ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶವಾಗಿದ್ದರೂ ಮಳೆ ದುರ್ಬಲವಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆ ಕಣ್ಣಾಮುಚ್ಚಾಲೆಯಿಂದ ರೈತಾಪಿ ವರ್ಗದವರು ಮುಗಿಲಿನತ್ತ ಮುಖ ನೆಟ್ಟಿದ್ದು ಮುಂದಿನ ದಿನಗಳಲ್ಲಿ ಮಳೆಯ ಅಭಾವದಿಂದಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ವಿನ್ಸೆಂಟ್‌ ಎಂ.ಬಿ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಕೊಡಗು ಜಿಲ್ಲೆಗೆ ಮುಂಗಾರು ಪ್ರವೇಶವಾಗಿದ್ದರೂ ಮಳೆ ದುರ್ಬಲವಾಗಿದೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಳೆ ಕಣ್ಣಾಮುಚ್ಚಾಲೆಯಿಂದ ರೈತಾಪಿ ವರ್ಗದವರು ಮುಗಿಲಿನತ್ತ ಮುಖ ನೆಟ್ಟಿದ್ದು ಮುಂದಿನ ದಿನಗಳಲ್ಲಿ ಮಳೆಯ ಅಭಾವದಿಂದಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯ ಬಹುತೇಕ ಕೃಷಿಕರು ನೈಸರ್ಗಿಕ ಮಳೆಯನ್ನೇ ಅವಲಂಭಿತರಾಗಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಜಿಲ್ಲೆಯಲ್ಲಿ ವರ್ಷದ ಆರಂಭದಲ್ಲೇ ಉತ್ತಮ ಮಳೆ ಸುರಿದಿದ್ದರಿಂದ ಕೆರೆಕಟ್ಟೆಗಳಲ್ಲಿ ನೀರು ಶೇಖರಣೆಗೊಂಡಿತು. ಇದರಿಂದ ಕೃಷಿಕರಿಗೆ ಪೂರಕ ವಾತಾವರಣ ದೊರಕಿತ್ತು. ಇದರಿಂದ ಕೃಷಿಕರ ಮೊಗದಲ್ಲಿ ಕೊಂಚ ಮಂದಹಾಸ ಮೂಡಿತ್ತು. ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಬಿಸಿಲಿನ ತಾಪಮಾನ ಅಧಿಕಗೊಂಡಿರುವುದು ಒಂದೆಡೆಯಾದರೆ ಕಾಫಿ ತೋಟಗಳ ಮಾಲೀಕರು ಕಾಫಿ ತೋಟದಲ್ಲಿ ತಾವು ಶ್ರಮಪಟ್ಟು ಬೆಳೆಸಿದ ಕಾಫಿ ಗಿಡಗಳನ್ನುಸುಡು ಬಿಸಿಲಿನ ಹೊಡೆತದಿಂದ ರಕ್ಷಿಸುವ ದಿಸೆಯಲ್ಲಿ ಸಾಕಷ್ಟು ಹಣ ವ್ಯಯಿಸಿದ್ದಾರೆ. 4-5 ಬಾರಿ ಕಾಫಿ, ಇತರ ಗಿಡಗಳಿಗೆ ನೀರು ಹಾಯಿಸುವ ಮೂಲಕ ತೋಟದ ಗಿಡಗಳನ್ನು ಸಂರಕ್ಷಿಸಿಕೊಂಡಿದ್ದಾರೆ.

ಈ ಬಾರಿಯ ಬಿಸಿಲಿನ ತಾಪಮಾನವು ಸಾಕಷ್ಟು ಪ್ರಮಾಣದಲ್ಲಿ ಹಣ ವಿನಿಯೋಗಗೊಳಿಸುವಂತೆ ಮಾಡಿದ್ದಲ್ಲದೆ ಕಾಫಿ ಬೆಳೆಗಾರರು ಹಾಗೂ ಕೃಷಿ ಚಟುವಟಿಕೆ ನಡೆಸುವ ರೈತರು ಸಂಕಷ್ಟಕ್ಕೊಳಗಾಗುವಂತೆ ಮಾಡಿದೆ ಎಂದು ಕೃಷಿಕರು ಆಳಲು ತೋಡಿಕೊಂಡಿದ್ದಾರೆ.

ಈ ಜನವರಿಯಿಂದ ಇಂದಿನವರೆಗೆ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ 3.45 ಇಂಚು ಮಳೆಯಾಗಿದ್ದು, ಕಳೆದ ವರ್ಷ ಇದೇ ಜನವರಿಯಿಂದ ಇದೇ ದಿನಾಂಕದವರೆಗೆ 17.50 ಇಂಚು ಮಳೆಯಾಗಿತ್ತು. ಈ ಬಾರಿ ಮಳೆ ಬಹುಪಾಲು ಕುಂಠಿತಗೊಂಡಿರುವುದರಿಂದ ಕೃಷಿಕರು ತೀವ್ರ ಅತಂಕ ಪಡುವಂತಾಗಿದೆ. ಕೃಷಿ ಚಟುವಟಿಕೆ ಕಾರ್ಯಗಳು ಹಿನ್ನಡೆಗೊಳ್ಳಲಿವೆ.ಹಾರ್‌ಬೈಲ್ ವಿಭಾಗದಲ್ಲಿ ನೈಸರ್ಗಿಕ ಮಳೆಯನ್ನೇ ಅವಲಂಬಿಸಿ ಕೃಷಿ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದೇವೆ. ಕಳೆದ ಬಾರಿಗಿಂತ ೩ ಪಟ್ಟು ಮಳೆ ಕಡಿಮೆಯಾಗಿರುವುದರಿಂದ ಗದ್ದೆಯನ್ನು ಉಳುಮೆ ಮಾಡಿ ಹದಗೊಳಿಸುವ ಸಮಯ ಇದಾಗಿದ್ದು, ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕಡಿಮೆ ಅವಧಿಯಲ್ಲಿ ಬಿತ್ತನೆ ಬೀಜಗಳನ್ನು ಪಡೆದು ಕೃಷಿ ಕಾರ್ಯವನ್ನು ನಡೆಸುವಂತಾಗಿದೆ.

-ಮಾಗಲು ವಸಂತ, ನಿವೃತ್ತ ಯೋಧ, ಕೃಷಿಕ.ಮಳೆಯನ್ನು ಅವಲಂಬಿಸಿ ಕೃಷಿ ಚಟುವಟಿಕೆಯನ್ನೇ ನಿರ್ವಹಿಸುತ್ತಿರುವ ನಮಗೆ ಕಳೆದ ಬಾರಿ ಈ ಅವಧಿಗೆ ೨೦ ಇಂಚಿಗೂ ಅಧಿಕ ಮಳೆಯಾಗಿದ್ದು, ಈ ಬಾರಿ ಕೇವಲ ೪ ಇಂಚು ಇಲ್ಲಿಯವರೆಗೆ ಬಿದ್ದಿರುವುದರಿಂದ ಪ್ರತಿ ಬಾರಿ ನಾವು ೯೦ ದಿನಗಳ ಅವಧಿಯ ಬಿತ್ತನೆ ಬೀಜವನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಅದನ್ನು ಬಳಸಿಕೊಂಡರೆ ನಾವು ನಿರೀಕ್ಷಿಸಿದ ಇಳುವರಿ ದೊರೆಯುವುದಿಲ್ಲ. ಅಲ್ಲದೆ ಚಳಿ ಮಂಜು ಆರಂಭಗೊಂಡರೆ ಭತ್ತ ಜೋಲುಗೊಳ್ಳುತ್ತದೆ. ಇಂತಹ ಸಂಕಷ್ಟಗಳನ್ನು ರೈತರು ಎದುರಿಸಬೇಕಾಗಿದೆ. ಅಲ್ಲದೆ ಕಡಿಮೆ ಅವಧಿಯ ಭತ್ತದ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಬೇಕಾಗಿದೆ.

-ಪಟ್ಟೆಮನೆ ಉದಯಕುಮಾರ್, ಗದ್ದೆಹಳ್ಳದ ಸಮಗ್ರ ಕೃಷಿಕ.