ಕಳೆದ ೨೩ ವರ್ಷದಿಂದ ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿದಿದೆ. ಈ ವರ್ಷ ಮಳೆ ಇಲ್ಲದಿದ್ದರೂ ಮದಲೂರು, ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ ಸೇರಿ ಸುಮಾರು ೩೬ ಕೆರೆಗಳು ಹೇಮಾವತಿ ನೀರಿನಿಂದ ತುಂಬಿಸಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಕಳೆದ ೨೩ ವರ್ಷದಿಂದ ಶಿರಾ ತಾಲೂಕಿಗೆ ಹೇಮಾವತಿ ನೀರು ಹರಿದಿದೆ. ಈ ವರ್ಷ ಮಳೆ ಇಲ್ಲದಿದ್ದರೂ ಮದಲೂರು, ಕಳ್ಳಂಬೆಳ್ಳ, ಶಿರಾ ದೊಡ್ಡ ಕೆರೆ ಸೇರಿ ಸುಮಾರು ೩೬ ಕೆರೆಗಳು ಹೇಮಾವತಿ ನೀರಿನಿಂದ ತುಂಬಿಸಿದ್ದೇನೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಶನಿವಾರ ತಾಲೂಕಿನ ಗುಂಡಪ್ಪಚಿಕ್ಕೇನಹಳ್ಳಿ ಗ್ರಾಮದ ಶ್ರೀ ಗುಂಡಾಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಲಾನಯನ ಅಭಿವೃದ್ಧಿ ಘಟಕ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ೨.೦ ಯೋಜನೆಯಡಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಜಲಾನಯನ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಜಲಾನಯನ ಅಭಿವೃದ್ಧಿಯಲ್ಲಿ ಸುಸ್ಥಿರತೆ ಹಾಗೂ ಸಮುದಾಯದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ರಾಷ್ಟ್ರವ್ಯಾಪಿ ವಾಟರ್ ಶೆಡ್ ಮಹೋತ್ಸವ ಅಭಿಯಾನವನ್ನು ಭೂ ಸಂಪನ್ಮೂಲ ಇಲಾಖೆ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಮುಖ್ಯ ಆಯುಕ್ತರಾದ ಉಪೇಂದ್ರ ಪ್ರತಾಪ್ ಸಿಂಗ್ ಮಾತನಾಡಿ ರೈತರು ಮಣ್ಣ ಸಂರಕ್ಷಣೆ ಮಾಡಲು ಇಲಾಖೆಯ ಅಧಿಕಾರಿಗಳೊಂದಿಗೆ ಸಹಕರಿಸಿದರೆ ಅಧಿಕಾರಿಗಳು ತಾಂತ್ರಿಕವಾಗಿ ಮಣ್ಣಿನ ಸೂಕ್ತ ಪರೀಕ್ಷೆ ನಡೆಸಿ ಅದರ ಸಂರಕ್ಷಣೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಇದರಿಂದ ಉತ್ತಮ ಬೆಳೆಯೂ ಪಡೆಯಬಹುದು ಎಂದರು.

ಜಲಾನಯ ಅಭಿವೃದ್ಧಿ ಇಲಾಖೆ ನಿರ್ದೇಶಕರಾದ ಮೊಹಮ್ಮದ್ ಪರವೇಜ ಬಂಥನಾಳ ಅವರು ಮಾತನಾಡಿ ರೈತರಿಗೆ ಯಾವ ಸವಲತ್ತು ನೀಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಇಲಾಖೆ ಅರಿತು ಅದನ್ನು ಒದಗಿಸಿದರೆ ಉತ್ತಮ ಫಲಿತಾಂಶ ದೊರಕುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೇವಿನಹಳ್ಳಿ, ಚಂಗಾವರ, ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರಕಾರಿ ಶಾಲೆಗಳಿಗೆ ೧೧ ಲಕ್ಷ ರೂ ವೆಚ್ಚದಲ್ಲಿ ಡೆಸ್ಕ್‌ಗಳನ್ನು ನೀಡಲಾಯಿತು, ಜಿಲ್ಲೆಯ ೧೦ ಮಂದಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರಧಾನ ಮಾಡಲಾಯಿತು. ರಾಜ್ಯದ ೫ ಜಿಲ್ಲೆಗಳ ೭ ವಿಜೇತರಿಗೆ ಜನಭಾಗಿದಾರ್ ಕಪ್ ನೀಡಲಾಯಿತು. ಜಲಾನಯನ ಯೋಜನೆ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಾರೋಗೆರೆ ಮಹೇಶ್, ಚಂಗಾವರ ಮಾರಣ್ಣ,ಲಕ್ಷ್ಮಣ ಎಸ್ ಕಳ್ಳೆನ್ನವರ, ಡಾ.ಚಂದ್ರಕುಮಾರ್ ಎಚ್.ಎಲ್, ಎಚ್.ನಾಗರಾಜ, ಸುಧಾಕರ್, ಪೌರಾಯುಕ್ತ ರುದ್ರೇಶ್, ಮಂಜುನಾಥ್, ತಾವರೆಕೆರೆ ಶಿವಕುಮಾರ್, ಆನಂದ್, ಲಕ್ಕಣ್ಣ, ನಾದೂರು ಕೆಂಚಪ್ಪ, ನಟರಾಜ್, ಸತ್ಯನಾರಾಯಣ, ಶ್ರೀನಿವಾಸ್, ಶಾರದಮ್ಮ ಹನುಮಂತರಾಯಪ್ಪ, ಸುಜಾತ.ಎನ್.ಪಿ, ಮಹಮದ್ ಅಲಿ, ಗಾಯಿತ್ರಮ್ಮ, ಶಿವಮೊಗ್ಗ, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳ ಜಂಟಿಕೃಷಿ ನಿರ್ದೇಶಕರು ಮತ್ತು ತಂಡದವರು ಸೇರಿದಂತೆ ನೂರಾರು ರೈತರು, ರೈತಮಹಿಳೆಯರು ಭಾಗವಹಿಸಿದ್ದರು.