ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ವಿವಿಧೆಡೆ ಮನೆ ಮನೆ ಪ್ರಚಾರ ಕೈಗೊಂಡಿದ್ದು, ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಗೆಲುವು ನಿಶ್ಚಿತ ಎಂದು ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷ ಕಳೆದ ಆರು ತಿಂಗಳ ಹಿಂದೆಯೇ ಟಿಕೆಟ್ ಘೋಷಿಸಿತ್ತು. ಆದರೆ, ಅದಕ್ಕೂ ಮೊದಲಿನಿಂದಲೂ ಕ್ಷೇತ್ರಾದ್ಯಂತ ಸಂಚರಿಸಿ ಮತ ಯಾಚಿಸುತ್ತಿದ್ದೇನೆ. ಸುಮಾರು 70 ಸಾವಿರಕ್ಕೂ ಅಧಿಕ ಅರ್ಹ ಮತದಾರರನ್ನು ಮತದಾರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿದ್ದೇನೆ ಎಂದರು.
ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಯ 36 ವಿಧಾನಸಭಾ ಮತಕ್ಷೇತ್ರ ಪ್ರತಿ ಮತದಾರ ಮನೆಗೂ ತೆರಳಿ ನಾನು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಭೇಟಿ ಮತಯಾಚಿಸಿದ್ದೇವೆ. ಪದವೀಧರರ ಸ್ವಾವಲಂಬಿ ಜೀವನಕ್ಕಾಗಿ ಸ್ವಂತ ನಾನಾ ಯೋಜನೆಗಳನ್ನು ಇಟ್ಟುಕೊಂಡು ಪ್ರಣಾಳಿಕೆ ರಚಿಸಿ ಹಂಚಿದ್ದು , ಆ ಪ್ರಕಾರವೇ ಕಾರ್ಯನಿರ್ವಹಿಸುವೆ ಎಂದರು.ಪ್ರತಿ ಮತ ಕ್ಷೇತ್ರದಲ್ಲಿ ಉದ್ಯೋಗ ಮೇಳ, ಪದವೀಧರ ನಿರುದ್ಯೋಗಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವ ಗುರಿ ಹೊಂದಿದ್ದೇನೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾಂಗ್ರೆಸ್ ಜಿಲ್ಲಾ, ಬ್ಲಾಕ್ ಹೋಬಳಿ ಹಂತದ ಎಲ್ಲಾ ಪದಾಧಿಕಾರಿಗಳು ನನ್ನ ಗೆಲುವಿಗೆ ಪ್ರಚಾರ ನಡೆಸಿದ್ದು, ನನಗೆ ಆನೆಬಲ ಬಂದಂತಾಗಿದೆ ಎಂದರು.
ಆ್ಯಪ್ ಮೂಲಕ ಪ್ರಚಾರ:ಮನೆ ಬಾಗಿಲಿಗೆ ಹೋಗಿ ಮತ ಯಾಚಿಸುವುದು ಮಾತ್ರವಲ್ಲ, ತಂತ್ರಜ್ಞಾನ ಬಳಸಿಕೊಂಡು ಮತದಾರರನ್ನು ತಲುಪುವ ಪ್ರಯತ್ನವನ್ನು ಮಾಡಲಾಗಿದೆ. ಪ್ಲೇ ಸ್ಟೋರ್ ನಲ್ಲಿ ರಾಮೋಜಿಗೌಡ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡರೇ, ಮತದಾರರ ಮತದಾನದ ಕೇಂದ್ರದ ವಿವರ ಜತೆಗೆ, ರಾಮೋಜಿಗೌಡ ಅವರ ಮಾಹಿತಿಯನ್ನು ನೋಡಬಹುದು. ಇಲ್ಲಿಯವರೆಗೆ ಒಂದು ಲಕ್ಷ ಜನ ಈ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.