ಸಾರಾಂಶ
ಯಾದಗಿರಿ ನಗರದ ಆಕಾಶ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಹುಬ್ಬಳ್ಳಿ ವಿಭಾಗೀಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಜಾವಳಗಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಜೆಗಳ ಆರ್ಥಿಕ ಸಬಲತೆಯಿಂದಲೇ ಭಾರತವು ಮುಂದುವರೆದ ರಾಷ್ಟ್ರವಾಗಿದೆ. ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಪ್ರತಿಯೊಬ್ಬರು ಸಹ ಸೂಕ್ತ ಮಾರ್ಗದರ್ಶನ ಪಡೆದು, ಸದುಪಯೋಗ ಪಡೆದುಕೊಳ್ಳಬೇಕೆಂದು ಹುಬ್ಬಳ್ಳಿ ವಿಭಾಗೀಯ ಸಹಾಯಕ ನಿರ್ದೇಶಕರಾದ ಬಿ.ಎಸ್. ಜಾವಳಗಿ ಹೇಳಿದರು.ನಗರದ ಆಕಾಶ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾರತದ ಬಹುದೊಡ್ಡ ಆರ್ಥಿಕ ವಲಯವೆನ್ನಿಸಿರುವ ಮೈಕ್ರೋ ಸ್ಮಾಲ್ ಅಂಡ್ ಮಿಡಿಯಮ್ ಎಂಟರ್ ಪ್ರೆಸಸ್ ವತಿಯಿಂದ ನಡೆದ ಕೌಶಲ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಮಹತ್ತರ ಆರ್ಥಿಕ ಸ್ಥಾನ ಹೊಂದುತ್ತಿದೆ ಎಂದರು.
ಎಸ್ಬಿಐ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ತರಬೇತಿದಾರ ಸಂಗಪ್ಪ ವಾಲಿ ಮಾತನಾಡಿ, ಆರ್ಥಿಕ ದೃಷ್ಟಿಯಿಂದ ಬಂಡವಾಳ ಪಡೆಯುವ ಮೂಲಕ ಉದ್ಧಿಮೆಗಳನ್ನು ಪ್ರಾರಂಭಿಸಲು ಅವಶ್ಯವಿರುವ ಸಾಲ ಸೌಲಭ್ಯಗಳ ಕುರಿತಾಗಿ ಹಾಗೂ ಕೇಂದ್ರ ಸರ್ಕಾರ ರೂಪಿಸಿರುವ ಜೀವ ವಿಮೆಗಳ ಕುರಿತು ಪರಿಚಯ ಮಾಡಿಕೊಟ್ಟರು.ಸೈಬರ್ ಕ್ರೈಮ್ಗಳು ಅಧಿಕವಾಗುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಗ್ರಾಹಕರು ಅತ್ಯಂತ ಜಾಗರೂಕತೆಯಿಂದ ತಮ್ಮ ಬ್ಯಾಂಕಿಂಗ್ ವ್ಯವಹಾರ ಕೈಗೊಳ್ಳುವುದು ಅವಶ್ಯವಾಗಿದೆ ಎಂದರು.
ವೇದಿಕೆಯಲ್ಲಿ ಹುಬ್ಬಳ್ಳಿ ವಿಭಾಗದ ಎಚ್.ಕೆ. ನಾಯಕ, ತಂಬಾಕು ನಿಷೇಧ ಜಾಗೃತಿ ಜಿಲ್ಲಾ ಆರೋಗ್ಯ ಇಲಾಖೆ ಮಹಾಲಕ್ಷ್ಮಿ ಸಜ್ಜನ್, ಶಶಿಕುಮಾರ, ಸತೀಶ ಕುಮಾರ ದುಪ್ಪಲ್ಲಿ, ಬನ್ನಪ್ಪ ಸಜ್ಜನ್, ಸಿಬ್ಬಂದಿ ಸಿದ್ದಮ್ಮ ಎಸ್. ದುಪ್ಪಲ್ಲಿ, ರೇಣುಕಾ ಸೇರಿ ಇತರರಿದ್ದರು. ನಿವೃತ್ತ ಶಿಕ್ಷಕ ಸಿದ್ರಾಮಪ್ಪ ದುಪ್ಪಲ್ಲಿ ವಂದಿಸಿದರು. ಉಪನ್ಯಾಸಕರಾದ ಗುರುಪ್ರಸಾದ್ ವೈದ್ಯ ನಿರೂಪಿಸಿದರು.