ಸಾರಾಂಶ
ಸದ್ಯ ಬಿಆರ್ಟಿಎಸ್ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಹಲವು ತೊಂದರೆಯಾಗುತ್ತಿದೆ. ಅವೈಜ್ಞಾನಿಕ ಈ ವ್ಯವಸ್ಥೆ ಸುಧಾರಿಸುವಂತೆ ಜಿಲ್ಲಾಡಳಿತ ಮತ್ತು ಸಚಿವರ ಗಮನಕ್ಕೂ ತರಲಾಗಿದೆ. ಆದರೂ ಸುಧಾರಣೆ ಕೈಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.
ಧಾರವಾಡ:
ಹುಬ್ಬಳ್ಳಿ-ಧಾರವಾಡ ಮಧ್ಯೆದಲ್ಲಿನ ಬಿಆರ್ಟಿಎಸ್ ಸಂಚಾರದಿಂದ ಆಗುತ್ತಿರುವ ಅನಾನುಕೂಲತೆ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಜು. 15ರಂದು ನವಲೂರನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಧಾರವಾಡ ಧ್ವನಿ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಈಶ್ವರ ಶಿವಳ್ಳಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಬಿಆರ್ಟಿಎಸ್ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಹಲವು ತೊಂದರೆಯಾಗುತ್ತಿದೆ. ಅವೈಜ್ಞಾನಿಕ ಈ ವ್ಯವಸ್ಥೆ ಸುಧಾರಿಸುವಂತೆ ಜಿಲ್ಲಾಡಳಿತ ಮತ್ತು ಸಚಿವರ ಗಮನಕ್ಕೂ ತರಲಾಗಿದೆ. ಆದರೂ ಸುಧಾರಣೆ ಕೈಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಜ್ಯುಬಿಲಿ ವೃತ್ತದಿಂದ ನವಲೂರು ವರೆಗೆ ಬಿಆರ್ಟಿಎಸ್ ಪ್ರತ್ಯೇಕ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳಿಗೂ ಅವಕಾಶ ಮಾಡಿಕೊಡಬೇಕು ಎಂಬುದೇ ನಮ್ಮ ಪ್ರಮುಖ ಆಗ್ರಹವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದವರ ಗಮನ ಸೆಳೆಯುವ ಜತೆಗೆ ಒತ್ತಡ ತರುವ ಪ್ರಯತ್ನ ಮಾಡಲಾಗುವುದು. ಜು. 15ರಂದು ಕೈಗೊಳ್ಳುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಬಯಸುವ ಸಮಾನ ಮನಸ್ಕ ಸಂಘಟನೆಗಳು ಸಹಕಾರ ನೀಡಬಹುದು. ಆಸಕ್ತರು ಮಂಜುನಾಥ ನೀರಲಕಟ್ಟಿ (9448267451), ಮಂಜುನಾಥ ನಡಟ್ಟಿ(9964440262) ಸಂಪರ್ಕಿಸಬಹುದು ಎಂದು ಮನವಿ ಮಾಡಿದರು.ಧಾರವಾಡ ಧ್ವನಿ ವತಿಯಿಂದ ಜೂ. 23ರಂದು ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚುತ್ತಿರುವ ಪರಿಣಾಮ ಅನೇಕ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಈ ಕಾರಣದಿಂದ ಸಂಘಟನೆವತಿಯಿಂದ ಬಹುಪಯೋಗಿ ಬೇವಿನ ಮರ ಬೆಳೆಸುವುದು ನಮ್ಮಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬೇವಿನ ಸಸಿಗಳನ್ನು ಮಾತ್ರ ನೆಡಲು ತೀರ್ಮಾನಿಸಿದ್ದೇವೆ ಎಂದು ಶಿವಳ್ಳಿ ತಿಳಿಸಿದರು.
ಧಾರವಾಡ ಧ್ವನಿ ಪದಾಧಿಕಾರಿಗಳಾದ ಮಂಜುನಾಥ ನಡಟ್ಟಿ, ವೆಂಕಟೇಶ ರಾಯ್ಕರ್, ಶರಣಗೌಡ ಗಿರಡ್ಡಿ, ಮಂಜುನಾಥ ನೀರಲಕಟ್ಟಿ, ಪುಂಡಲೀಕ ತಳವಾರ, ಕಲಂದರ ಮುಲ್ಲಾ, ಭೀಮಪ್ಪ ಕಾಸಾಯಿ ಸುದ್ದಿಗೋಷ್ಠಿಯಲ್ಲಿ ಇದ್ದರು.