ಮುಂಬರುವ ಹಿರಿಯೂರು ಉಪಚುನಾವಣೆ ಎದುರಿಸಲು ಬೂತ್ ಮಟ್ಟದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ಹೇಳಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಮುಂಬರುವ ಹಿರಿಯೂರು ಉಪಚುನಾವಣೆ ಎದುರಿಸಲು ಬೂತ್ ಮಟ್ಟದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಭಿನಂದನ್ ಹೇಳಿದರು.ತಾಲೂಕಿನ ಜೆಜಿ ಹಳ್ಳಿ, ದಿಂಡಾವರ, ಯರಬಳ್ಳಿ ಹಾಗೂ ನಗರ ಭಾಗದ ಬೂತ್ ಮಟ್ಟದ ಪದಾಧಿಕಾರಿಗಳ ಜೊತೆ ಚುನಾವಣಾ ತಯಾರಿ ಸಭೆ ನಡೆಸಿ ಅವರು ಮಾತನಾಡಿದರು.
ತಳಮಟ್ಟದಿಂದ ಸಂಘಟನೆಯಾದಾಗ ಮಾತ್ರ ಪಕ್ಷ ಬಲಗೊಂಡು ಎದುರಾಳಿ ಪಕ್ಷಗಳನ್ನು ಎದುರಿಸಬಹುದು. ಕಾರ್ಯಕರ್ತರಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ನೋಡಿಕೊಂಡು ಒಬ್ಬರಿಗೊಬ್ಬರು ಸಹಕರಿಸಿಕೊಂಡು ಪಕ್ಷದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸಂಘಟಿತರಾಗಬೇಕು. ಉಪಚುನಾವಣೆಯಲ್ಲಿ ನಮಗೆ ಅಭ್ಯರ್ಥಿ ಮುಖ್ಯವಲ್ಲ.ಯಾರೇ ಅಭ್ಯರ್ಥಿ ಇದ್ದರೂ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯೇ ಎಂದು ಅವರ ಗೆಲುವಿಗೆ ಶ್ರಮಿಸಬೇಕು ಎಂದರು.ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದರೂ ಕ್ಷೇತ್ರದಲ್ಲಿ ಯಾವುದೇ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ನಡೆದಿಲ್ಲ. ಕಲ್ವಳ್ಳಿ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು ರೈತರಿಗೆ ಹಾಗೂ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಸಮಸ್ಯೆ ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕ್ಷೇತ್ರದಲ್ಲಿ ಮಳೆ ಇಲ್ಲದೆ ಬರಗಾಲ ಆವರಿಸಿದ್ದು ಇಲ್ಲಿನ ಜನರ ಹಿತ ಕಾಪಾಡಬೇಕಿದ್ದ ಸರ್ಕಾರ ಕಾಲಹರಣ ಮಾಡುತ್ತಿದೆ. ಕಸಬಾ ಹಾಗೂ ಐಮಂಗಲ ಹೋಬಳಿಯಲ್ಲಿ ನೆಪಮಾತ್ರಕ್ಕೆ ರಸ್ತೆ ಬದಿಯ ಜಮೀನುಗಳಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಜೆಜಿ ಹಳ್ಳಿ ಭಾಗದಲ್ಲೂ ಬರ ಅಧ್ಯಯನ ಮಾಡಿದ್ದರೆ ಆ ಭಾಗದ ರೈತರ ಸಮಸ್ಯೆಗಳ ವಾಸ್ತವಾಂಶ ಸರ್ಕಾರಕ್ಕೆ ತಿಳಿಯುತ್ತಿತ್ತು. ತಾಲೂಕಿನ ಯಾವುದೋ ಒಂದು ಭಾಗದ ಒಂದೆರಡು ರೈತರ ಜಮೀನುಗಳಲ್ಲಿ ಮಾತ್ರ ಬರ ಅಧ್ಯಯನ ನಡೆಸಿ ಪ್ರಚಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಬಿಜೆಪಿ ಹಿರಿಯ ಮುಖಂಡರಾದ ಎಂ ಎಸ್ ರಾಘವೇಂದ್ರ, ಹರ್ಷ,ಸೋಮಣ್ಣ,ಜೆ ಬಿ ರಾಜು,ಯೋಗೇಶ್,ನಿತಿನ್,ರಾಘವೇಂದ್ರ, ಚಂದ್ರಹಾಸ್, ಗೋಪಾಲ,ಮಂಜುನಾಥ್,ಕೃಷ್ಣ, ರಂಗಸ್ವಾಮಿ, ವೆಂಕಟೇಶ್, ಪದ್ಮ, ಶ್ರೀನಿವಾಸ್, ಗೀತಾ, ದೇವರಾಜ್ ಮುಂತಾದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.