಾಗತಿಕ ಸಂವಾದಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಉತ್ತೇಜಿಸುತ್ತದೆ. ಇದರಿಂದ ಕರ್ನಾಟಕ ಜಾನಪದ ಪರಿಷತ್ತು ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯ ಸಮುದಾಯದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸಿಕೊಂಡಿದೆ.

ಪ್ರೊ.ಹಿ.ಚಿ. ಬೋರಲಿಂಗಯ್ಯ, ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತು.