ಗಜೇಂದ್ರಗಡ: ಗ್ಯಾಸ್ ಕೊರತೆ ಹಿನ್ನೆಲೆ ಪಟ್ಟಣದ ಬಹುತೇಕ ಹೋಟೆಲ್‌ಗಳಲ್ಲಿ ಸೌದೆ ಒಲೆ ಮೇಲೆ ಅಡುಗೆ ಮಾಡುತ್ತಿದ್ದು, ಭಾನುವಾರ ಇಲ್ಲಿನ ಕಾಲಕಾಲೇಶ್ವರ ವೃತ್ತದಲ್ಲಿನ ಹೋಟೆಲ್ ಮುಂಭಾಗದಲ್ಲಿ ಸೌದೆಒಲೆ ಮೇಲೆ ಅಡುಗೆ ಮಾಡುತ್ತಿದ್ದಾರೆ.

ಮಧ್ಯಪ್ರಾಚ್ಯದ ಸಂಘರ್ಷದ ಹಿನ್ನೆಲೆ ಅನಿಲ ಪೂರೈಕೆಯಲ್ಲಿ ತೊಂದರೆಯಾಗುತ್ತಿರುವ ಪರಿಣಾಮ ಬಡವರಿಗೆ ಹಾಗೂ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಆಹಾರ ಪೂರೈಸುತ್ತಿರುವ ಬಹುತೇಕ ಬೀದಿಬದಿ ಹೊಟೇಲ್‌ಗಳಲ್ಲಿಯೂ ಬೆಲೆ ಏರಿಕೆ ಬಿಸಿ ಕಂಡುಬಂದಿದೆ. ಪರಿಣಾಮ ಚಹಾದಿಂದ ಹಿಡಿದು ಪ್ರತಿಯೊಂದು ಫಲಾಹಾರದ ಮೇಲೆ ₹೧ರಿಂದ ₹೫ ಬೆಲೆ ಏರಿಕೆ ಮಾಡಿದ್ದಾರೆ ಎಂಬುದು ಗ್ರಾಹಕರ ಗೋಳಾಗಿದೆ. ಜಿಲ್ಲೆಯ ವಾಣಿಜ್ಯ ನಗರಿ ಖ್ಯಾತಿಗೆ ಒಳಪಟ್ಟಿರುವ ಪಟ್ಟಣಕ್ಕೆ ಸುತ್ತಲಿನ ಗ್ರಾಮಗಳ ನೂರಾರು ಜನರು ವ್ಯಾಪಾರ, ವಹಿವಾಟು ಸೇರಿ ಶಿಕ್ಷಣವನ್ನು ಅರಸಿ ಆಗಮಿಸುತ್ತಾರೆ. ದೊಡ್ಡ ಹೋಟೆಲ್‌ಗಳಲ್ಲಿನ ಬಿಲ್ ದೊಡ್ಡದಾಗಿರುವ ಪರಿಣಾಮ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನಸಾಮಾನ್ಯರಿಗೆ ಬೀದಿ ಬದಿಯಲ್ಲಿನ ಹೋಟೆಲ್‌ಗಳನ್ನು ನೆಚ್ಚಿಕೊಂಡಿದ್ದಾರೆ. ಆದರೆ ಈಗ ಗ್ಯಾಸ್ ಕೊರತೆ ಪರಿಣಾಮ ಪಟ್ಟಣದಲ್ಲಿನ ಬೀದಿಬದಿ ಹೋಟೆಲ್‌ಗಳಲ್ಲಿಯೂ ಬೆಲೆ ಏರಿಕೆ ಬಿಸಿ ಜನಸಾಮಾನ್ಯರಿಗೂ ತಟ್ಟಲಾರಂಭಿಸಿದೆ.ಪಟ್ಟಣದಲ್ಲಿ ಕಮರ್ಷಿಯಲ್ ಗ್ಯಾಸ್ ಬೆಲೆ ಹಿಂದೆ ₹೧೭೦೦ರಿಂದ ₹೧೯೦೦ ಸಿಗುತ್ತಿತ್ತು. ಆದರೆ ಗ್ಯಾಸ್ ಬೆಲೆ ₹೪ ಸಾವಿರಕ್ಕೂ ಅಧಿಕ ಬೆಲೆ ನಿಗದಿ ಪಡಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಅಷ್ಟೊಂದು ದುಡ್ಡು ಕೊಟ್ಟು ಗ್ಯಾಸ್ ಏಕೆ ಖರೀದಿಸಬೇಕು ಎಂದು ಕೆಲವರು ಗ್ಯಾಸ್ ಖರೀದಿಗೆ ಬಿಟ್ಟು, ಮಧ್ಯಾಹ್ನ ಹೋಟೆಲ್ ಬಂದ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಅನಿವಾರ‍್ಯ ಎಂದು ಖರೀದಿಸಿ ಒಂದು ಪ್ಲೇಟ್ ಪುರಿ ₹೨೫ ಇದ್ದುದ್ದನ್ನು ₹೩೦ ಮಾಡಿದ್ದಾರೆ.