ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮನೋಭಾವ ಉತ್ತೇಜಿಸಲು ವಿಜಯ ರಿಸರ್ಚ್ ಕೇಂದ್ರ

| Published : Aug 07 2024, 01:00 AM IST

ಸಾರಾಂಶ

ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಮನೋಭಾವವನ್ನು ಉತ್ತೇಜಿಸಲು, ವಿಜಯ ಶಾಲೆಯಲ್ಲಿ ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿ ವಿಜಯ ರಿಸರ್ಚ್ ಸೆಂಟರ್ ಅನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿ ಮತ್ತು ಶೈಕ್ಷಣಿಕ ಮುಖ್ಯಸ್ಥರಾದ ಡಾ. ಎಸ್. ಶ್ರೀಲಕ್ಷ್ಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಮನೋಭಾವವನ್ನು ಉತ್ತೇಜಿಸಲು, ವಿಜಯ ಶಾಲೆಯಲ್ಲಿ ೨೦೨೩-೨೪ರ ಶೈಕ್ಷಣಿಕ ವರ್ಷದಲ್ಲಿ ವಿಜಯ ರಿಸರ್ಚ್ ಸೆಂಟರ್ ಅನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಪ್ರಾರಂಭಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ತಾರಾ ಎಸ್. ಸ್ವಾಮಿ ಮತ್ತು ಶೈಕ್ಷಣಿಕ ಮುಖ್ಯಸ್ಥರಾದ ಡಾ. ಎಸ್. ಶ್ರೀಲಕ್ಷ್ಮಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಶೈಕ್ಷಣಿಕ ವರ್ಷದಲ್ಲಿ ವಿ-ರಿಸರ್ಚ್ ಸೆಂಟರ್ ಅನ್ನು ಪ್ರಾರಂಭಿಸಲಾಗಿದ್ದು, ಈ ಸಂಶೋಧನಾ ಕೇಂದ್ರದ ಮೊದಲ ಪ್ರಾಜೆಕ್ಟ್ ಎಂದರೆ ಪ್ರೌಢಶಾಲಾ ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆಗಳ ಬಗ್ಗೆ ನಮ್ಮ ರಾಜ್ಯದಲ್ಲಿ ನಡೆಸಿದ ಮೊದಲ ಅಧ್ಯಯನ ಇದಾಗಿದೆ. ಎಲ್ಲಾ ಕ್ಷೇತ್ರದಲ್ಲೂ ಒಂದು ರೀತಿ ವ್ಯತ್ಯಾಸವಿದ್ದು, ಮುಂದಿನ ಕ್ಷಣ ಯಾವ ಕ್ಷೇತ್ರದಲ್ಲಿ ಏನಾಗಬಹುದು ಎನ್ನುವ ಕಲ್ಪನೆ ಸಹ ನಮಗೆ ಇರುವುದಿಲ್ಲ. ಇಂತಹ ಕಾಲಘಟ್ಟದಲ್ಲಿ ಸುಸ್ಥಿರ ಸಮಾಜ ಅತ್ಯಂತ ಶೀಘ್ರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ಸಮಸ್ಯೆಗಳನ್ನು ಗುರುತಿಸುವ, ಸಮಸ್ಯೆಗಳನ್ನು ವಿಶ್ಲೇಷನೆ ಮಾಡುವ ಮನೋಭಾವವನ್ನು ಬೆಳೆಸಿದಲ್ಲಿ ಹಾಗೂ ಸುಸ್ಥಿರ ಸಮಾಜ ಮತ್ತು ದೇಶವನ್ನು ಕಟ್ಟುವ ಅವಶ್ಯಕತೆ ಬಗ್ಗೆ ಅರಿವನ್ನು ಮೂಡಿಸಿದರೇ ಸ್ವಲ್ಪವಾದರೂ ಧನಾತ್ಮಕ ಬದಲಾವಣೆಯನ್ನು ತರಬಹುದು. ಈ ಉದ್ದೇಶದಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿ ವಿಜಯ-ರಿಸರ್ಚ್ ಸೆಂಟರ್‌ ಅನ್ನು ತರಲಾಗಿದೆ ಎಂದರು. ಪ್ರೌಢಶಾಲಾ ವಿದ್ಯಾರ್ಥಿಗಳ ಈ ಸಂಶೋಧನೆಯಿಂದ ತಿಳಿದುಬಂದ ಅಂಶಗಳೆಂದರೇ ಶೇಕಡ ೩೦ರಷ್ಟು ವಿದ್ಯಾರ್ಥಿಗಳು (ಬಾಲಕರು ಮತ್ತು ಬಾಲಕಿಯರು) ವೈದ್ಯಕೀಯ ವಿಜ್ಞಾನದ ವಿಭಾಗದಲ್ಲಿ, ಶೇಕಡ ೨೧ (ಬಾಲಕರು ಮತ್ತು ಬಾಲಕಿಯರು) ರಷ್ಟು ಎಂಜಿನಿಯರಿಂಗ್ ವಿಭಾಗದಲ್ಲಿ ಆಸಕ್ತಿಯನ್ನು ಹೊಂದಿದ್ದರೆ, ಉಳಿದ ಸುಮಾರು ಶೇಕಡ ೫೦ ರಷ್ಟು ಮಕ್ಕಳು ವ್ಯವಹಾರ, ಹಣಕಾಸು ಮತ್ತು ಸಾರ್ವಜನಿಕ ಆಡಳಿತದಲ್ಲಿ ಒಲವು ಹೊಂದಿದ್ದಾರೆ. ಕೃಷಿ, ಕಲೆ, ಮಾನವಿಕ ಮತ್ತು ಕಾನೂನು ವಿಷಯಗಳಲ್ಲಿ ಅತಿ ಕಡಿಮೆ ಒಲವು ಹೊಂದಿದ್ದಾರೆ. ಶೇಕಡ ೩೦ ರಲ್ಲಿ ಶೇಕಡ ೨೩ರಷ್ಟು ವಿದ್ಯಾರ್ಥಿನಿಯರು ವೈದ್ಯಕೀಯ ವಿಜ್ಞಾನದ ವಿಭಾಗಕ್ಕೆ ಆದ್ಯತೆ ನೀಡಿದರೆ, ಶೇಕಡ ೨೧ರಲ್ಲಿ ಶೇಕಡ ೧೨ರಷ್ಟು ವಿದ್ಯಾರ್ಥಿಗಳು ಎಂಜಿನಿಯರಿಂಗ್ ವಿಭಾಗದ ಕಡೆಗೆ ಒಲವು ತೋರಿದ್ದಾರೆ. ವೃತ್ತಿಗಳ ಆಯ್ಕೆಯಲ್ಲಿ ವಿದ್ಯಾರ್ಥಿಗಳು ಪರಿಗಣಿಸಿದ ಒಂದು ಅಂಶ, ಶೇಕಡ ೩೭ರಷ್ಟು ಮಂದಿ ವೇತನ ಮತ್ತು ಆದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟಿದ್ದರೆ ಶೇಕಡ ೨೧ರಷ್ಟು ಮಂದಿ ತಮ್ಮ ವೈಯಕ್ತಿಕ ಆಸಕ್ತಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಎಂದರು.

ಈ ಸಂಶೋಧನೆಯು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾ ಕಾಲೇಜುಗಳಿಗೆ ಸುಸ್ಥಿರ ಸಮಾಜ ಮತ್ತು ಸುಸ್ಥಿರ ದೇಶವನ್ನು ಕಟ್ಟಲು ವಿವಿಧ ವೃತ್ತಿಗಳ ಅಗತ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿದೆ. ವಿದ್ಯಾರ್ಥಿಗಳ ವೃತ್ತಿ ಆಕಾಂಕ್ಷೆಗಳನ್ನು ಗುರುತಿಸಿ ಪ್ರೌಢಶಾಲಾ ಮಟ್ಟದಲ್ಲಿ ವೃತ್ತಿ ಕೌಶಲ ತರಬೇತಿಗಳನ್ನು ಪರಿಚಯಿಸುವ ಅಗತ್ಯವಿದೆ ಎಂದು ಒತ್ತಿ ಹೇಳುತ್ತದೆ. ಇಂತಹ ಸಂಶೋಧನೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಡೆದರೆ, ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಲ್ಲಿ ಹಲವು ವೃತ್ತಿ ಸಂಬಂಧಿತ ಕಾರ್ಯಕ್ರಮಗಳನ್ನು ಪರಿಚಯಿಸಲು ಬೇಕಾದಂತಹ ದತ್ತಾಂಶ (ಡೇಟಾ) ವನ್ನು ಒದಗಿಸುತ್ತವೆ. ಹಾಗೂ ಇದು ದೇಶಾದ್ಯಂತ ಕೌಶಲ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ಅಕಾಡೆಮಿಕ್ ಹೆಡ್ ಡಾ. ಎಸ್. ಶ್ರೀಲಕ್ಷ್ಮಿ ಇವರ ಮಾರ್ಗದರ್ಶನದಲ್ಲಿ ೨೦೨೩-೨೪ ಸಾಲಿನ ೧೦ನೇ ತರಗತಿಯ ವಿದ್ಯಾರ್ಥಿ ಹರಿಪ್ರಸಾದ್ ಮತ್ತು ಸಮೃದ್ಧಿ ವಿಜಯ ಶಾಲೆಯ ೨೦೨೩-೨೪ ಸಾಲಿನ ೧೦ನೇ ತರಗತಿಯ ವಿದ್ಯಾರ್ಥಿಗಳು. ಸಂಶೋಧನಾ ವಿಷಯವನ್ನು ಗುರುತಿಸುವುದು, ಪ್ರಶ್ನೆಗಳನ್ನು ರೂಪಿಸುವುದರ ಜೊತೆಗೆ ಸಂಬಂಧಿತ ಅಧ್ಯಯನಗಳನ್ನು ಪರಿಶೀಲಿಸುವುದು, ರಿಸರ್ಚ್ ಟೂಲ್ ಗಳನ್ನು ತಯಾರಿಸುವುದು, ದತ್ತಾಂಶವನ್ನು ಸಂಗ್ರಹಿಸುವುದು, ವಿಶ್ಲೇಷಿಸುವುದು ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವವರೆಗೆ ಸಂಪೂರ್ಣ ಸಂಶೋಧನಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಕೆ. ಹರಿಪ್ರಸಾದ್ ಇವರ ನಾಯಕತ್ವ ಗುಣ ಮತ್ತು ವಿಶ್ಲೇಷಣಾ ಕೌಶಲ ಶ್ಲಾಘನೀಯ. ಸಮೃದ್ಧಿ. ವಿ ದತ್ತಾಂಶ ವಿಶ್ಲೇಷಣೆ ಮಾಡುವುದರಲ್ಲಿ ಹೆಚ್ಚಿನ ಪರಿಣಿತಿಯನ್ನು ಹೊಂದಿದ್ದರು. ದೇಶಾದ್ಯಂತ ಈ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಹರಿಪ್ರಸಾದ್ ಒಬ್ಬರು ಎಂದರು.

ಹತ್ತು ತಿಂಗಳ ಅವಧಿಯಲ್ಲಿ, ನಮ್ಮ ಪ್ರೌಢಶಾಲಾ ವಿದ್ಯಾರ್ಥಿಗಳು ಸಂಶೋಧನೆ, ಸಂವಹನ ಮತ್ತು ನಾಯಕತ್ವ ಕೌಶಲಗಳನ್ನು ಬೆಳೆಸಿಕೊಳ್ಳುತ್ತಿರುವುದನ್ನು ನಾವು ಕಂಡೆವು. ಈ ಅಧ್ಯಯನವು ವಿದ್ಯಾರ್ಥಿಗಳ ಸಂಶೋಧನಾ ಕೌಶಲವನ್ನು ಹೆಚ್ಚಿಸುವ ಭರವಸೆಯನ್ನು ಮೂಡಿಸಿದೆ. ವಿದ್ಯಾರ್ಥಿಗಳ ಈ ಸಂಶೋಧನೆಯು ಶೈಕ್ಷಣಿಕ ಮ್ಯಾಗ್ಜಿನ್‌ಗಳಲ್ಲಿ ಪ್ರಕಟಣೆಗೊಳ್ಳುವ ನಿರೀಕ್ಷೆಯಲ್ಲಿದೆ. ವಿಜಯ ಶಾಲೆಯಲ್ಲಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಪೂರಕವಾದಂತಹ ಸಂಶೋಧನೆಗೆ ಪೂರಕ ವಾತಾವರಣ ಬೆಳೆಸುವುದು, ವಿವಿಧ ಕ್ಷೇತ್ರಗಳಲ್ಲಿರುವ ತಜ್ಞರ ಸಹಯೋಗದೊಂದಿಗೆ ಸಂಶೋಧನೆಯನ್ನು ಮುಂದುವರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಿಜಯ ಶಾಲೆಯ ಸುಬ್ಬಸ್ವಾಮಿ, ವಿದ್ಯಾರ್ಥಿ ಹರಿಪ್ರಸಾದ್ ಇತರರು ಉಪಸ್ಥಿತರಿದ್ದರು.