ಕೆರೆಗಳಿಗೆ ನೀರು ತಂದಿದ್ದಾಯ್ತು, ಈಗ ಏರಿಗಳತ್ತ ಕಾಳಜಿ

| Published : Nov 11 2023, 01:17 AM IST / Updated: Nov 11 2023, 01:18 AM IST

ಕೆರೆಗಳಿಗೆ ನೀರು ತಂದಿದ್ದಾಯ್ತು, ಈಗ ಏರಿಗಳತ್ತ ಕಾಳಜಿ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ಕೋಟಿ ರು. ಅನುದಾನ ಮಂಜೂರಿಗೆ ತರಳಬಾಳು ಡಾ.ಶ್ರೀ.ಶಿವಮೂರ್ತಿ ಶಿವಾಚಾರ್ಯ ಶ್ರೀ ಸಲಹೆರೈತರೊಂದಿಗೆ ಕಾತ್ರಾಳು ಕೆರೆ ವೀಕ್ಷಣೆ ಮಾಡಿ ಜಲಚರಗಳಿಗೆ ಬಯಲು ಸೀಮೆ ಬಾಗಿನ ಅರ್ಪಿಸಿದ ಸ್ವಾಮೀಜಿ

ಕನ್ನಡಪ್ರಭವಾರ್ತೆ, ಚಿತ್ರದುರ್ಗ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಇಚ್ಚಾ ಶಕ್ತಿ ಫಲವಾಗಿ 565 ಕೋಟಿ ರುಪಾಯಿ ವೆಚ್ಚದಲ್ಲಿ ಭರಮಸಾಗರ ಏತ ನೀರಾವರಿ ಯೋಜನೆ ಅನುಷ್ಠಾನಗೊಂಡಿದ್ದು, 42 ಕೆರೆಗಳಿಗೆ ತುಂಗಭದ್ರಾ ನೀರು ಭರ್ತಿಯಾಗಿದೆ. ನೀರು ತುಂಬಿದ ಬಳಿಗೆ ಕೆರೆಗಳತ್ತ ಕಾಳಜಿ ವಹಿಸಿರುವ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರದಿಂದ ವೀಕ್ಷಣೆ ಆರಂಭಿಸಿದ್ದಾರೆ.

ಮೊದಲ ದಿನ ಕಾತ್ರಾಳು ಕೆರೆ ಏರಿ ಮೇಲೆ ನಿಂತು ನೀರು ಸಂಗ್ರಹವಾಗಿರುವ ವಿಹಂಗಮ ದೃಶ್ಯ ವೀಕ್ಷಿಸಿ ಸಂತಸ ಪಟ್ಟ ಶ್ರೀಗಳು ಜಲಚರಗಳಿಗೆ ಆಹಾರ ರೂಪದ ಬಯಲು ಸೀಮೆ ಬಾಗಿನ ಅರ್ಪಿಸಿದರು. ಕೆರೆಯನ್ನು ಮತ್ತಷ್ಟು ಸುಭದ್ರವಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಲೋಚನಾ ಕ್ರಮಗಳ ಹರಿಯಬಿಟ್ಟರು. ರೈತರ ಮುಂದೆ ಸಾಧ್ಯತೆಗಳ ಹರವಿದರು. ನಂತರ ನಡೆದ ಕೆರೆ ಅಚ್ಚುಕಟ್ಟುದಾರರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, ಕಾತ್ರಾಳು ಕೆರೆ ಏರಿ ಅಗಲ ಮಾಡಲು ಎರಡು ಕೋಟಿ ರುಪಾಯಿ ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಸಂಸದ ಸಿದ್ದೇಶ್ವರ ಈ ಸಂಬಂಧ ಅನುದಾನ ದೊರಕಿಸಿಕೊಡಲು ಯತ್ನಿಸಬೇಕೆಂದು ಸೂಚಿಸಿದರು. ಪ್ರಕೃತಿಯಲ್ಲಿ ನೀರಿಗೆ ಕೊರತೆ ಇಲ್ಲ. ಭಗವಂತ ಸ್ವಾರ್ಥಿ ಅಲ್ಲ, ಎಲ್ಲವನ್ನೂ ಕೊಟ್ಟಿದ್ದಾನೆ.‌ ವಿತರಣೆ ಸರಿಯಾಗಿ ಆಗಬೇಕು. ಕೆರೆ ತುಂಬಿತು ಅಂದ್ರೆ ಸಂಪತ್ತು ತಾನಾಗಿಯೇ ಬರುತ್ತದೆ. ರೈತರು, ಪಶು‌ಪಕ್ಷಿ, ಪ್ರಾಣಿ ಎಲ್ಲರಿಗೂ‌ ನೀರು ಬೇಕು. ನೀರಿಗೆ ಯಾವುದೇ ಜಾತಿ ಇಲ್ಲ. ಹಿಂದೆ ರಾಜ, ಮಹಾರಾ ಜರು, ಪಾಳೇಗಾರರಿಗೆ ಯಾರೂ ಅರ್ಜಿ ಹಾಕಿ ಕೆರೆ ಕಟ್ಟೆಗಳ ನಿರ್ಮಿಸಿ ಎಂದು ವಿನಂತಿಸಿರಲಿಲ್ಲ. ಅವರು‌ ಚುನಾಯಿತ ಪ್ರತಿನಿಧಿಗಳೂ ಆಗಿರಲಿಲ್ಲ. ಆದರೆ, ಜನರ ಹಿತಕ್ಕಾಗಿ ಅವರು ಕೆರೆ ಕಟ್ಟೆ ಕಟ್ಟಿಸಿದ್ದಾರೆ. ಭರಮಸಾಗರ ಕೆರೆಯನ್ನು ಭರಮಣ್ಣ‌ನಾಯಕ ಕಟ್ಟಿಸಿದ್ದು, ಈಗ ನೀರು ತುಂಬಿದೆ. ರೈತರು ಸಂತಸದಿಂದ ಇದ್ದಾರೆ ಎಂದರು. ಭರಮಸಾಗರ ಏತ ನೀರಾವರಿ ಯೋಜನೆಯಡಿ 42 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಪ್ರತಿ ಕೆರೆಗೂ ಅದರದ್ದೇ ಆದ ಮಹತ್ವ ಇದೆ. ಭರಮಣ್ಣನಾಯಕ ಕೆರೆ 300 ವರ್ಷಗಳ ಬಳಿಕ ತುಂಬಿತು. ಕಾತ್ರಾಳು ಕೆರೆ 1902 ರಲ್ಲಿ ರಚನೆ ಅಯಿತು ಎಂದು ಹೇಳಲಾಗುತ್ತಿದೆ. ಇವೆಲ್ಲ ಮಾಹಿತಿಗಳು ಮುಂದಿನ ಪೀಳಿಗೆಗೆ ಬೇಕು. ಕೆರೆ ಯಾರು ನಿರ್ಮಿಸಿದರು, ಅದರ ವಿಸ್ತೀರ್ಣವೆಷ್ಟು ಎಂಬಿತ್ಯಾದಿ ಇತಿಹಾಸ ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ತರಳಬಾಳು ಮಠ ಇಚ್ಛಿಸಿದೆ. ಸಂಶೋಧಕರ ನೆರವು ಪಡೆದು ಲೇಖನ ಪೂರೈಸುವ ಜವಾಬ್ದಾರಿಯ ಚಿಕ್ಕಪ್ಪನಹಳ್ಳಿ ಷಣ್ಮುಖ ಅವರಿಗೆ ನೀಡಲಾಗಿದೆ ಎಂದು ತರಳಬಾಳು ಶ್ರೀ ಹೇಳಿದರು. ಈಗ ಕೆರೆ ಏರಿ ಮುಂತಾದವುಗಳ ನಿರ್ಮಿಸಲು ಜೆಸಿಬಿ ಯಂತ್ರಗಳಿವೆ. ಅಂದು ಜನತೆ ದೈಹಿಕ ಶ್ರಮದಿಂದ ಕೆರೆ ಕಟ್ಟಿದ್ದಾರೆ. ಅವರಿಗೆ ಕೃತಜ್ಞರಾಗಿರ ಬೇಕು. ಕೆರೆಗಳಿಗೆ ನೀರು ಹರಿದು ಬಂದಿದ್ದು ದುಡಿಮೆಯ ಫಲವನ್ನು ಸರಿಯಾದ ದಿಕ್ಕಿನಲ್ಲಿ ಬಳಸಿಕೊಳ್ಳಿ. ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ ಸುರಿಯಬೇಡಿ ಎಂದು ಶ್ರೀಗಳು ಸಲಹೆ ಮಾಡಿದರು. ಸಂಸದ ಜಿಎಂ ಸಿದ್ದೇಶ್ವರ ಮಾತನಾಡಿ, ತರಳಬಾಳು ಶ್ರೀಗಳ ಪ್ರಯತ್ನದಿಂದಾಗಿ ಹಲವು ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬಂದಿದೆ. ಉಬ್ರಾಣಿ, ಸಾಸಿವೆಹಳ್ಳಿ, ಜಗಳೂರು ಏತ ನೀರಾವರಿ ಅನುಷ್ಠಾನಕ್ಕೆ ಬಂದಿವೆ. ಬೇಲೂರು ಮತ್ತು ಹಳೆಬೀಡು ಪ್ರದೇಶದಲ್ಲೂ ಕೂಡ ಕೆರೆಗೆ ನೀರು ತಂದಿದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಿವಿ ಹಿಂಡಿ ಯೋಜನೆ ಜಾರಿಗೆ ಶ್ರಮಿಸಿದ್ದಾರೆ. ಸಾಸ್ವೇಹಳ್ಳಿ ಏತ ನೀರಾವರಿ ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಕೊಂಚ ವಿಳಂಬವಾಗಿದೆ ಎಂದರು. ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಹೋರಾಟ ಕಟ್ಟಿ 25 ವರ್ಷಗಳಾಗಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರಕ್ಕೆ ಒತ್ತಾಯ ಮಾಡಿದರೂ ನಿಧಾನಗತಿಯಲ್ಲಿ ಸಾಗಿದೆ. ಆದರೆ ಯಾರೂ ಮನವಿ ಮಾಡದಿದ್ದರೂ, ಯಾರೊಬ್ಬ ರೈತರು ಪ್ರಸ್ತಾಪ ಮಾಡದಿದ್ದರೂ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ತಮ್ಮ ಚಿಂತನೆ ಹಾಗೂ ಇಚ್ಚಾಶಕ್ತಿಯಿಂದಾಗಿ ಏತ ನೀರಾವರಿ ಯೋಜನೆ ರೂಪಿಸಿ ಸಾಕಾರಗೊಳಿಸಿದ್ದಾರೆ. 565 ಕೋಟಿ ರುಪಾಯಿ ವೆಚ್ಚದ ಯೋಜನೆ ಇದಾಗಿದ್ದು 42 ಕೆರೆಗಳಲ್ಲಿ ತುಂಗಭದ್ರೆ ನೀರು ಸಂಗ್ರಹವಾಗಿದೆ. ಉಪಕಾರ ಸ್ಮರಣೆ ಮಾಡುವ ಗುಣವ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು. ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್, ಬಿಜೆಪಿ ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್. ಕೆರೆ ವೀಕ್ಷಣೆ ಉಸ್ತುವಾರಿ ಜಿ.ಬಿ.ತೀರ್ಥಪ್ಪ, ನೀರಾವರಿ ಅನುಷ್ಠಾನ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್, ಮುಖಂಡ ಜಿ.ಬಿ.ಶೇಖರ್, ಕೋಟೆ ಶಿವಕುಮಾರ್, ಸತ್ಯನಾರಾ ಯಣ ರೆಡ್ಡಿ, ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್, ರೈತ ಮುಖಂಡ ಹಿರೇಕಬ್ಬಿಗೆರೆ ನಾಗರಾಜ್, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜ್, ನೇತ್ರ ತಜ್ಞ ಡಾ.ಉಜ್ಜಿನಪ್ಪ, ಬಿಜೆಪಿ ಮುಖಂಡ ನಂದಿ ನಾಗರಾಜ್, ನೀರಾವರಿ ಇಲಾಖೆ ಇಂಜಿನಿಯರುಗಳಾದ ಮಂಜುನಾಥ್, ಅಣ್ಣಪ್ಪ,ಇದ್ದರು.