ಸಾರಾಂಶ
ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೦೨೪-೨೫ನೇ ಶೈಕ್ಷಣಿಕ ವರ್ಷದ ಪ್ರಥಮ ಬಿ.ಕಾಂ ಹಾಗೂ ಬಿಬಿಎ ಪದವಿಗಳ ತರಗತಿಗಳು ಸೋಮವಾರದಿಂದ ಪ್ರಾರಂಭಗೊಂಡವು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೨೦೨೪-೨೫ನೇ ಶೈಕ್ಷಣಿಕ ವರ್ಷದ ಪ್ರಥಮ ಬಿ.ಕಾಂ ಹಾಗೂ ಬಿಬಿಎ ಪದವಿಗಳ ತರಗತಿಗಳು ಸೋಮವಾರದಿಂದ ಪ್ರಾರಂಭಗೊಂಡವು.ಕಾಲೇಜಿನ ಪ್ರಾಚಾರ್ಯರಾದ ಆಶಾ ಕುಮಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಿಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಇರುವ ಶೈಕ್ಷಣಿಕ ಅವಕಾಶಗಳ ಬಗೆಗೆ, ಸಿಎ, ಸಿಎಸ್, ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗೆ, ಅವುಗಳಿಗೆ ಪೂರಕವಾದ ಕಾಲೇಜಿನಲ್ಲಿ ನೀಡುವ ತರಬೇತಿಗಳ ಬಗೆಗೆ ಮಾಹಿತಿ ನೀಡುವುದರ ಜೊತೆಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾಲಿಸಬೇಕಾದ ಶಿಸ್ತು ಸಂಯಮಗಳ ಬಗೆಗೆ ಮಾಹಿತಿ ನೀಡಿದರು.
ಡಾ. ಟಿ.ಎಂ.ಎ ಪೈ ಪ್ರತಿಷ್ಠಾನ ಮಣಿಪಾಲ ಇದರ ಅಂಗಸಂಸ್ಥೆಯಾಗಿ ೩೩ ವರ್ಷಗಳಿಂದ ಯು.ಪಿ.ಎಂ.ಸಿ. ಬೆಳೆದು ಬಂದ ಬಗೆ, ಇಲ್ಲಿನ ವಿದ್ಯಾರ್ಥಿಗಳಿಗೆ ಭವಿಷ್ಯದ ಉಜ್ವಲ ಅವಕಾಶಗಳ ಬಗೆಗೆ ಮಾಹಿತಿ ನೀಡಿದರು.ಉಪನ್ಯಾಸಕರಾದ ಚಂದ್ರಶೇಖರ್, ರಾಘವೇಂದ್ರ ಜಿ.ಜಿ., ಶಶಿಕಾಂತ್ ಶೆಟ್ಟಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಿವಿಧ ಪಠ್ಯೇತರ ಹಾಗೂ ಸಹಪಠ್ಯ ಚಟುವಟಿಕೆಗಳಾದ ಎನ್.ಎಸ್.ಎಸ್., ರೆಡ್ ಕ್ರಾಸ್, ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಬಗೆಗೆ ಮಾಹಿತಿ ನೀಡಿದರು. ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್ ಉಪಸ್ಥಿತರಿದ್ದರು.ಕಾಲೇಜಿನ ಹಿಂದಿ ಉಪನ್ಯಾಸಕಿ ಸುನೀತಾ ಕಾಮತ್ ಪ್ರಾರ್ಥಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಚಂದ್ರಶೇಖರ್ ಪ್ರಸ್ತಾವಿಸಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಶಶಿಕಾಂತ್ ಶೆಟ್ಟಿ ವಂದಿಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ನಿರ್ವಹಿಸಿದರು.