ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ಭೂ ಸಂತ್ರಸ್ತರ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘವು ಹರಟಿ ಮತ್ತು ಅಬ್ಬಣಿ ಗ್ರಾಮಗಳಲ್ಲಿ ಅರಣ್ಯ ಇಲಾಖೆಯು ದೌರ್ಜನ್ಯದಿಂದ ಅಕ್ರಮವಾಗಿ ವಶಕ್ಕೆ ಪಡೆದಿದ್ದ ಭೂಮಿಯ ವಿರುದ್ಧ ನಡೆಸಿದ ಹೋರಾಟಕ್ಕೆ ಜಯ ಸಂದಿದೆ ಎಂದು ಸಿ.ಪಿ.ಎಂ. ಜಿಲ್ಲಾ ಸಂಚಾಲಕ ಗೋಪಾಲ್ ಹರ್ಷ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಹೋರಾಟದಿಂದಾಗಿ ಸತ್ಯಕ್ಕೆ ಜಯ, ೨೦೨೪ರ ಫೆಬ್ರವರಿಯಲ್ಲಿ ಅರಣ್ಯ ಇಲಾಖೆಯು ರೈತರ ಜಮೀನುಗಳನ್ನು ಒತ್ತುವರಿ ಮಾಡಿ ಕೋಟ್ಯಂತರ ರು. ಬೆಳೆ, ಮರಗಿಡಗಳು, ಆಸ್ತಿಪಾಸ್ತಿ ನಾಶಪಡಿಸಿತು ಎಂದರು.

ಅರಣ್ಯ ಇಲಾಖೆ ಸಮರ್ಪಕವಾದ ದಾಖಲೆಗಳಿಲ್ಲದೆಯೇ ರೈತರ ಮೇಲೆ ದೌರ್ಜನ್ಯ ಎಸಗಿ, ಬೆದರಿಕೆ ಹಾಕಿ ಹಲವಾರು ವರ್ಷದಿಂದ ಸ್ವಾಧೀನದಲ್ಲಿದ್ದ ಸರ್ಕಾರದಿಂದ ಮಂಜೂರಾಗಿದ್ದ, ಬೇರೆಯವರಿಂದ ಖರೀದಿ ಮಾಡಿದ್ದ ಜಮೀನನ್ನು ಅರಣ್ಯ ಇಲಾಖೆಗೆ ಸೇರಿದ್ದು ಒತ್ತುವರಿ ಮಾಡಿದ್ದೀರಿ ಎಂದ ಆರೋಪಿಸಿ ರಾತ್ರೋರಾತ್ರಿ ಪೊಲೀಸರೊಡನೆ ಆಗಮಿಸಿ ಧಮಕಿ ಹಾಕಿ ರೈತರ ಜಮೀನುಗಳನ್ನು ವಶಕ್ಕೆ ಪಡೆಯಿತು. ಇದರ ವಿರುದ್ಧ ರೈತರು ನಿರಂತರ ಹೋರಾಟ ಮಾಡಿ ತಾರ್ಕಿಕ ಹಂತ ತಲುಪಲಾಯಿತು.ದಾಖಲೆಗಳ ಪ್ರಕಾರವೇ ೧೯೪೧ರಲ್ಲಿ ೪೦೯ ಎಕರೆ ೩೫ ಗುಂಟೆ ಜಮೀನು ಇದ್ದು ಈಗಿನ ಸರ್ವೇ ಪ್ರಕಾರ ೫೯೧ ಎಕರೆ ೩ ಗುಂಟೆ ಜಮೀನು ಅಂದರೆ ಸುಮಾರು ೧೮೦ ಎಕರೆಯಷ್ಟು ಅರಣ್ಯ ಇಲಾಖೆ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಂತಾಗಿದೆ ಎಂದು ಎ.ಡಿ.ಎಲ್.ಆರ್. ಸರ್ವೇ ಮಾಡಿರುವ ವರದಿ ಹಾಗೂ ನಕಾಶೆಗಳ ದಾಖಲೆಗಳ ಸಮೇತ ಪ್ರದರ್ಶಿಸಿದರು.

ಹೋರಾಟಕ್ಕೆ ಜಿಲ್ಲೆಯ ಶಾಸಕರಾದ ಕೊತ್ತೂರು.ಡಾ.ಜಿ. ಮಂಜುನಾಥ್, ಕೆ.ವೈ. ನಂಜೇಗೌಡ, ಎಸ್.ಎನ್. ನಾರಾಯಣಸ್ವಾಮಿ, ಎಂಎಲ್ಸಿಗಳಾದ ಅನಿಲ್ ಕುಮಾರ, ಇಂಚರ ಗೋವಿಂದರಾಜು ರೈತರ ಪರವಾಗಿ ಬೆಂಬಲ ನೀಡಿದ್ದಾರೆಂದು ತಿಳಿಸಿದರು. ಭೂ ಸಂತ್ರಸ್ತರ ಹೋರಾಟ ಸಮಿತಿಯ ಶ್ರೀನಿವಾಸ್ ಮಾತನಾಡಿ, ನಿರಂತರವಾದ ಹೋರಾಟ, ಕಚೇರಿಗಳಿಗೆ ಅಲೆದಾಟ, ರಾಜಕಾರಣಿಗಳಿಗೆ ಒತ್ತಡ, ಅಧಿಕಾರಿಗಳಿಗೆ ಒತ್ತಡ ಹೇರುವ ಮೂಲಕ ಮಾಡಿದ ಸಾಧನೆಗೆ ಪ್ರತಿಫಲ ಸಿಕ್ಕಿದಂತಾಗಿದೆ. ಜಿಲ್ಲಾಧಿಕಾರಿಗಳು ನಮ್ಮ ಹೋರಾಟದ ಪ್ರಯತ್ನಗಳಿಗೆ ಕಾನೂನಿನಡಿಯಲ್ಲಿ ನೀಡಿದ ಮಾರ್ಗದರ್ಶನವು ನಮ್ಮನ್ನು ಉತ್ತೇಜಿಸಿ ಸರ್ಕಾರದಿಂದ ದಾಖಲೆಗಳನ್ನು ಕ್ರೋಡೀಕರಿಸಲು ಪೂರಕವಾದವು ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಸೂರ್‍ಯನಾರಾಯಣ, ಪ್ರಕಾಶ್, ಭಟ್ರಹಳ್ಳಿ ಮಂಜುನಾಥ್ ಇದ್ದರು.