ಸಾರಾಂಶ
ಚಿತ್ರದುರ್ಗ : ಎಲ್ಲ ಮಠಗಳಿಗೆ ಹೋಗಿ ಸ್ವಾಮೀಜಿಗಳಿಗೆ ಅಡ್ಡ ಬಿದ್ದು ಕಾಣಿಕೆ ನೀಡಿ ಬರ್ತೇವೆ, ಆದರೆ ನಮ್ಮ ಸ್ವಾಮೀಜಿ ಯಾರು ಎಂಬ ಪ್ರಶ್ನೆ ಮೂಡಿದೆ.
ಇಂತಹದ್ದೊಂದು ಜಿಜ್ಞಾಸೆ ಶನಿವಾರ ನಡೆದ ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಮೂಡಿ ಬಂದಿತು. ಚಿತ್ರದುರ್ಗದ ನೀಲಕಂಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಪಿ.ರಮೇಶ್ ಇಂತಹದ್ದೊಂದು ಪ್ರಶ್ನೆ ಹರವಿದರು. ಎಲ್ಲರೂ ತಮ್ಮ ಸಮುದಾಯಗಳಿಗೆ ಸ್ವಾಮೀಜಿಗಳ ಮಾಡಿಕೊಂಡಿದ್ದಾರೆ. ಆದರೆ ನಮಗೆ ಸ್ವಾಮಿಗಳಾರು ಎನ್ನುವ ಗೊಂದಲದಲ್ಲಿ ಇದ್ದೇವೆ ಎಂದರು.
ನಮ್ಮ ಸಮಾಜ ಎಂದು ಎಲ್ಲರು ತಿಳಿದುಕೊಂಡಾಗ ಮಾತ್ರ ಸಮಾಜ ಬೆಳೆಯಲು, ಗಟ್ಟಿಯಾಗಲು ಸಾಧ್ಯವಿದೆ. ಇದಕ್ಕಾಗಿ ನಮ್ಮಲ್ಲಿನ ಕೀಳರಿಮೆ ಬಿಟ್ಟು ಸಮಾಜಕ್ಕೆ ಏನು ಮಾಡಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಆರ್ಥಿಕವಾಗಿ ಕುಂಚಿಗ ವೀರಶೈವ ಲಿಂಗಾಯತ ಸಮಾಜ ಬಲವಾಗಬೇಕಿದೆ. ಮುಂದಿನ ವರ್ಷದಿಂದ ಇಂತಹ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಬೇಕಾಗಿರುವುದರಿಂದ ದಾನಿಗಳು ದೊಡ್ಡ ಮನಸ್ಸು ಮಾಡಿ ಆರ್ಥಿಕ ನೆರವು ನೀಡಬೇಕು. ಇದರಿಂದ ಸಮಾಜಮುಖಿಯಾಗಿ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಹಾಗೂ ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಎಂ.ಬಿ.ತಿಪ್ಪೇರುದ್ರಪ್ಪ, ಸಮಾಜ ಬಲಿಷ್ಠವಾಗಿ ಬೆಳೆಯಬೇಕಾದರೆ ದಾನಿಗಳು ಮುಂದೆ ಬರಬೇಕು.
ಕಳೆದ ಹನ್ನೆರಡು ಹದಿಮೂರು ವರ್ಷಗಳಿಂದಲೂ ಕುಂಚಿಗ ವೀರಶೈವ ಲಿಂಗಾಯತ ಸಮಾಜ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿ ಸನ್ಮಾನಿಸುತ್ತಿದೆ. ಇದಕ್ಕೆ ಜನಾಂಗದ ಎಲ್ಲರೂ ಕೈಜೋಡಿಸುತ್ತ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದ್ಧೂರಿಯಾಗಿ ಸಮಾರಂಭ ಮಾಡಬೇಕಾಗಿರುವುದರಿಂದ ಉಳ್ಳವರು ಧಾರಳವಾಗಿ ಸಮಾಜಕ್ಕೆ ನೆರವು ನೀಡಬೇಕೆಂದು ತಿಳಿಸಿದರು.
ಕುಂಚಿಗ ವೀರಶೈವ ಲಿಂಗಾಯತ ಸಮಾಜ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಬಲವಾಗಬೇಕಾಗಿದೆ. ಮಕ್ಕಳನ್ನು ಕಡ್ಡಾಯವಾಗಿ ಶಿಕ್ಷಣವಂತರನ್ನಾಗಿಸುವ ಜವಾಬ್ದಾರಿ ಪೋಷಕರುಗಳ ಮೇಲಿದೆ ಎಂದು ಹೇಳಿದರು.
ಸಮಾಜದ ಮುಖಂಡ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಎಲ್ಲರೂ ಒಂದೆ ಎಂಬ ಭಾವನೆ ಮೂಡಬೇಕಾಗಿರುವುದರಿಂದ ಕುಂಚಿಗ ವೀರಶೈವ ಲಿಂಗಾಯತರು ಮೊದಲು ಸಂಘಟಿತರಾಗಬೇಕು. ಅದಕ್ಕಾಗಿ ಪರಸ್ಪರ ಸಹಕಾರ ಮುಖ್ಯ. ಜನಾಂಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಸನ್ಮಾನಿಸಿದರೆ ಇತರೆಯವರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡರ್ಮಾಲಜಿಸ್ಟ್ ಡಾ.ಯೋಗೇಂದ್ರ, ಸಮಾಜದಿಂದ ಸನ್ಮಾನ ಮಾಡಿರುವುದು ಇನ್ನು ಹೆಚ್ಚಿನ ಸೇವೆಗೆ ಸ್ಪೂರ್ತಿ ನೀಡಿದಂತಾಗಿದೆ. ಚಿತ್ರದುರ್ಗದಲ್ಲಿ ನ.8, 9, 10 ರಂದು ಚರ್ಮ ರೋಗ ವೈದ್ಯರ ಸಮ್ಮೇಳನ ನಡೆಸುವ ಕುರಿತು ಚಿಂತನೆಯಿದೆ. ಐದು ನೂರರಿಂದ ಆರುನೂರು ವೈದ್ಯರುಗಳು ಭಾಗವಹಿಸುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಚರ್ಮ ರೋಗಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದಿಂದ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಿ. ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಕಾರ್ಯದರ್ಶಿ ಎಚ್.ಕುಬೇರಪ್ಪ ದಗ್ಗೆ, ಕಳೆದ ಹದಿಮೂರು ವರ್ಷಗಳಿಂದಲೂ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಂಡು ಬರುತ್ತಿದ್ದೇವೆ. ಪ್ರತ್ಯೇಕ ಕಚೇರಿ, ಕಟ್ಟಡವಿದೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರವು ನೀಡಿದರೆ ಇನ್ನು ದೊಡ್ಡ ಕಟ್ಟಡ ನಿರ್ಮಿಸೋಣ ಎಂದು ಹೇಳಿದರು.
ಕುಂಚಿಗ ವೀರಶೈವ ಲಿಂಗಾಯತ ಸಮಾಜದ ಸಹ ಕಾರ್ಯದರ್ಶಿ ನಿವೃತ್ತ ಡಿವೈಎಸ್ಪಿ ಎಸ್.ಪಿ.ಬಸವರಾಜ್, ಕೃಷ್ಣಮೂರ್ತಿ ಜಿ. ಡಾ.ಅರವಿಂದ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಲ್.ಬಿ.ರಾಜಶೇಖರಪ್ಪ ವೇದಿಕೆಯಲ್ಲಿದ್ದರು.ನಿರ್ದೇಶಕರಾದ ಜಿ.ಆರ್.ರಾಜಪ್ಪ, ಪಿ.ಶಿವಪ್ರಕಾಶ, ಬಿ.ಟಿ.ವಿಶ್ವನಾಥ, ಲವಕುಮಾರ್, ಓಂಕಾರಪ್ಪ, ಯೋಗೇಂದ್ರಪ್ಪ, ಸ್ವಾಮಿ, ನಿವೃತ್ತ ಉಪನ್ಯಾಸಕ ಹರೀಶ್, ಸಿದ್ದಪ್ಪ ಎಂ.ತಿಪ್ಪೇರುದ್ರಪ್ಪ ಸೇರಿದಂತೆ ಸಮಾಜದ ಅನೇಕ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ಅರವಿಂದ ಪಾಟೀಲ್ ಸೇರಿದಂತೆ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.