ಇಲ್ಲಿ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಯನ್ನು ಮಾಡಬೇಕು.

ವಿಶ್ವದರ್ಶನ ಸಂಭ್ರಮ ೨೦೨೫ ನಮ್ಮೂರ ಹಬ್ಬದ ಸಮಾರೋಪ ಸಮಾರಂಭ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಉತ್ತರ ಕನ್ನಡ ಜಿಲ್ಲೆ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ. ಇಲ್ಲಿ ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಅದನ್ನು ಬಳಸಿಕೊಂಡು ಜಿಲ್ಲೆಯ ಅಭಿವೃದ್ಧಿಯನ್ನು ಮಾಡಬೇಕು. ಆ ನೆಲೆಯಲ್ಲಿ ಹರಿಪ್ರಕಾಶ ನೇತೃತ್ವದಲ್ಲಿ ವಿಶ್ವದರ್ಶನ ಸಂಸ್ಥೆ ಶಿಕ್ಷಣ ಕ್ರಾಂತಿಗೆ ಮುಂದಾಗಿದೆ. ನಿರಂತರ ಶ್ರಮ, ಯೋಗ, ಅಧ್ಯಯನ ಇದ್ದಾಗ ಮಾತ್ರ ಯಾವುದೇ ಸಾಧನೆ ಸಾಧ್ಯವಾಗುತ್ತದೆ ಎಂದು ಪತಂಜಲಿ ಯೋಗಪೀಠದ ಕರ್ನಾಟಕ ದಕ್ಷಿಣ ಭಾರತದ ಪ್ರಭಾರಿ, ಯೋಗ ಸಾಧಕ ಭವರ್‌ಲಾಲ್ ಆರ್ಯ ಹೇಳಿದರು.

ಶನಿವಾರ ವಿಶ್ವದರ್ಶನ ಸಂಭ್ರಮ ೨೦೨೫ ನಮ್ಮೂರ ಹಬ್ಬದ ಸಮಾರೋಪ ಸಮಾರಂಭದಲ್ಲಿ ವಿಶ್ವದರ್ಶನ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ರೈತ, ವೈದ್ಯ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಜೀವನದಲ್ಲಿ ಚಮತ್ಕಾರ ಬೇಕಾದರೆ ಕನಿಷ್ಠ ಒಂದು ಗಂಟೆ ನಿರಂತರ ಯೋಗ ಮಾಡಿ, ಆರೋಗ್ಯಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಇಂದು ಎಲ್ಲೆಡೆ ಶಿಕ್ಷಣ ಕ್ಷೇತ್ರ ಒಂದು ವಾಣಿಜ್ಯ ಕೇಂದ್ರವಾಗಿದೆ. ಆದರೆ ವಿಶ್ವದರ್ಶನದಲ್ಲಿ ಎಲ್ಲದಕ್ಕೂ ಮಿಗಿಲಾಗಿ ಸಂಸ್ಕಾರ, ಸಂಸ್ಕೃತಿಗೆ ಭಾರತೀಯ ಮೌಲ್ಯ, ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಮಹತ್ವ ನೀಡುತ್ತಿರುವುದು ಹೆಚ್ಚು ಸಂತಸ ತರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾವಂತರೇ ಮಾಧ್ಯಮ ಜಗತ್ತನ್ನು ಆಳುತ್ತಿದ್ದಾರೆ. ನಮ್ಮ ಜಿಲ್ಲೆ ಪ್ರತಿಭೆಗಳ ಗಣಿ. ನಮಗೆ ಎಲ್ಲರೂ ಕೈಜೋಡಿಸಿದರೆ ಯಲ್ಲಾಪುರವನ್ನು ಶಿಕ್ಷಣ ಕಾಶಿಯನ್ನಾಗಿಸುವ ಸಂಕಲ್ಪ ಮಾಡಿದ್ದೇವೆ ಎಂದರು.

ಬೀದರ ಬಾಲ್ಕಿಯ ಉದ್ಯಮಿ ಚೆನ್ನಬಸವಣ್ಣ ಬಳತೆ, ಬೆಂಗಳೂರಿನ ರಿಪೋಸ್ ಕಂಪೆನಿಯ ಮಾಲೀಕ ರಾಮನಾಥ ಭಟ್ಟ ಅಡಿಕೆಪಾಲ, ಟಿ.ಎಸ್.ಎಸ್. ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ವಿ.ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿದರು.

ಉಚ್ಚ ನ್ಯಾಯಾಲಯದ ನ್ಯಾಯವಾದಿ ನಾರಾಯಣ ಯಾಜಿ, ಸನ್ನದು ಲೆಕ್ಕಪರಿಶೋಧಕ ವಿಘ್ನೇಶ್ವರ ಗಾಂವ್ಕರ, ಹಿರಿಯ ಸಹಕಾರಿಗಳಾದ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಉಮೇಶ ಭಾಗ್ವತ, ನಾರಾಯಣ ಭಟ್ಟ ಏಕಾನ, ಪ್ರಸಾದ ಹೆಗಡೆ, ರವಿ ಕೈಟ್ಕರ್, ಗೋಪಾಲಕೃಷ್ಣ ಗಾಂವ್ಕರ, ಶಿವಲಿಂಗಯ್ಯ ಅಲ್ಲಯ್ಯನಮಠ, ಬಾಬು ಬಾಂದೇಕರ ಮತ್ತಿತರರಿದ್ದರು.

ಎರಡು ದಿನಗಳ ವಿಶ್ವದರ್ಶನ ಸಂಭ್ರಮದ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವಿಶ್ವದರ್ಶನದ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಮತ್ತು ಅಂಕೋಲಾ ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕ ಗುರುದತ್ತ ನಾಯಕ ದಂಪತಿಗಳನ್ನು ಗೌರವಿಸಲಾಯಿತು. ಪಿಯು ಕಾಲೇಜು ಪ್ರಾಚಾರ್ಯ ಡಾ. ಡಿ.ಕೆ. ಗಾಂವ್ಕರ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.