ಲಕ್ಷ್ಮೇಶ್ವರ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ಹತ್ತಿರ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಖಂಡಿಸಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಹಡಪದ ಸಮಾಜದ ತಾಲೂಕು ಅಧ್ಯಕ್ಷ ಗುಡ್ಡಪ್ಪ ಹಡಪದ ಹಾಗೂ ಅಂಬರೀಶ್ ತೆಂಬದಮನಿ ಅವರು ಮಾತನಾಡಿ, ಬಸವಣ್ಣನವರ ಜೀವನಪೂರ್ತಿ ಜತೆಗೆ ಇದ್ದವರು ಅಪ್ಪಣ್ಣನವರು ಮಾತ್ರ ಎಂಬುದು ಕಟುಸತ್ಯ. ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಪಂಚ ಕಮಿಟಿಯವರು ಆಕ್ರಮ ಹಸ್ತಕ್ಷೇಪದಿಂದ ಬೇರೊಬ್ಬ ಶರಣರ ಮೂರ್ತಿ ಪ್ರತಿಷ್ಠಾನ ಮಾಡಿರುವುದು ಖೇದದ ಸಂಗತಿ. ಇದರಿಂದ ಅಪ್ಪಣ್ಣನವರ ಮೂರ್ತಿ ಇಲ್ಲದಿರುವುದು ಹಡಪದ ಸಮುದಾಯದ ಭಕ್ತಿಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಇದರಿಂದ ಇತಿಹಾಸವನ್ನು ತಿರುಚಿದಂತಾಗಿರುವದು ಕಂಡುಬರುತ್ತದೆ ಎಂದರು.ಅಕ್ರಮ ಕೃತ್ಯ ಮಾಡಿದ ಪಂಚ ಕಮಿಟಿಯವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡು ಯಥಾಸ್ಥಿತಿಗೆ ತರಬೇಕು. ಅಲ್ಲಿಯೇ ಹಡಪದ ಅಪ್ಪಣ್ಣನವರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಈ ಸ್ಥಳವನ್ನು ಬಸವ ಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಬೇಕು. ಭಾರತಿ ಅಪ್ಪಣ್ಣ ಸ್ವಾಮಿಗಳನ್ನು ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿಕೊಂಡು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಆಗ್ರಹಿಸಿದರು.ಈ ವೇಳೆ ನಗರ ಘಟಕದ ಅಧ್ಯಕ್ಷ ಎಚ್.ಎಸ್. ವಿನೋದ, ಲಕ್ಷ್ಮಣ ನಾವಿ, ಮುತ್ತಪ್ಪ ನಾವಿ, ವೀರಣ್ಣ ಹಡಪದ, ಸೋಮು ನಾವಿ, ಶಂಕರ್ ನಾವಿ, ಯಲ್ಲಪ್ಪ ಹಡಪದ, ನಾಗಪ್ಪ ಹಡಪದ, ಮಂಜುನಾಥ ನಾವಿ, ನಿಂಗಪ್ಪ ಹಡಪದ, ತಿಪ್ಪಣ್ಣ ಹಡಪದ, ಸೋಮಣ್ಣ ಹಡಪದ, ಜಗದೀಶ ಹಡಪದ, ಈರಣ್ಣ ಹಡಪದ, ಆನಂದ ಹಡಪದ ಪರಶುರಾಮ್ ಹಡಪದ, ಬಸಣ್ಣ ಹಡಪದ ಇತರರು ಇದ್ದರು.