ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಕೃಪೆ ತೋರಿದ ವರುಣ

| Published : May 20 2025, 01:02 AM IST

ಸಾರಾಂಶ

ಪೂರ್ವ ಮುಂಗಾರಿನಲ್ಲಿ ಗದಗ ಜಿಲ್ಲೆಯ ಎಲ್ಲೆಡೆ ವರುಣನ ಕೃಪೆಯಾಗಿದ್ದು, ಕಳೆದ ಮಾ. 1ರಿಂದ ಮೇ 17ರ ವರೆಗೆ ಸರಾಸರಿ 68 ಮಿ.ಮೀ ವಾಡಿಕೆ ಮಳೆಗೆ 102 ಮಿ.ಮೀ.ಯಷ್ಟು ಮಳೆಯಾಗಿದೆ.

ಗದಗ: ಪೂರ್ವ ಮುಂಗಾರಿನಲ್ಲಿ ಗದಗ ಜಿಲ್ಲೆಯ ಎಲ್ಲೆಡೆ ವರುಣನ ಕೃಪೆಯಾಗಿದ್ದು, ಕಳೆದ ಮಾ. 1ರಿಂದ ಮೇ 17ರ ವರೆಗೆ ಸರಾಸರಿ 68 ಮಿ.ಮೀ ವಾಡಿಕೆ ಮಳೆಗೆ 102 ಮಿ.ಮೀ.ಯಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮೆಕ್ಕೆ ಜೋಳ 1.15 ಲಕ್ಷ ಹೆ., 1.33 ಲಕ್ಷ ಹೆ. ಹೆಸರು, 21000 ಹೆ. ಶೇಂಗಾ, 7500 ಹೆ. ಸೂರ್ಯಕಾಂತಿ ಹಾಗೂ 17000 ಹೆ. ಹತ್ತಿ ಸೇರಿದಂತೆ ಒಟ್ಟು 3.06ಲಕ್ಷ ಹೆ. ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿ ಇದೆ.2025-26ರ ಮುಂಗಾರು ಹಂಗಾಮಿಗೆ ಹೆಸರು, ಜೋಳ, ಶೇಂಗಾ, ಹೈ.ಹತ್ತಿ ಸೇರಿದಂತೆ ವಿವಿಧ ಬೆಳೆಗಳ 6000 ಕ್ವಿಂ. ಬಿತ್ತನೆ ಬೀಜದ ಅವಶ್ಯಕತೆ ಇದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೇ.26 ರಿಂದ ವಿತರಣೆ ಪ್ರಾರಂಭಿಸಲು ಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 59205 ಮೆ.ಟನ್‌ಗಳಷ್ಟು ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು, 13582 ದಾಸ್ತಾನು ಇದೆ. ಹಂಗಾಮಿನಲ್ಲಿ ರಸಗೊಬ್ಬರ ಕೊರತೆಯಾಗದಂತೆ ವಿವಿಧ ರಸಗೊಬ್ಬರ ಸರಬರಾಜು ಸಂಸ್ಥೆಗಳೊಂದಿಗೆ ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

ರೈತರಿಗೆ ಗುಣಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಲಭ್ಯತೆಯನ್ನು ಖಚಿತಪಡಿಸಲು ಕೃಷಿ ಇಲಾಖೆಯ ಅಧಿಕಾರಿಗಳು ಗುಣ ನಿಯಂತ್ರಣ ಅಭಿಯಾನವನ್ನು ಕೈಗೊಂಡು, ಸಹಕಾರ ಸಂಘಗಳಲ್ಲಿ, ಉತ್ಪಾದಕರಲ್ಲಿ, ಖಾಸಗಿ ಮಾರಾಟಗಾರರಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೀಡೆನಾಶಕ ಮಾದರಿಗಳನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ.

ರೈತರು ಬಿತ್ತನೆ ಬೀಜಗಳನ್ನು ಖರೀದಿಸುವಾಗ ಅಧಿಕೃತ ಮಾರಾಟಗಾರರಿಂದ, ರಸೀದಿ ಪಡೆದು ಖರೀದಿಸಲು ತಿಳಿಸಿದೆ. ಮಾರಾಟ ಪರವಾನಗಿ ಹೊಂದಿಲ್ಲದ, ಬಿಲ್ ನೀಡದಿರುವ ಯಾವುದೇ ಅನ್ಯ ವ್ಯಕ್ತಿಗಳಿಂದ ಬಿತ್ತನೆ ಬೀಜ ಖರೀದಿಸಬಾರದು. ಬಿಡಿ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಖರೀದಿ ಮಾಡಬಾರದು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗ್‌ಗಳನ್ನು ಬೆಳೆ ಕಟಾವು ಆಗುವವರೆಗೆ ಕಾಯ್ದಿಟ್ಟುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಬೆಳೆ ಹಾನಿ ಆದಾಗ ಮಾರಾಟಗಾರರು, ಉತ್ಪಾದಕರ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಬಹುದು.

ರೈತರು ಬಿತ್ತನೆ ಕೈಗೊಳ್ಳುವಾಗ ಬಿತ್ತನೆ ಬೀಜಗಳನ್ನು ಜೈವಿಕ ಗೊಬ್ಬರ, ಜೈವಿಕ ಪೀಡೆನಾಶಕ ಇತ್ಯಾದಿಗಳಿಂದ ಬೀಜೋಪಚಾರ ಕೈಗೊಂಡು ಬಿತ್ತುವುದು. ಇದರಿಂದ ಬೆಳೆಗಳಲ್ಲಿ ಕೀಟ ಮತ್ತು ರೋಗದ ಬಾಧೆ ಕಡಿಮೆಯಾಗಿ ಮುಂದೆ ಕೊಡಬಹುದಾದ ರಸಗೊಬ್ಬರಗಳ, ಪೀಡೆನಾಶಕಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಬಹುದು. ರಸಗೊಬ್ಬರ ಹಾಗೂ ಪೀಡೆನಾಶಕಗಳ ಬಳಕೆಗಾಗಿ ಮಾಡುವ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ. ಗುಣಮಟ್ಟದ ಉತ್ಪಾದಕತೆಯನ್ನು ಪಡೆಯಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.