ಸಾರಾಂಶ
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ವಿದ್ಯಾರ್ಥಿಗಳು ಪಠ್ಯಕ್ರಮದ ಶಿಕ್ಷಣದೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಯುವಂತಹ ಗುಣಗಳನ್ನು ಹೊಂದಬೇಕು ಎಂದು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಜ್ಯೋತಿ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.ಇಲ್ಲಿನ ಸಂತ ಅನ್ನಮ್ಮ ಪದವಿ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಮತ್ತು ಐ.ಕ್ಯೂ.ಎ.ಸಿ ಹಾಗೂ ಬಿ.ಬಿ.ಎ ವಿಭಾಗ ಅಶ್ರಯದಲ್ಲಿ ಕಾಲೇಜು ಮೈದಾನದಲ್ಲಿ ರಾಷ್ಟ್ರಮಟ್ಟದ ಅಂತರ್ ಕಾಲೇಜು ಪುರುಷರ ೫+೨ ಕಾಲ್ಚೆಂಡು ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜು ಶಿಕ್ಷಣ ವಿದ್ಯಾರ್ಥಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಸೃಷ್ಟಿಸಿ ಸಮಾಜಕ್ಕೆ ನೀಡುತ್ತದೆ. ತಾವು ಧರಿಸುವ ಬಟ್ಟೆ, ಧರಿಸುವ ಸಂಸ್ಥೆಯ ಲಾಂಛನ, ನಡೆ ನುಡಿ ಗುಣ, ಹಾವಭಾವದಿಂದ ವಿಧ್ಯಾರ್ಥಿಯ ಗುಣಮಟ್ಟ ನಿರ್ಧರಿಸುತ್ತದೆ. ದೈಹಿಕವಾಗಿ ಆರೋಗ್ಯದಿಂದಿರಲು ಕ್ರೀಡೆ ಸಹಕಾರಿಯಾಗಿದೆ. ದುರಭ್ಯಾಸಗಳಿಂದ ಹೊರಬರುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನುಡಿದರು.ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾ ತೃಪ್ತಿ ಬೋಪಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ದಿನಗಳ ಕಾಲ ಪಂದ್ಯಾಟಗಳು ನಡೆಯಲಿವೆ. ಪಂದ್ಯಾಟದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ರಾಜ್ಯ ಮತ್ತು ಅಂತರ್ ರಾಜ್ಯಗಳ ಸುಮಾರು ೨೮ ತಂಡಗಳು ಭಾಗವಹಿಸಿಲಿವೆ. ದಾನಿಗಳು, ಆಯೋಜಕರ ಸಹಕಾರಕ್ಕೆ ಸಂಸ್ಥೆ ಆಭಾರಿಯಾಗಿದೆ ಎಂದರು.
ಐ.ಕ್ಯೂ.ಎ.ಸಿ. ಸಂಚಾಲಕ ಮತ್ತು ಬಿ.ಬಿ.ಎ. ವಿಭಾಗ ಮುಖ್ಯಸ್ಥ ಹೇಮಾ ಬಿ.ಡಿ., ಪದವಿ ಕಾಲೇಜಿನ ದೈಹಿಕ ಶಿಕ್ಷಕ ರಾಜ ರೈ, ಪದವಿ ಕಾಲೇಜಿನ ಕ್ರೀಡಾ ಕಾರ್ಯದರ್ಶಿ ಕಾವೇರಪ್ಪ ಎನ್.ಡಿ., ವಿದ್ಯಾರ್ಥಿ ಸಂಚಾಲಕ ರಹೀಂ ಇದ್ದರು.ಪ್ರಥಮ ಪಂದ್ಯಾಟವು ಸಂತ ಅನ್ನಮ್ಮ ಪದವಿ ಕಾಲೇಜು ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ತಂಡಗಳ ಮಧ್ಯೆ ನಡೆದು 1-1 ಗೋಲುಗಳಿಂದ ಸಮ ಸಾಧಿಸಿದ ಹಿನ್ನಲೆಯಲ್ಲಿ ಪೆನಾಲ್ಟಿ ಶೂಟೌಟ್ಗೆ ಮನವಿ ಮಾಡಿತು. ಪೆನಾಲ್ಟಿ ಶೂಟೌಟ್ನಲ್ಲಿ ಸಂತ ಅನ್ನಮ್ಮ ಕಾಲೇಜು ತಂಡ ೨-೦ ಗೋಲುಗಳಿಂದ ಜಯ ಗಳಿಸಿತು. ಶೇಷಪ್ಪ ಅಮ್ಮತ್ತಿ, ನಿಧೀಶ್ ಮತ್ತು ಶ್ರೀನಿವಾಸ್ ಒಂಟಿ ಅಂಗಡಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಸಂತ ಅನ್ನಮ್ಮ ಪದವಿ ಕಾಲೇಜಿನ ಬಿ.ಬಿ.ಎ ವಿಭಾಗದ ಉಪನ್ಯಾಸಕಿ ಹೇಮಾ ಬಿ.ಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕ ವಿಲೀನಾ ಗೋನ್ಸಾಲ್ವೆಸ್ಸ್ ನಿರೂಪಿಸಿದರು. ಉಪನ್ಯಾಸಕಿ ಪೂಜಾ ವಂದಿಸಿದರು.ಸಂತ ಅನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಕಾಲೇಜುಗಳಿಂದ ಆಗಮಿಸಿದ ವಿದ್ಯಾರ್ಥಿಗಳು, ದೈಹಿಕ ಶಿಕ್ಷಕರು ಸಮಾರಂಭದಲ್ಲಿ ಹಾಜರಿದ್ದರು.