ಸಾರಾಂಶ
ಚಿತ್ರದುರ್ಗ: ಶ್ರೀಮಂತ ಕಂಪನಿಗಳ ಪರವಾದ ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ ಹಾಗೂ ಶಾಂತಿ ಸೌಹಾರ್ದತೆ, ಸಹಬಾಳ್ವೆಗಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ವಿರುದ್ಧ ಮತಚಲಾಯಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನಿರ್ಣಯ ಕೈಗೊಂಡಿದೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಸ್ ಪೀರ್, ಲೋಕಸಭಾ ಚುನಾವಣೆಯಲ್ಲಿ ಸುಮಾರು 5 ಕೋಟಿಗೂ ಹೆಚ್ಚು ಕಟ್ಟಡ ಕಾರ್ಮಿಕರು ಮತ್ತು ಕುಟುಂಬದವರು ಸೇರಿ ಸುಮಾರು 20 ಕೋಟಿಗೂ ಅಧಿಕ ಜನರು ಮತದಾನ ಮಾಡುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರು ಮತಗಳನ್ನು ಚಲಾಯಿಸುವ ಅವಕಾಶ ಪಡೆದಿದ್ದಾರೆ. ಕಳೆದ 10 ವರ್ಷಗಳಿಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಕಾರ್ಮಿಕ ಹಕ್ಕುಗಳನ್ನು ದಮನ ಮಾಡುವುದು, ಹಾಲಿ ಇರುವ ಕಲ್ಯಾಣ ಸೌಲಭ್ಯಗಳನ್ನು ತೆಗೆದು ಹಾಕುವ ಪ್ರಯತ್ನಗಳನ್ನು ಮಾಡುತ್ತಿದೆ. ಹಾಗಾಗಿ ಬಿಜೆಪಿ ಸೋಲಿಸುವುದು ಗುರಿಯೆಂದರು.ಮೋದಿ ಸರ್ಕಾರದ ಆರ್ಥಿಕ ನೀತಿಗಳು ಕಾರ್ಮಿಕರ ಜೀವನ ಮತ್ತು ಜೀವನೋಪಾಯದ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಿವೆ. ಈ ನೀತಿಗಳು ಬೃಹತ್ ಉದ್ಯೋಗ ನಷ್ಟ, ನಿರುದ್ಯೋಗಕ್ಕೆ ಕಾರಣವಾಗಿವೆ. ಬೆಲೆ ಏರಿಕೆ, ಬಡತನ ಮತ್ತು ಹಸಿವುಗಳನ್ನು ಕಟ್ಟಡ ಕಾರ್ಮಿಕರು ಅನುಭವಿಸಿದ್ದಾರೆ. ದೇಶ ಹಾಗೂ ವಿದೇಶಿ ಶ್ರೀಮಂತ ಕುಟುಂಬಗಳ ಜತೆ ಬಿಜೆಪಿ ಹಾಗೂ ಆರ್ಎಸ್ಎಸ್ ಮತ್ತು ಅದರ ವಿವಿಧ ಸಂಘಟನೆಗಳು ನಿಕಟ ಸಂಬಂಧ ಹೊಂದಿವೆ. ಅಂತಹ ಕಂಪನಿಗಳು ನೀಡುವ ಸಾವಿರಾರು ಕೋಟಿ ರುಪಾಯಿಗಳನ್ನು ಬಳಸಿ ಮೋದಿ ಸರ್ಕಾರ ಕಾರ್ಮಿಕರ ಮತ್ತು ಎಲ್ಲಾ ವರ್ಗದ ಜನರನ್ನು ವಿಭಜಿಸಲು ಮತ್ತು ಐಕ್ಯತೆಗೆ ಭಂಗ ತರಲು ಉಗ್ರ ಕೋಮು ವಿಷವನ್ನು ಹರಡುತ್ತಿದೆ. ಇದು ನಮ್ಮ ಕೆಲಸ ಮತ್ತು ಜೀವನ ಪರಿಸ್ಥಿತಿಗಳ ಮೇಲಿನ ದಾಳಿಯಾಗಿದೆ ಎಂದು ದೂರಿದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಕಟ್ಟಡ ಮತ್ತು ಇತರೆ ನಿರ್ಮಾಣವಲಯದ ಕಾರ್ಮಿಕರು ಅಮೂಲ್ಯ ಮತವನ್ನು ಬಳಸಿ ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರದಂತೆ ತಡೆ ಒಡ್ಡಬೇಕಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ಸೋಲಿಸಬೇಕಿದೆ. ಕರ್ನಾಟಕದ ಮತ್ತು ದೇಶದ ಕಟ್ಟಡ ನಿರ್ಮಾಣ ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ಇದು ತೀರ ಅವಶ್ಯವಾಗಿದೆ ಕರ್ನಾಟಕದ ಉಳಿದ ಎಲ್ಲ 27 ಕ್ಷೇತ್ರಗಳಲ್ಲಿ ಜಾತ್ಯತೀತವಾಗಿರುವ ''''''''ಇಂಡಿಯಾ'''''''' ಒಕ್ಕೂಟದ ಭಾಗವಾದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲಿದೆ ಎಂದರು.ಫೆಡರೇಷನ್ ಹೊಳಲ್ಕೆರೆ ತಾಲೂಕು ಕಾರ್ಯದರ್ಶಿ ಮಲ್ಲಿಕಾರ್ಜುನ, ಮಹಿಳಾ ಸಂಚಾಲಕಿ ಸಣ್ಣಮ್ಮ, ಇಸ್ಮಾಯಿಲ್, ಉಮೇಶ್, ನಾಗರಾಜು, ರಂಗಸ್ವಾಮಿ, ರಾಘವೇಂದ್ರ, ಶಿವರಾಜು, ಮುಜ್ನು ಇದ್ದರು.