ವಚನ ಸಾಹಿತ್ಯವೆಂಬುದು ಅರಿವಿನ ಮಹಾಮನೆ-ಶಿವಯೋಗೀಶ್ವರ ಸ್ವಾಮೀಜಿ

| Published : Sep 03 2024, 01:43 AM IST

ವಚನ ಸಾಹಿತ್ಯವೆಂಬುದು ಅರಿವಿನ ಮಹಾಮನೆ-ಶಿವಯೋಗೀಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ವಚನ ಸಾಹಿತ್ಯವೆಂಬುದು ಅರಿವಿನ ಮಹಾಮನೆ, ಸಾರ್ಥಕ ಸಂದೇಶಗಳ ಮೂಲಕ ವಿಶ್ವ ಸಾಹಿತ್ಯಕ್ಕೆ ಶರಣರ ಮಹತ್ತರ ಕೊಡುಗೆ ಇದಾಗಿದೆ ಎಂದು ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದರು.

ಹಾನಗಲ್ಲ: ವಚನ ಸಾಹಿತ್ಯವೆಂಬುದು ಅರಿವಿನ ಮಹಾಮನೆ, ಸಾರ್ಥಕ ಸಂದೇಶಗಳ ಮೂಲಕ ವಿಶ್ವ ಸಾಹಿತ್ಯಕ್ಕೆ ಶರಣರ ಮಹತ್ತರ ಕೊಡುಗೆ ಇದಾಗಿದೆ ಎಂದು ಬೊಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಗಳು ತಿಳಿಸಿದರು.ಭಾನುವಾರ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದಲ್ಲಿ ಆಯೋಜಿಸಿದ ಹಾನಗಲ್ಲ ತಾಲೂಕು ಮಟ್ಟದ ವಚನಗಳ ಕಂಠಪಾಠ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ಶರಣರನ್ನು ಜಾತಿಗೆ ಕಟ್ಟುವ ಕೆಲಸದಿಂದ ಮುಕ್ತಿ ಸಿಗಬೇಕಾಗಿದೆ. ಗುಣವುಳ್ಳವರ ನಿಜ ಧರ್ಮ ಪ್ರತಿಪಾದನೆ ಮಾಡಿರುವ ವಚನಕಾರರು ಮಾನಸಿಕ ಲೋಪಗಳನ್ನು ಸರಿಪಡಿಸಿ ಸತ್ಸಮಾಜ ನಿರ್ಮಾಣಕ್ಕೆ ಬೇಕಾಗುವ ಸರಳ ಸಂದೇಶಗಳನ್ನು ನೀಡಿದ್ದಾರೆ. ವಚನಗಳು ಕೇವಲ ಬೋಧನೆಗಳಲ್ಲ ನುಡಿದಂತೆ ನಡೆದ ಅಮೃತ ನುಡಿಗಳು. ಈಗ ವಚನ ಸಾಹಿತ್ಯವನ್ನು ಇಡೀ ವಿಶ್ವವೇ ಒಪ್ಪಿ ಆಚರಿಸಲು ಮುಂದಾಗಿದೆ. ಆದರೆ ವಚನ ಸಾಹಿತ್ಯ ಬೆಳೆದ ನಾಡಿನಲ್ಲಿ ಅದಕ್ಕೆ ಅನಾದರ ಸಲ್ಲದು. ಈಗಲಾದರೂ ವಚನಗಳನ್ನು ನಮ್ಮ ಮನೆ ಮನದ ಸಾಹಿತ್ಯವಾಗಿ ಸ್ವೀಕರಿಸೋಣ. ಜಾತಿ ಮತದ ಕಟ್ಟಳೆ ಮೀರಿ ವಚನ ಸಾಹಿತ್ಯದ ಬೆಳಕನ್ನು ಬೆಳಗೋಣ ಎಂದರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ವಚನಗಳನ್ನು ಬರಿ ಸಾಹಿತ್ಯಾವಾಗಿಯಲ್ಲದೆ ಜೀವನ ಸಂದೇಶವಾಗಿ ಸ್ವೀಕರಿಸಬೇಕಾಗಿದೆ. ಮಕ್ಕಳಲ್ಲಿ ಈಗಲೇ ವಚನ ಸಾಹಿತ್ಯದ ಅರಿವು ಅದರ್ಶಗಳನ್ನು ಬಿತ್ತಲು ಸಾಧ್ಯವಾದರೆ ನಾಳೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ದೊಡ್ಡ ಅಡಿಗಲ್ಲಾಗಲು ಸಾಧ್ಯ. ಅತ್ಯಂತ ಸರಳ ಹಾಗೂ ಸುಲಭವಾಗಿ ಅರ್ಥವಾಗುವ ವಚನಗಳು ಸತ್ಯನಿಷ್ಠೆ ಕಾಯದ ಧರ್ಮದ ಮೂಲ ತತ್ವಗಳನ್ನು ಪ್ರತಿಪಾದಿಸಿದೆ. ಅಂತಃಕರಣದ ಪ್ರೀತಿ ಗೌರವಗಳು ಅಂತರಂಗ ಶುದ್ಧಿಯ ಶಕ್ತಿ ಸಾಹಿತ್ಯ ವಚನಗಳಾಗಿವೆ ಎಂದರು.ಜಿಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ, ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ಎಂ.ಬಿ. ಹಳೆಮನಿ, ಎಫ್.ಸಿ. ಇಂದೂರ, ಡಾ.ಲತಾ ನಿಡಗುಂದಿ, ಡಾ.ಸುಮಂಗಲಾ ಅತ್ತಿಗೇರಿ, ಪ್ರತಿಭಾ ಗಾಂಧಿ, ಸಿದ್ದೇಶ್ವರ ಹುಣಸಿಕಟ್ಟಿ, ಶಿವಪ್ರಕಾಶ ಬಳಿಗಾರ, ನಿರಂಜನ ಗುಡಿ, ಶಿವಾನಂದ ಕ್ಯಾಲಕೊಂಡ, ಪ್ರದೀಪ ನೆಲವಿಗಿ, ಪ್ರವೀಣ ಸುಖಾಲೆ, ಮಲ್ಲಣ್ಣ ಹುಕ್ಕೇರಿ, ಲೋಕೇಶಣ್ಣ ಹೊಳಲದ, ಸುನಂದಾ ವಸ್ತ್ರದಮಠ, ಜಿ.ಸಿ.ಪಾಟೀಲ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿಜೇತರು: ಪ್ರೌಢಶಾಲಾ ವಿಭಾಗದಲ್ಲಿ ಬಮ್ಮನಹಳ್ಳಿ ಪ್ರಭಾಕರ ನೆಲವಿಗಿ ಶಾಲೆಯ ಫಿಜಾಅಂಜುಮ್ ಬುಕೆಟ್‌ಗಾರ ಪ್ರಥಮ, ಅಕ್ಕಿಆಲೂರು ಜ್ಞಾನಭಾರತಿ ಶಾಲೆಯ ಅಂಜಲಿ ಚಕ್ರಸಾಲಿ (ದ್ವಿತೀಯ), ಹಾನಗಲ್ಲ ಜನತಾ ಬಾಲಕಿಯರ ಪ್ರೌಢಶಾಲೆಯ ಅಪೇಕ್ಷಾ ಪಿಸೆ (ತೃತೀಯ) ಬಹುಮಾನ ಪಡೆದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಕ್ಕಿಆಲುರು ಜ್ಞಾನಭಾರತಿ ಶಾಲೆಯ ಕೆ.ಬಿ.ಅನ್ವಿತಾ (ಪ್ರಥಮ), ಶ್ರಾವಣಿ ಕೋಟೆಣ್ಣನವರ (ದ್ವಿತೀಯ), ಅಕ್ಕಾಲೂರು ಚನ್ನವೀರೇಶ್ವರ ಗ್ರಾಮೀಣ ಗುರುಕುಲ ಶಾಲೆಯ ನಮೃತಾ ಗುಡದಳ್ಳಿ (ತೃತೀಯ) ಬಹುಮಾನ ಪಡೆದರು.