ಸಾರಾಂಶ
ಹೊಸಪೇಟೆ: ಹೊಸಪೇಟೆ ರೈತ ಸಂಘದ ನೇತೃತ್ವದಲ್ಲಿ ಆರಂಭಿಸಲಾಗಿದ್ದ ಮೂರು ದಿನಗಳ ಪ್ರತಿಭಟನಾ ಧರಣಿ ಶನಿವಾರ ಅಂತ್ಯವಾಗಿದೆ.ಪುರಾತನ ವಿಜಯನಗರ ಕಾಲುವೆಗಳಿಗೆ ವರ್ಷದ ೧೧ ತಿಂಗಳ ಕಾಲ ನೀರು ಹರಿಸಬೇಕು. ಈಗ ಜನವರಿ 16ರಿಂದ ಮೇ 31ರ ವರೆಗೆ ನೀರು ಹರಿಸಿ ಬೆಳೆಗಳನ್ನು ಉಳಿಸಬೇಕು ಎಂದು ಪ್ರತಿಭಟನೆ ಆರಂಭಿಸಿದ್ದರು.ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಅವರು ಜಲಸಂಪನ್ಮೂಲ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಮನವರಿಕೆ ಮಾಡಿದ ಬಳಿಕ ಸ್ಥಗಿತಗೊಳಿಸಲಾಯಿತು.ಸರ್ಕಾರ ತಕ್ಷಣ ನಿರ್ಣಯ ಕೈಗೊಳ್ಳದಿದ್ದರೆ, ಹೊಸಪೇಟೆ ಬಂದ್ ಕರೆ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ನ. 26ರಂದು ಅಪರಾಹ್ನ 4 ಗಂಟೆಗೆ ರೈತರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಸುದೀರ್ಘ ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಪ್ರತಿಭಟನಾನಿರತ ರೈತರು ತಿಳಿಸಿದ್ದಾರೆ.
ನೀರು ಬಿಡಲು ಒತ್ತಾಯ: ತುಂಗಭದ್ರಾ ಅಣೆಕಟ್ಟು ನಿಮಾರ್ಣದ ಪೂರ್ವದಲ್ಲಿ ವಿಜಯನಗರ ಅರಸರ ಕಾಲದಿಂದಲೂ ರಾಯ, ಬಸವ, ಬೆಲ್ಲ, ತುರ್ತಾ, ಕಾಳಗಟ್ಟ ಕಾಲುವೆಗಳು ನಿರಂತರ ನೀರು ಒದಗಿಸುವ ಮೂಲಕ ಈ ಭಾಗದ ರೈತರು, ಜನ-ಜಾನುವಾರುಗಳಿಗೆ ಆಶ್ರಯವಾಗಿದ್ದವು. ತುಂಗಭದ್ರಾ ಅಣೆಕಟ್ಟುಗಳು ನಿರ್ಮಾಣದ ನಂತರವೂ ವರ್ಷ ೧೧ ತಿಂಗಳು ನೀರು ಬಿಡುವ ಮೂಲಕ ಈ ಭಾಗದ ರೈತರ ಜೀವನಾಡಿಯಾಗಿದ್ದು, ಈ ವರ್ಷ ಈಗಾಗಲೇ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಜ. 16ರಿಂದ ಮೇ 31ರ ವರೆಗೆ ನೀರು ಹರಿಸಬೇಕು ಎಂದು ರೈತರು ಒತ್ತಾಯಿಸಿದರು. ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಸಂಘದ ಅಧ್ಯಕ್ಷ ಜೋಗಯ್ಯ, ಮುಖಂಡರಾದ ಗೋಸಲ ಭರಮಪ್ಪ, ಎ. ಪರಸಪ್ಪ, ಸಿ. ಹಾಶಾಂ, ಜೆ. ಗಾದಿಲಿಂಗಪ್ಪ, ಸಿ. ಅಂಜಿನೆಪ್ಪ, ಬಂಡೆ ಶ್ರೀನಿವಾಸ, ಕಿಚಡಿ ಶ್ರೀನಿವಾಸ, ಆರ್. ಕೊಟ್ರೇಶ್, ಉತ್ತಂಗಿ ಕೊಟ್ರೇಶ್, ಎಲ್.ಎಸ್. ಆನಂದ್, ಕಟಗಿ ರಾಮಕೃಷ್ಣ, ರಾಮಚಂದ್ರಗೌಡ, ಗುಜ್ಜಲ ನಾಗರಾಜ್, ಜೆ. ವಸಂತ ಮತ್ತಿತರರಿದ್ದರು.ಕನ್ನಡಪರ ಸಂಘಟನೆ, ನಗರಸಭೆ ಸದಸ್ಯರ ಬೆಂಬಲ: ರೈತರು ನಡೆಸಿದ ಪ್ರತಿಭಟನೆಗೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಪಿ. ವೆಂಕಟೇಶ್ ಹಾಗೂ ಸದಸ್ಯರು ಬೆಂಬಲ ನೀಡಿದರು. ಇನ್ನೂ ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ ನೇತೃತ್ವದಲ್ಲಿ ಸದಸ್ಯರು ಕೂಡ ರೈತರ ಪ್ರತಿಭಟನೆಗೆ ಬೆಂಬಲಿಸಿದರು.