ಎಚ್ಚರಿಕೆಯಿಂದ ಕೃತಕ ಬುದ್ಧಿಮತ್ತೆ ಬಳಸಿ: ನ್ಯಾ. ದೇವೇಂದ್ರ ಪಂಡಿತ್

| Published : Mar 18 2024, 01:50 AM IST

ಸಾರಾಂಶ

ಗ್ರಾಹಕರು ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ನಡೆಸುವ ಹಣಕಾಸಿನ ವ್ಯವಹಾರಕ್ಕಾಗಿ ಬಳಸುವ ಕೃತಕ ಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಗ್ರಾಹಕರು ಮೊಬೈಲ್‌ನಲ್ಲಿ ಆನ್‌ಲೈನ್ ಮುಖಾಂತರ ನಡೆಸುವ ಹಣಕಾಸಿನ ವ್ಯವಹಾರಕ್ಕಾಗಿ ಬಳಸುವ ಕೃತಕ ಬುದ್ಧಿಮತ್ತೆಯನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್ ಹೇಳಿದರು.

ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಪ್ಪಳ ವಿವಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ತಮ್ಮ ವೈಯಕ್ತಿಕ ಖಾತೆಯ ನಂಬರ್ ಅನ್ನು ಅಥವಾ ಖಾತೆಯ ವಿವರಗಳನ್ನು ಬಿಟ್ಟುಕೊಡಬಾರದು. ಮೊಬೈಲ್ ಮೂಲಕ ಆನ್‌ಲೈನ್ ಹಣ ವರ್ಗಾವಣೆ ಸಂದರ್ಭಗಳಲ್ಲಿ ಜಾಗ್ರತೆ ವಹಿಸಬೇಕು. ಗ್ರಾಹಕರು ಕೊಂಡ ವಸ್ತುಗಳು ಕಳಪೆ ಗುಣಮಟ್ಟದ್ದಾಗಿದ್ದಲ್ಲಿ, ಅದರಿಂದ ಮೋಸ ಹೋದಲ್ಲಿ ಅಥವಾ ವೆಹಿಕಲ್ ಇನ್ಶೂರೆನ್ಸ್ ಕಂಪನಿಯಿಂದ ಯಾವ ರೀತಿ ಪರಿಹಾರ ಪಡೆಯಬೇಕು ಎಂಬುದಕ್ಕೆ ಸೂಕ್ತವಾದ ಕಾನೂನಾತ್ಮಕ ಉತ್ತರಗಳನ್ನು ನೀಡುತ್ತಾ ಕೃತಕ ಬುದ್ಧಿಮತ್ತೆ ಬಳಸಿ ನಡೆಸುವ ವ್ಯವಹಾರಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ನ್ಯಾಯವಾದಿ ಸಾವಿತ್ರಿ ಮುಜುಮದಾರ, ಎಐ ಅಥವಾ ಕೃತಕ ಬುದ್ಧಿಮತ್ತೆಯು ಕೆಲವು ಸಮಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅವುಗಳಿಂದ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚಾಗಿವೆ. ಆದ್ದರಿಂದ ಅವುಗಳಿಂದ ಸರಿಯಾದ ಉತ್ತರ ನಿರೀಕ್ಷಿಸಲಾಗುವುದಿಲ್ಲ. ಇಂದು ಸಿದ್ಧ ಮಾದರಿಯ ಧ್ವನಿಗಳಿಂದ ಸಿಗುವ ಮಾಹಿತಿ ಅಪೂರ್ಣವಾಗಿರುತ್ತದೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೋರಾಟ ಆರಂಭವಾಗಿದೆ. ಆದ್ದರಿಂದ ಗ್ರಾಹಕರು ಜವಾಬ್ದಾರಿಯುತವಾಗಿ ಕೃತಕ ಬುದ್ಧಿಮತ್ತೆ ಬಳಸಬೇಕು. ಬಳಕೆದಾರ ಯಾವುದೇ ವಸ್ತುಗಳನ್ನು ಖರೀದಿಸುವ ಮುಂಚೆ ಆ ವಸ್ತುವಿನ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇಂದು ರಾಜ್ಯದಲ್ಲಿ ಗೋಬಿ, ಕಾಟನ್ ಕ್ಯಾಂಡಿ ಮತ್ತು ಇತರೆ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಮತ್ತು ರಾಸಾಯನಿಕ ಬಳಕೆ ನಿಷೇಧಿಸಲಾಗಿದೆ. ಇದರ ಬಳಕೆ ಕಂಡುಬಂದಲ್ಲಿ ಗ್ರಾಹಕರು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ದೂರು ಕೊಡಬಹುದು ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೂ ದೂರು ನೀಡಿ ನ್ಯಾಯ ಪಡೆಯಬಹುದು ಎಂದರು.

ಕೊಪ್ಪಳ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ವಿ. ಪ್ರಸಾದ ಕೃತಕ ಬುದ್ಧಿಮತ್ತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪರಿಣಿತರಿಂದ ಮಾರ್ಗದರ್ಶನ ಮತ್ತು ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ

ಕಿವಿಮಾತು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜಿ.ಇ. ಸೌಭಾಗ್ಯ ಲಕ್ಷ್ಮೀ ಗ್ರಾಹಕರ ಹಕ್ಕುಗಳು, ಜವಾಬ್ದಾರಿ ಹಾಗೂ ಪರಿಹಾರ ಕುರಿತು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎಂ.ಜಿ. ಮಾಲ್ದಾರ್ ಕಾನೂನು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಅನ್ನಪೂರ್ಣ ಮುದುಕಮ್ಮನವರ, ಇಲಾಖೆಯ ಅಧಿಕಾರಿ ದೇವರಾಜ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಕೃಷ್ಣ, ಬಕ್ರುದ್ದಿನ್, ಪ್ರೊ. ಸುಧಾಕರ, ಪ್ರೊ. ಪ್ರವೀಣ ಪೊಲೀಸ್ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.