ಸಾರಾಂಶ
ತಾಲೂಕು ಕೇಂದ್ರದಿಂದ ೧೪ ಕಿ.ಮೀ. ದೂರದಲ್ಲಿರುವ ವಜ್ರಬಂಡಿ ಗ್ರಾಮದ ಜಾನುವಾರುಗಳಿಗೆ ತೊಂದರೆಯಾದರೆ ಯಲಬುರ್ಗಾ ಪಟ್ಟಣಕ್ಕೆ ತೆರಳಬೇಕಾಗಿತ್ತು. ಇದೀಗ ಆ ಸಂಕಷ್ಟ ತಪ್ಪಲಿದೆ.
ಪಾಲಾಕ್ಷ ಬಿ ತಿಪ್ಪಳ್ಳಿ
ಯಲಬುರ್ಗಾ:ರಾಜ್ಯದಲ್ಲಿ ೫೦ ನೂತನ ಪಶು ಚಿಕಿತ್ಸಾಲಯ ಪ್ರಾರಂಭಿಸುವ ಯೋಜನೆಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಇದರಲ್ಲಿ ತಾಲೂಕಿನ ವಜ್ರಬಂಡಿ ಗ್ರಾಮವು ಒಂದಾಗಿದೆ. ಇದರಿಂದ ಈ ಭಾಗದ ರೈತರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ತಾಲೂಕು ಕೇಂದ್ರದಿಂದ ೧೪ ಕಿ.ಮೀ. ದೂರದಲ್ಲಿರುವ ವಜ್ರಬಂಡಿ ಗ್ರಾಮದ ಜಾನುವಾರುಗಳಿಗೆ ತೊಂದರೆಯಾದರೆ ಯಲಬುರ್ಗಾ ಪಟ್ಟಣಕ್ಕೆ ತೆರಳಬೇಕಾಗಿತ್ತು. ಇದೀಗ ಆ ಸಂಕಷ್ಟ ತಪ್ಪಲಿದೆ. ಚಿಕಿತ್ಸಾಲಯ ಆರಂಭವಾದರೆ ವಜ್ರಬಂಡಿ ವ್ಯಾಪ್ತಿಯ ಕೋನಸಾಗರ, ಚಿಕ್ಕಬನ್ನಿಗೋಳ, ಚಿಕ್ಕಬನ್ನಿಗೋಳ ತಾಂಡಾ, ದಮ್ಮೂರು, ಜಿ. ಜರಕುಂಟಿ, ಮದ್ಲೂರು, ತಲ್ಲೂರು, ಸಾಲಭಾವಿ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಈ ಭಾಗದಲ್ಲಿ ೩೦೦೦ ರಾಸು, ೧೫ ಸಾವಿರ ಕುರಿ, ಮೇಕೆ ಇರುವ ಬಗ್ಗೆ ಪಶು ಇಲಾಖೆ ಮಾಹಿತಿ ನೀಡಿದೆ.ಸಿಎಂ ಆರ್ಥಿಕ ಸಲಹೆಗಾರ ಹಾಗೂ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಯಲಬುರ್ಗಾ ತಾಲೂಕಿನ ವಜ್ರಬಂಡಿ, ಕುಕನೂರು ತಾಲೂಕಿನ ರಾಜೂರು ಗ್ರಾಮಕ್ಕೆ ಪಶು ಆಸ್ಪತ್ರೆ ಅವಶ್ಯವಿರುವ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಅದರಲ್ಲಿ ತಾಲೂಕಿನ ವಜ್ರಬಂಡಿ ಗ್ರಾಮಕ್ಕೆ ಮಂಜೂರಾಗಿದ್ದು, ಮುಂದಿನ ತಿಂಗಳಿಂದ ಕೇಂದ್ರ ಕಾರ್ಯಾರಂಭ ಮಾಡಲಿದೆ. ಲಭ್ಯವಿರುವ ಕಟ್ಟಡದಲ್ಲಿ ಆಸ್ಪತ್ರೆ ತೆರೆಯಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದಿದ್ದು, ಸರ್ಕಾರ ಆಸ್ಪತ್ರೆ ಘಟಕ ವೆಚ್ಚಕ್ಕೆ ₹ ೧೦ ಲಕ್ಷ ಅನುದಾನ ಘೋಷಿಸಿದೆ.ವಜ್ರಬಂಡಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಅದರಂತೆ ಸರ್ಕಾರ ರಾಜ್ಯಾದ್ಯಂತ ಒಟ್ಟು ೫೦ ಚಿಕಿತ್ಸಾಲಯ ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಅವುಗಳಲ್ಲಿ ವಜ್ರಬಂಡಿ ಒಂದಾಗಿದೆ. ಮುಂದಿನ ತಿಂಗಳಿಂದ ಆಸ್ಪತ್ರೆ ಕಾರ್ಯಾರಂಭ ಮಾಡಲಿದೆ. ಇದರಿಂದ ಆ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದ್ದಾರೆ.ಶಾಸಕ ಬಸವರಾಜ ರಾಯರಡ್ಡಿ ಅವರು ವಜ್ರಬಂಡಿ ಗ್ರಾಮಕ್ಕೆ ಪಶು ಚಿಕಿತ್ಸಾಲಯ ಅವಶ್ಯವಿರುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರ ಫಲವಾಗಿ ಚಿಕಿತ್ಸಾಲಯ ಮಂಜೂರಾಗಿದೆ. ಕೇಂದ್ರಕ್ಕೆ ಒಟ್ಟು ೯ ಹಳ್ಳಿಗಳು ಒಳಪಡುತ್ತವೆ. ನೂತನ ಚಿಕಿತ್ಸಾಲಯದಿಂದಾಗಿ ಈ ಭಾಗದ ರೈತರ ಬಹುದಿನಗಳ ಕನಸು ನನಸಾಗಿದೆ. ಇದರಿಂದ ತುಂಬಾ ಸಹಕಾರಿಯಾಗಲಿದೆ ಎಂದು ಯಲಬುರ್ಗಾ ಪಶುಪಾಲನಾ ಇಲಾಖೆಯ ನಿರ್ದೇಶಕ ಪ್ರಕಾಶ ಚೂರಿ ಹೇಳಿದರು.