ಸಾರಾಂಶ
ಪ್ರಸ್ತುತ ವ್ಯವಹಾರಗಳೆಲ್ಲವು ಕೃತಕ ಬುದ್ಧಿಮತ್ತೆಯನ್ನು ಅನುಸರಿಸುತ್ತಿದ್ದು, ಮಾನವ ಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದಂತಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ವಾಣಿಜ್ಯ ಮತ್ತು ನಿರ್ವಹಣಾ ಪದವೀಧರರಿಗೆ ಉನ್ನತ ವಾಣಿಜ್ಯ ಸಂಸ್ಥೆಗಳಲ್ಲಿ ಉತ್ತಮವಾದ ಉದ್ಯೋಗವಕಾಶಗಳು ಲಭ್ಯವಿದ್ದು, ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿರುವ ವಿಷಯಗಳ ಮೇಲೆ ಉತ್ತಮ ಹಿಡಿತ ಹೊಂದಿದ್ದರೆ ಅಂತಹವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ಕಾಸ್ಮಿಕ್ ಐಟಿ ಸರ್ವಿಸ್ ಪ್ರೈ.ಲಿ. ಉಪಾಧ್ಯಕ್ಷ ಕೆ. ಸಂತೋಷ್ ಕುಮಾರ್ ತಿಳಿಸಿದರು.ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ಹಳೆಯ ವಿದ್ಯಾರ್ಥಿ ಸಂಘ, ಕೆರಿಯರ್ ಗೈಡೆನ್ಸ್ ಮತ್ತು ಪ್ಲೇಸ್ಮೆಂಟ್ ಸೆಲ್ ಸಂಯುಕ್ತವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಪ್ರಸ್ತುತ ವ್ಯವಹಾರಗಳೆಲ್ಲವು ಕೃತಕ ಬುದ್ಧಿಮತ್ತೆಯನ್ನು ಅನುಸರಿಸುತ್ತಿದ್ದು, ಮಾನವ ಶಕ್ತಿಗೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದಂತಾಗಿದೆ ಎಂದರು.ಹೀಗಾಗಿ, ಪ್ರತಿ ವಿದ್ಯಾರ್ಥಿಗಳು ತಮ್ಮ ವಿಷಯಗಳ ಜೊತೆಗೆ ಹೆಚ್ಚಿನ ಆಸಕ್ತಿ ವಹಿಸಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೌಶಲ್ಯಭರಿತರಾದರೆ ಎಚ್ಆರ್ ನಂತಹ ಉದ್ಯೋಗಗಳು ಹೆಚ್ಚೆಚ್ಚು ಲಭಿಸುತ್ತವೆ. ಕಾರ್ಪೊರೇಟ್ ಲಾಭದಂತಹ ಹಲವು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಅಧ್ಯಯನ ಮಾಡಿದರೆ, ಕಾರ್ಪೊರೇಟ್ ಜಗತ್ತಿನಲ್ಲಿ ಉತ್ತಮ ಅವಕಾಶಗಳು ಲಭಿಸುತ್ತವೆ ಎಂದು ಅವರು ಹೇಳಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಮರೀಗೌಡ ಅಧ್ಯಕ್ಷತೆ ವಹಿಸಿದ್ದರು. ಶಶಿಧರ್ ಸ್ವಾಗತಿಸಿದರು. ಎಂ. ಹರ್ಷಿತ್ ನಿರೂಪಿಸಿದರು. ಎಂ.ಎಸ್. ಮೇಘನಾ ವಂದಿಸಿದರು.