ಕನ್ನಡಪ್ರಭ ವಾರ್ತೆ ಮೈಸೂರು
ಯೋಗ ಭಾರತದ ಸಾಫ್ಟ್ ಪವರ್ ಆಗಿ ವಿಶ್ವವನ್ನು ಪ್ರಭಾವಿಸುತ್ತಿದೆ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ತಿಳಿಸಿದರು.ನಗರದ ಮಹಾರಾಜ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಮೈಸೂರು ವಿವಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯೋಗ ಇಡೀ ವಿಶ್ವವನ್ನು ಪ್ರಭಾವಿಸುವಂತಹ ಭಾರತದ ಸಾಫ್ಟ್ ಪವರ್ ಎಂದು ನಾನು ಭಾವಿಸಿದ್ದೇನೆ ಎಂದರು.
ಯೋಗ ಮನುಷ್ಯನ ಮನಸ್ಸನ್ನ ಹೇಗೆ ಇಟ್ಟುಕೊಳ್ಳಬೇಕು, ಹೇಗೆ ನಿಯಂತ್ರಿಸಿಕೊಳ್ಳಬೇಕು ಅನ್ನೋದನ್ನ ನಮಗೆ ಹೇಳಿಕೊಡುತ್ತದೆ. ನಾವೆಲ್ಲರೂ ಯೋಗವನ್ನು ವ್ಯಾಯಾಮ ಅಷ್ಟೇ ಅಂತ ಭಾವಿಸಿದ್ದೇವೆ, ಅದಕ್ಕೆ ಮೀರಿ ಯೋಗ ಮನುಷ್ಯನ ದೇಹ, ಮನಸ್ಸು ಮತ್ತು ಆಧ್ಯಾತ್ಮಿಕತೆಯನ್ನ ಒಂದು ಸೂತ್ರಕ್ಕೆ ಒಳಪಡಿಸುವಂತಹ ಅತ್ಯದ್ಭುತವಾದಂತಹ ಭಾರತೀಯವಾದಂತಹ ಒಂದು ಅದ್ಭುತ ಪರಿಕಲ್ಪನೆಯಾಗಿದೆ ಎಂದು ಅವರು ಹೇಳಿದರು.ಯೋಗದ ವಿಷಯದಲ್ಲಿ ಮಾತ್ರ ಇಡೀ ಜಗತ್ತು, ಜಗತ್ತಿನ ನೂರಾರು ದೇಶಗಳು ಭಾರತ ಏನು ಹೇಳುತ್ತೆ ಅಂತ ಯೋಚನೆ ಮಾಡ್ತಾರೆ. ಭಾರತ ಏನು ಹೇಳುತ್ತೋ ಅದು ಕೊನೆಯದು ಅಂತ ಅನ್ಕೋತಾರೆ. ನಾವು ಪಾಶ್ಚಿಮಾತ್ಯ ಜಗತ್ತಿಗೆ ಅತ್ಯಂತ ನಿಷ್ಠವಾಗಿ, ಅತ್ಯಂತ ವಿಧೇಯವಾಗಿ ಬದುಕುತ್ತಾ ಇರುವಂತಹ ಈ ಕಾಲದಲ್ಲೂ ಇಡೀ ಪ್ರಪಂಚವನ್ನ ಪ್ರಭಾವಿಸುವಂತಹ, ಇಡೀ ಪ್ರಪಂಚವನ್ನ ಗಾಡವಾಗಿ ತನ್ನ ಮುಷ್ಟಿಯಲ್ಲಿ ಇಟ್ಟುಕೊಳ್ಳುವಂತಹ ಅತ್ಯದ್ಭುತವಾದ ಸಾಫ್ಟ್ ಪವರ್ ಭಾರತ ದೇಶದ್ದು ಅಂದರೇ ಅದು ಯೋಗ ಎಂದರು.
ಇದೇ ವೇಳೆ ನೂರಾರು ಮಂದಿ ಯೋಗಾಸನ ಮಾಡಿದರು. ಜಿಎಸ್ಎಸ್ ಸಂಸ್ಥೆಯ ಮುಖ್ಯಸ್ಥ ಡಿ. ಶ್ರೀಹರಿ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ ಮೊದಲಾದವರು ಇದ್ದರು.
----
ಕೋಟ್...ಯೋಗ ಒಂದು ಹೂಡಿಕೆಯಾಗಿ ಯೋಚನೆ ಮಾಡಬಹುದು, ಪ್ರತಿನಿತ್ಯ ಯೋಗ ಮಾಡಿದರೆ ಲೈಫ್ ಟೈಮ್ ನಲ್ಲಿ ಒಂದು ಕೋಟಿ ರೂ. ಉಳಿತಾಯ ಮಾಡಿದಂತೆ. ಮೈಸೂರಿನಲ್ಲಿ 300 ಜಾಸ್ತಿ ಯೋಗಶಾಲೆಗಳಿದೆ. ಯಾವುದೇ ಯೋಗಶಾಲೆನಲ್ಲಿ ನೊಂದಣಿ ಮಾಡಿಕೊಳ್ಳಬಹುದು. ಈಗಾಗಲೇ ಯೋಗ ಅಭ್ಯಾಸ ಇದ್ದರೆ, ನೀವೇ ಮಾಡಿಕೊಳ್ಳಬಹುದು.
- ಡಿ. ಶ್ರೀಹರಿ, ಮುಖ್ಯಸ್ಥರು, ಜಿಎಸ್ಎಸ್ ಸಂಸ್ಥೆ