ಸಾರಾಂಶ
ರಾಜೇಂದ್ರ ಕಲ್ಬಾವಿ ಅವರಿಗೆ ಸಿವಿಲ್ ಎಂಜಿನಿಯರ್ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ರೋಟರಿ ಸಂಸ್ಥೆಯ ಆದರ್ಶ ಎಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಭಾರತರತ್ನ ದಿ.ಸರ್.ಎಂ. ವಿಶ್ವೇಶ್ವರಯ್ಯ ಅವರೊಬ್ಬ ಮಹಾನ್ ಮೇಧಾವಿ. ಅವರ ವೃತ್ತಿ ಕೌಶಲ್ಯ, ಅಸಾಧರಣ ಪ್ರತಿಭೆ ಮತ್ತು ಶ್ರೇಷ್ಠ ಸಾಧನೆ ದೇಶದ ಎಲ್ಲ ಎಂಜಿನಿಯರ್ಗಳಿಗೆ ಮಾದರಿ. ತಮ್ಮ ವಿಶಿಷ್ಟ ಕಾರ್ಯಕ್ಷಮತೆ ಮೂಲಕ ಎಂಜಿನಿಯರ್ಗಳ ಶಕ್ತಿ, ಸಾಮರ್ಥ್ಯ, ಕೌಶಲ್ಯ ಏನೆಂಬುದನ್ನು ದೇಶಕ್ಕೆ ನಿದರ್ಶನ ನೀಡಿದ ಶ್ರೇಷ್ಠ ವ್ಯಕ್ತಿ ಎಂದು ದ.ಕ. ಜಿಲ್ಲಾ ನಿರ್ಮಿತಿ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರೋಟರಿ ಮಂಗಳೂರು ಸಿಟಿ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿ ನಗರದಲ್ಲಿ ಜರುಗಿದ ಎಂಜಿನಿಯರ್ಗಳ ದಿನಾಚರಣೆಯಲ್ಲಿ ಗೌರವ ಅತಿಥಿಯಾಗಿ ಅವರು ಮಾತನಾಡಿದರು.
ಇದೇ ಸಂದರ್ಭ ರಾಜೇಂದ್ರ ಕಲ್ಬಾವಿ ಅವರಿಗೆ ಸಿವಿಲ್ ಎಂಜಿನಿಯರ್ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಗಾಗಿ ರೋಟರಿ ಸಂಸ್ಥೆಯ ಆದರ್ಶ ಎಂಜಿನಿಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.ಎನ್ಐಟಿಕೆ ಪ್ರಾಧ್ಯಾಪಕ ಕೆ.ವಿ. ಗಂಗಾಧರನ್ ಮುಖ್ಯ ಅತಿಥಿಯಾಗಿದ್ದರು. ಗಣೇಶ್ ಕೊಡ್ಲಮೊಗರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುದೇಶ್ ವರದಿ ಮಂಡಿಸಿದರು. ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಡಾ. ರಂಜನ್, ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ನಿರ್ದೇಶಕ ಕ್ಯಾನುಟ್ ಪಿಂಟೊ, ಯುವಜನ ಸೇವಾ ಯೋಜನೆಯ ನಿರ್ದೇಶಕ ಸುಮಿತ್ ರಾವ್ ಇದ್ದರು. ಸುದೇಶ್ ವಂದಿಸಿದರು.