ಸಾರಾಂಶ
ಕುಡಿಯುವ ನೀರು, ನೈರ್ಮಲ್ಯ ಹಾಗೂ ಜಲ ಜೀವನ್ ಮಿಷನ್ ಕಾಮಗಾರಿಗೆ ಸಂಬಂಧಪಟ್ಟಂತೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಸವಣೂರು: ಕುಡಿಯುವ ನೀರು, ನೈರ್ಮಲ್ಯ ಹಾಗೂ ಜಲ ಜೀವನ್ ಮಿಷನ್ ಕಾಮಗಾರಿಗೆ ಸಂಬಂಧಪಟ್ಟಂತೆ ಹುರಳಿಕುಪ್ಪಿ ಗ್ರಾಮಸ್ಥರು ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.
ಸಮಸ್ಯೆ ಬಗೆಹರಿಸುವ ವರೆಗೆ ಬೀಗ ತೆಗೆಯುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಎಫ್.ಜಿ. ಚಿನ್ನಣ್ಣನವರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಚಂದ್ರಶೇಖರ ನೆಗಳೂರ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ಮಾಡಿದರು. ಎರಡು ದಿನಗಳಲ್ಲಿ ಸಮಸ್ಯೆ ಸದ್ಯದಲ್ಲಿಯೇ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.ಬಳಿಕ ತಾಪಂ ಕಾರ್ಯನಿರ್ವಹಣಾಧಿಕಾರಿ ಮನೆ ಮನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ಚರಂಡಿಗಳು ತುಂಬಿ ಗಬ್ಬು ನಾರುತ್ತಿವೆ. ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಇದ್ದರೂ ನಾವು ಪಂಚಾಯಿತಿಗೆ ಬರುವುದಿಲ್ಲ. ಆದರೆ ಇತ್ತೀಚೆಗೆ ನೀರಿನ ಸಮಸ್ಯೆ ತುಂಬಾ ಆಗಿದೆ. ಪಿಡಿಒ ಅವರಿಗೆ ತಿಳಿಸಿದ್ದರೂ ಅವರು ಸರಿಯಾಗಿ ಸ್ಪಂದಿಸಿಲ್ಲ. ಗ್ರಾಮದ ಸಮಸ್ಯೆ ಅರಿಯಲು ಮನೆಗಳಿಗೆ ಭೇಟಿ ಮಾಡುವುದಿಲ್ಲ ಎಂದು ಗ್ರಾಮದ ನಿವಾಸಿ ಮಾಂತೇಶ ಮೆಣಸಕ್ಕನವರ ಆರೋಪಿಸಿದರು.ಗ್ರಾಮದ ಮಹಿಳೆಯರಾದ ರತ್ನಮ್ಮ ಹೆಗ್ಗಣ್ಣನವರ್, ಶಾರದಾ ಅಜ್ಜಣ್ಣನವರ, ಮಂಜವ್ವ ಯರೇಸಿಮಿ, ಅನ್ನಪೂರ್ಣಾ ಮೆಣಸಕ್ಕನವರ್, ಮಲ್ಲವ್ವ ಕೊಳ್ಳವರ ಹಾಗೂ ಯುವಕರಾದ ನಿಂಗಪ್ಪ ಬಡಕಣ್ಣವರ್, ಮಹಾಂತೇಶ್ ಮೆಣಸಕ್ಕನವರ್, ಚಂದ್ರು ಪಿಳ್ಳಿ, ಸಹದೇವಪ್ಪ ಕರ್ಜಗಿ, ಪ್ರವೀಣ್ ಕೊಳ್ಳವರ, ಮಹಾಂತೇಶ್ ಪೂಜಾರ್, ನಾಗಪ್ಪ ಯರೆಸಿಮಿ, ಪುಟ್ಟೇಶ್ ಕಳ್ಳಿಮನಿ, ಪಾಂಡಪ್ಪ ತಿಪ್ಪಕ್ಕನವರ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.