ಚಿತ್ರದುರ್ಗದ ವಾಲ್ಮೀಕಿ ಭವನದಲ್ಲಿ ನೇರ್ಲಿಗೆ ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಡಾ.ಆಕಾಶ್ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಣ ಸಂಪಾದನೆಗಾಗಿ ಯುಪಿಎಸ್ಸಿ ಪರೀಕ್ಷೆ ಆಯ್ಕೆ ಬೇಡವೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆಕಾಶ್ ಹೇಳಿದರು.

ಇಲ್ಲಿನ ವಾಲ್ಮೀಕಿ ಭವನದಲ್ಲಿ ದಿ ನೇರ್ಲಿಗೆ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಬೆಳಕು ಯುುಪಿಎಸ್ಸಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಐಎಎಸ್ ಮಾಡುವುದು ಕೇವಲ ಉದ್ಯೋಗವಲ್ಲ, ಅದು ಒಂದು ಮಹತ್ತರ ಜವಾಬ್ದಾರಿ. ಹಣ ಸಂಪಾದನೆಗಾಗಿ ಯುಪಿಎಸ್ಸಿ ಆಯ್ಕೆ ಮಾಡುವವರು ಈ ಕ್ಷೇತ್ರಕ್ಕೆ ಸೂಕ್ತರಲ್ಲ. ಸಮಾಜದ ಸಮಸ್ಯೆಗಳ ಬಗ್ಗೆ ಸಂವೇದನೆ, ಜವಾಬ್ದಾರಿತನ ಮತ್ತು ಸೇವಾಭಾವನೆ ಇರುವವರು ಮಾತ್ರ ಈ ದಾರಿಗೆ ಬರಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ವಿದ್ಯಾರ್ಥಿಗಳಿಗೆ ಯುಪಿಸಎಸ್ಸಿ ತಯಾರಿಯ ಪ್ರತಿ ಹಂತವನ್ನು ವಿವರವಾಗಿ ತಿಳಿಸಿದರು. ತಯಾರಿಗಾಗಿ ಬಳಸಬೇಕಾದ ಪುಸ್ತಕಗಳು, ಅಧ್ಯಯನಕ್ಕೆ ಉಪಯುಕ್ತವಾದ ವೆಬ್‌ಸೈಟ್‌ಗಳು, ಓದಲೇಬೇಕಾದ ಪ್ರಮುಖ ವಿಷಯಗಳು ಸೇರಿ ತಮ್ಮ ಸಿದ್ಧತೆಯ ಅನುಭವವನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ಉಪ ವಿಭಾಗಾಧಿಕಾರಿ ಡಾ.ವೆಂಕಟೇಶ್ ನಾಯಕ್ ಹಾಗೂ ತಹಸೀಲ್ದಾರ್ ಕಾಂತರಾಜ್ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಶಿಸ್ತಿನ ಮಹತ್ವ ಹಾಗೂ ನಿರಂತರ ಪರಿಶ್ರಮದ ಅಗತ್ಯವನ್ನು ಹೇಳಿದರು. ಹಿರಿಯೂರು ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರಮೋದ್ ಹಾಗೂ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ ಜೆ ಕರಿಯಪ್ಪ ಮಾಳಿಗೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಭರಿತ ಮಾತುಗಳನ್ನಾಡಿದರು.

ದಿ ನೇರ್ಲಿಗೆ ಫೌಂಡೇಷನ್ ಸಂಸ್ಥಾಪಕಿ ಮಮತಾ ನೇರ್ಲಿಗೆ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಶೀಘ್ರದಲ್ಲೇ ಪ್ರೆಪ್ ನೇಷನ್ ಎಂಬ ಎಐ ಆಧಾರಿತ ಉಚಿತ ಮಾಕ್ ಟೆಸ್ಟ್ ಪ್ಲಾಟ್‌ಫಾರ್ಮ್‌ನ್ನು ಪ್ರಾರಂಭಿಸಲಾಗುವುದಾಗಿ ತಿಳಿಸಿದರು.

ದೇಶದಾದ್ಯಂತ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳು ಈ ವೇದಿಕೆಯ ಮೂಲಕ ನೈಜ ಸಮಯದ ಮಾಕ್ ಪರೀಕ್ಷೆಗಳನ್ನು ಉಚಿತವಾಗಿ ಅಭ್ಯಾಸ ಮಾಡಬಹುದಾಗಿದೆ ಎಂದರು. ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.