ಸಾರಾಂಶ
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯಾವ್ಯಾಪಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರದ ಹಿನ್ನೆಲೆ ಇಲ್ಲಿನ ತಹಸಿಲ್ ಕಚೇರಿ ಮುಂದೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದು, ಮುಷ್ಕರ ೪ನೇ ದಿನಕ್ಕೆ ಕಾಲಿಟ್ಟಿದೆ.
ಕನ್ನಡಪ್ರಭ ವಾರ್ತೆ ಕನಕಗಿರಿ
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯಾವ್ಯಾಪಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಮುಷ್ಕರದ ಹಿನ್ನೆಲೆ ಇಲ್ಲಿನ ತಹಸಿಲ್ ಕಚೇರಿ ಮುಂದೆ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದು, ಮುಷ್ಕರ ೪ನೇ ದಿನಕ್ಕೆ ಕಾಲಿಟ್ಟಿದೆ.ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಶಿವರಾಜ್ ಭೋವಿ ಮಾತನಾಡಿ, ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ 2ನೇ ಹಂತದ ಮುಷ್ಕರ ಇದಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನವನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಬೇಕು.
ಅಂತರ್ ಜಿಲ್ಲಾ ವರ್ಗಾವಣೆ ಕೆಸಿಎಸ್ಆರ್ ನಿಯಮ ೧೬ಎ ಉಪಖಂಡ (೨)ನ್ನು ಮರು ಸ್ಥಾಪಿಸಬೇಕು. ಕೆಲಸ ನಿರ್ವಹಿಸುವಾಗ ಜೀವ ಹಾನಿಯಾದಲ್ಲಿ ಅವರ ಕುಟುಂಬಕ್ಕೆ ₹೫೦ ಲಕ್ಷ ಪರಿಹಾರ ನೀಡುವುದು ಸೇರಿ ನಾನಾ ಬೇಡಿಕೆಗಳಿಗಾಗಿ ೨೦೨೪ರ ಸೆಪ್ಟೆಂಬರ್ನಲ್ಲಿ ಮೊದಲ ಮುಷ್ಕರ ನಡೆಸಲಾಗಿತ್ತು. ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ ಕಂದಾಯ ಇಲಾಖೆ ಭರವಸೆ ನೀಡಿತ್ತು. ಇದರಿಂದ ಆಗ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು. ಆದರೆ, ಸರ್ಕಾರ ಇದುವರೆಗೂ ಕೊಟ್ಟ ಭರವಸೆ ಈಡೇರಿಸಿಲ್ಲ. ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿ ಹೇರಲಾಗಿದ್ದರಿಂದ 2ನೇ ಮುಷ್ಕರ ಹಮ್ಮಿಕೊಂಡಿದ್ದೇವೆ. ನಮಗೆ ನ್ಯಾಯ ಸಿಗುವವರೆಗೂ ಮುಷ್ಕರ ಹಿಂಪಡೆಯುವುದಿಲ್ಲ ಎಂದರು.ಕಂದಾಯ ನೀರಿಕ್ಷಕ ಮಂಜುನಾಥ ಹಿರೇಮಠ, ರವಿ ನಾಯ್ಕ್, ಉಪಾಧ್ಯಕ್ಷ ಹಾಲೇಶ್, ಗೌರವಾಧ್ಯಕ್ಷ ಶರಣಬಸಪ್ಪ ಚಳಗೇರಿ,
ಗಡ್ಡಿ ಕುಮಾರ, ಮೆಹಬೂಬ, ಸಾಧಿಕಬಾನು, ಯಂಕೋಬ ಉದ್ದಿಹಾಳ, ಭೂ ಮಾಪಕ ರಮೇಶ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕರ ಬೆಂಬಲ:ಗ್ರಾಮ ಆಡಳಿತ ಅಧಿಕಾರಿಗಳು ಕೈಗೊಂಡಿರುವ ಮುಷ್ಕರಕ್ಕೆ ಗುರುವಾರ ಕಂದಾಯ ನಿರೀಕ್ಷಕರು ಬೆಂಬಲ ವ್ಯಕ್ತಪಡಿಸಿದ್ದರಿಂದ ಸಾರ್ವಜನಿಕ ಕೆಲಸ, ಕಾರ್ಯಗಳಿಗೆ ಸಮಸ್ಯೆಯಾಗಿದೆ. ಜಾತಿ, ಆದಾಯ ಪ್ರಮಾಣಪತ್ರ, ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಲು ಜನರು ಪರದಾಡಿದರು.