ಸಾರಾಂಶ
ರಟ್ಟೀಹಳ್ಳಿ: ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿಯವರು ತಮ್ಮ ರಾಮಾಯಣದ ಮೂಲಕ ಜೀವನದ ಮೌಲ್ಯವನ್ನು ಜಗತ್ತಿಗೆ ಸಾರಿದ ಮಹಾನ್ ದೈವಿ ಪುರುಷ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಮಂಜುನಾಥ ತಳವಾರ ಹೇಳಿದರು.
ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಾಯಕ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರು ಶ್ರೀ ರಾಮನ ಪರಮ ಭಕ್ತನಾಗಿದ್ದು, ಹಿಂದೂ ಪುರಾಣಗಳ ಪ್ರಕಾರ ವಾಲ್ಮೀಕಿ ಋಷಿ ಸೀತಾ ದೇವಿಯು ಅಯೋಧ್ಯೆ ರಾಜ್ಯವನ್ನು ತೊರೆದು ತನ್ನ ಪತಿಯೊಂದಿಗೆ ವನವಾಸಕ್ಕೆ ಕಾಡಿಗೆ ಹೋದಾಗ ಆಕೆಗೆ ಆಶ್ರಯ ನೀಡಿದ ವ್ಯಕ್ತಿ ಹಾಗೂ ಸೀತಾ ದೇವಿಯು ವಾಲ್ಮೀಕಿ ಕುಟೀರದಲ್ಲೇ ಲವ ಕುಶರಿಗೆ ಜನ್ಮ ನೀಡಿದ್ದು, ಅಂತಹ ಮಹಾನ್ ಪುರುಷ ಆದಿಕವಿ ವಾಲ್ಮೀಕಿಯವರು ನಡೆದು ಬಂದ ಹಾದಿ ಅವರ ಜೀವನ ಪದ್ಧತಿ ನಮಗೆ ದಾರಿ ದೀಪವಾಗಿದೆ ಎಂದರು.ವಾಲ್ಮೀಕಿ ಜನಾಗಂದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ನಮ್ಮ ಸಮಾಜದ ಮಕ್ಕಳನ್ನು ಮೊದಲು ಉತ್ತಮ ಶಿಕ್ಷಿತರಾಗುವಂತೆ ಮಾಡಿದರೆ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಕೆ. ಗುರುಬಸವರಾಜ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಶ್ರೇಷ್ಟ ಕವಿಗಳಾಗಿದ್ದು, ರಾಮಾಯಣದಂತ ಮಹಾನ್ ಕಾವ್ಯವನ್ನು ರಚಿಸುವ ಮೂಲಕ ಜಗತ್ತಿಗೆ ಕೊಡುಗೆ ನೀಡಿದ್ದು, ಅವರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.ಸಮಾಜ ಕಲ್ಯಾಣ ಅಧಿಕಾರಿ ಮೆಹಬೂಬ ಸಾಬ್ ನದಾಫ, ರಮೇಶ ಹೋಳಜೋಗಿ, ರಾಮಚಂದ್ರಪ್ಪ ವಾಲ್ಮೀಕಿ, ಅಶೋಕ ಹೆಡಿಯಾಳ, ಮಾರುತಿ ವಾಲ್ಮೀಕಿ, ರವಿ ಹದಡೇರ, ಮಂಜು ತಳವಾರ, ಸುನೀಲ ನಾಯಕ, ಆರ್.ವಿ ಕಿರಣಕುಮಾರ, ಮಂಜು ಅಡ್ಮನಿ, ಕರಬಸ್ಸು ನಾಗೇನಹಳ್ಳಿ, ಮಂಜುನಾಥ ಬಳ್ಳಾರಿ, ಸುರೇಶ ನಾಯಕ, ಮಹೇಶ ಮೆದೂರ, ರವಿ ಮುದ್ದಳ್ಳಿ, ಹರೀಶ ಚಿಕ್ಕಯಡಚಿ, ಕಂಡೋಬ ಅಡ್ಮನಿ, ಮಾರುತಿ ಜೋಕನಾಳ, ನಾಗರಾಜ ಬಳ್ಳಾರಿ, ಹರೀಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಪಟ್ಟಣ ಪಂಚಾಯತ್-ಮಹರ್ಷಿ ವಾಲ್ಮೀಕಿಯವರು ಕೇವಲ ಒಂದೇ ಸಮಾಜಕ್ಕೆ ಮೀಸಲಾಗದೆ ಸರ್ವ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ಖುಷಿಗಳು, ಜಗತ್ತಿಗೆ ರಾಮಾಯಣದಂತ ಮಹಾನ್ ಗ್ರಂಥ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಪಟ್ಟಣ ಪಂಚಾಯತ್ ಸಿಬ್ಬಂದಿ ರಾಜಕುಮಾರ ಹೇಂದ್ರೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಪಟ್ಟಣ ಪಂಚಾಯತ್ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಮಾತನಾಡಿದರು.ಪರಮೇಶಪ್ಪ ಅಂತರವಳ್ಳಿ, ಪಿ.ಆರ್. ಮಲ್ಲನಗೌಡ್ರ, ನಿಖಿಲ್ ಅರ್ಕಾಚಾರಿ, ಸಂತೋಷ ಬಿಳಚಿ, ಬಸವರಾಜ ಚಲವಾದಿ ಮುಂತಾದವರು ಇದ್ದರು.