ಸೂರ್ಯಶಕ್ತಿ ಬಳಕೆ ಉತ್ತೇಜನ ಅಗತ್ಯ: ಡಾ.ನಿಂಗರಾಜ್‌ಗೌಡ

| Published : Apr 23 2025, 12:31 AM IST

ಸಾರಾಂಶ

ಪರಿಸರ ಸಂರಕ್ಷಣೆ ಹಾಗೂ ಭೂಮಿಯ ಮೇಲಿನ ನಮ್ಮ ಹೊಣೆಗಾರಿಕೆಯನ್ನು ಜಾಗೃತಗೊಳಿಸುವ ಸಲುವಾಗಿ ವಿಶ್ವಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ೧೯೭೦ರಲ್ಲಿ ಅಮೆರಿಕದ ಸೆನೆಟರ್ ಗೇಲೋರ್ಡ್ ನೆಲ್ಸನ್ ಅವರು ಪರಿಸರ ಸಮಸ್ಯೆಗಳನ್ನು ಸಾರ್ವಜನಿಕ ಚರ್ಚೆಗೆ ತರುವ ಉದ್ದೇಶದಿಂದ ವಿಶ್ವ ಭೂಮಿ ದಿನವನ್ನು ಪ್ರಾರಂಭಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವಭೂಮಿ ದಿನಾಚರಣೆಯ ಸಮಯದಲ್ಲಿ ನಮ್ಮ ಶಕ್ತಿ-ನಮ್ಮ ಗ್ರಹ ಘೋಷ ವಾಕ್ಯದೊಂದಿಗೆ ನವೀಕರಿಸಬಹುದಾದ ಶಕ್ತಿಯ ಬಳಕೆಯನ್ನು ಉತ್ತೇಜಿಸುವುದರೊಂದಿಗೆ ೨೦೩೦ರ ವೇಳೆಗೆ ಶುದ್ಧ ವಿದ್ಯುತ್ ಉತ್ಪಾದನೆಯನ್ನು ಮೂರರಷ್ಟು ಹೆಚ್ಚಿಸುವ ಗುರಿ ಸಾಧಿಸುವ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ನಗರದ ಮಿಮ್ಸ್ ಆಸ್ಪತ್ರೆಯಲ್ಲಿ ವಿಶ್ವ ಭೂಮಿ ದಿನಾಚರಣೆ ಹಾಗೂ ಹುಟ್ಟುಹಬ್ಬದ ಪ್ರಯುಕ್ತ ಮಮತೆಯ ಮಡಿಲು ಕೇಂದ್ರದಲ್ಲಿ ಅನ್ನದಾಸೋಹ ಮತ್ತು ಗಿಡ ವಿತರಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆ ಹಾಗೂ ಭೂಮಿಯ ಮೇಲಿನ ನಮ್ಮ ಹೊಣೆಗಾರಿಕೆಯನ್ನು ಜಾಗೃತಗೊಳಿಸುವ ಸಲುವಾಗಿ ವಿಶ್ವಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ೧೯೭೦ರಲ್ಲಿ ಅಮೆರಿಕದ ಸೆನೆಟರ್ ಗೇಲೋರ್ಡ್ ನೆಲ್ಸನ್ ಅವರು ಪರಿಸರ ಸಮಸ್ಯೆಗಳನ್ನು ಸಾರ್ವಜನಿಕ ಚರ್ಚೆಗೆ ತರುವ ಉದ್ದೇಶದಿಂದ ವಿಶ್ವ ಭೂಮಿ ದಿನವನ್ನು ಪ್ರಾರಂಭಿಸಿದರು. ಆ ದಿನ ೨೦ ಮಿಲಿಯನ್ ಅಮೆರಿಕನ್ನರು ಪರಿಸರದ ಪರವಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರು. ಈ ಚಳವಳಿಯ ಪರಿಣಾಮವಾಗಿ ಅಮೆರಿಕದ ಪರಿಸರ ಸಂರಕ್ಷಣಾ ಸಂಸ್ಥೆ ಸ್ಥಾಪನೆಯಾಯಿತು ಎಂದರು.

ಜಾಗತಿಕ ತಾಪಮಾನ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವಿಶ್ವದಾದ್ಯಂತ ಹಲವಾರು ಪರಿಸರ ಸ್ನೇಹಿ ಕಾರ್ಯಕ್ರಮಗಳು ನಡೆಯುತ್ತಿವೆ. ಅಮೆರಿಕದ ಡೆಟ್ರಾಯಿಟ್ ನಗರದಲ್ಲಿ ಜೈಂಟ್ ಸೆಕ್ವಾಯಾ ಮರಗಳ ತೋಟ ನಿರ್ಮಾಣದ ಮೂಲಕ ನಗರ ಹಸಿರೀಕರಣಕ್ಕೆ ಮುಂದಾಗಿದೆ. ಕ್ಷಿಸಿಯಾಟಲ್‌ನಲ್ಲಿ ಲೇಡಿಬಗ್ ಫೆಸ್ಟಿವಲ್, ಪಾರ್ಕ್ ಶುದ್ಧೀಕರಣ ಮತ್ತು ಪರಿಸರ ಜಾಗೃತಿಗಾಗಿ ವಿವಿಧ ಸಮುದಾಯ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದರು.

ಹಸಿರು ಜೀವನವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಗಿಡಮರಗಳನ್ನು ಹೆಚ್ಚಾಗಿ ಬೆಳೆಸುವುದು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು. ಇಂಧನ ಬಳಕೆಯನ್ನು ಕಡಿಮೆ ಮಾಡುವುದರಿಂದ ಪರಿಸರ ಸಂರಕ್ಷಣೆಯಾಗುತ್ತದೆ. ಪ್ರಾಕೃತಿಕ ಸಮತೋಲನ ಸಾಧಿಸುವುದರಿಂದ ಹವಾಮಾನ ವೈಪರೀತ್ಯಗಳು ದೂರವಾಗಿ ಕಾಲ ಕಾಲಕ್ಕೆ ಮಳೆಯಾಗುತ್ತದೆ. ವಿಶ್ವಭೂಮಿ ದಿನಾಚರಣೆಯನ್ನು ಮಾನವ ಜನಾಂಗ ಮತ್ತು ಭೂಮಿಗೆ ಒಳ್ಳೆಯದಾಗಿಸಲು ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಯೊಬ್ಬರ ಸಹಕಾರದಿಂದ ಭೂಮಿಯ ಭವಿಷ್ಯವನ್ನು ಸುಧಾರಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ಕಲಾ ತಪಸ್ವಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಅನಿಲ್‌ಕುಮಾರ್, ಡಾ.ಈ.ಸಿ.ನಿಂಗರಾಜ್‌ಗೌಡ ಫೌಂಡೇಷನ್ ಕಾರ್ಯದರ್ಶಿ ವೈ.ಹೆಚ್.ಲೋಹಿತ್‌ಕುಮಾರ್, ನಿರ್ದೇಶಕರಾದ ಪಿ.ಕೆ.ರಮೇಶ್, ರಾಮಸ್ವಾಮಿ, ರಾಜುಸ್ವಾಮಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಎಂ.ಯೋಗೇಶ್ ಇದ್ದರು.