ಪುತ್ತೂರು: ನಮ್ಮ ಮೇಲೆ ಸೈನಿಕರ ಋಣ ಅಪಾರವಾಗಿದೆ. ಸೈನಿಕರ ನೆನಪಿಗಾಗಿ ಪ್ರತಿದಿನ ಬೆಳಗುವ ಜ್ಯೋತಿ ಕೇವಲ ಒಂದು ಬೆಳಕು ಅಲ್ಲ. ಅದು ನಮ್ಮ ವೀರಯೋಧರ ತ್ಯಾಗವನ್ನು ಸದಾ ನೆನಪಿಸುವ ಕೃತಜ್ಞತೆಯ ಜ್ಯೋತಿ. ಸೈನಿಕ ದೇವೋಭವ ಎಂದು ಹೇಳಬೇಕಾದುದು ನಮ್ಮ ಸಂಕಲ್ಪವಾಗಬೇಕು ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅಭಿಪ್ರಾಯಪಟ್ಟರು.
ಅವರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಮಾರ್ಗದರ್ಶನದಲ್ಲಿ 4ನೇ ಬಾರಿಗೆ ಪುತ್ತೂರಿನ ಎನ್.ಎಸ್. ಕಿಲ್ಲೆ ಮೈದಾನಲ್ಲಿನ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಆಚರಿಸಲಾದ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ವಿಸ್ತರಣಾ ಪ್ರಮುಖ್ ಪುಷ್ಪರಾಜ್ ಮಾತನಾಡಿ, ಸೈನಿರ ತ್ಯಾಗ ಮತ್ತು ಸೇವೆ ಅನನ್ಯ. ತಮ್ಮ ಪ್ರೀತಿ ಪಾತ್ರವನ್ನು ಬಿಟ್ಟು ಪ್ರಾಣದ ಹಂಗನ್ನೂ ತೊರೆದು ದೇಶಕ್ಕಾಗಿ ಹೋರಾಡುವ ಸೈನಿಕರ ತ್ಯಾಗವನ್ನು ನಾವು ಎಷ್ಟು ಗೌರವಿಸಿದರೂ ಕಡಿಮೆಯೇ ಎಂದರು.ದಿಕ್ಸೂಚಿ ಭಾಷಣ ಮಾಡಿದ ನಿವೃತ್ತ ಸೈನಿಕ, ಸಮಿತಿಯ ಲೆಕ್ಕ ಪತ್ರ ಪ್ರಮುಖರಾದ ದಯಾನಂದ, ಕಾರ್ಗಿಲ್ ಯುದ್ಧದ ಹಿನ್ನೆಲೆ, ಅದರ ಮಹತ್ವ, ಕಾರ್ಗಿಲ್ ಯುದ್ಧದಲ್ಲಿ ನಡೆದ ಘಟನೆಗಳು ಹಾಗೂ ಅಮರ ಜ್ಯೋತಿಯ ಕುರಿತು ಮಾಹಿತಿಗಳನ್ನು ತಿಳಿಸಿಕೊಟ್ಟರು.ನಿವೃತ್ತ ಯೋಧರಾದ ಸುಂದರಗೌಡ, ಕೆ.ಎಸ್.ಲಿಂಗಪ್ಪ, ಪುರಂದರ ಗೌಡ, ಉದನೇಶ್ವರ ಪ್ರಸಾದ್, ಚಂದ್ರಶೇಖರ ಗೌಡ ಅರಿಯಡ್ಕ, ಚಂಚಲಾಕ್ಷ ಬಿ. ಮತ್ತು ಜಯಂತ ಬೇಕಲ್ ಅವರನ್ನು ಸನ್ಮಾನಿಸಲಾಯಿತು. ದೇವಣ್ಣ, ತುಕಾರಾಮ, ಸಂತೋಷ್, ಸುಂದರ, ಪ್ರಭಾಕರ, ಪ್ರಕಾಶ್ ಅಣ್ಣಡ್ಕ, ಜ್ಞಾನೇಶ್ ಅವರು ಸನ್ಮಾನಿಸಿದರು. ಅತಿಥಿಗಳಿಂದ ಹಾಗೂ ಯೋಗಬಂಧುಗಳಿಂದ ಅಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಉಷಾ ದೇಶಭಕ್ತಿಗೀತೆ ಹಾಡಿದರು. ಶೈಲಾ ರೈ ಮತ್ತು ಚಂದ್ರಾವತಿ ವಂದೇ ಮಾತರಂ ಗೀತೆಯನ್ನು ಹಾಡಿದರು. ಕಾರ್ಯಕ್ರಮ ಸಂಚಾಲಕ ಮುರಳೀಧರ್ ನಾಯಕ್ ವಂದಿಸಿದರು. ಯಶೋಧ ನಿರ್ವಹಿಸಿದರು.