ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಾಟಕಗಳು, ನಿರ್ದೇಶಕರು ಬೆಳವಣಿಗೆ ಆಗುತ್ತಿರುವ ಹೊತ್ತಿನಲ್ಲಿ ಪ್ರೇಕ್ಷಕರ ಸಂಖ್ಯೆ ಮಾತ್ರ ಕಡಮೆಯಾಗುತ್ತಿದೆ. ಪ್ರತಿಯೊಬ್ಬರೂ ಇದರ ಬಗ್ಗೆ ಮನನ ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಪ್ರೊ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.ನಗರದ ಕೆವಿಎಸ್ ಭವನದಲ್ಲಿ ಕರ್ನಾಟಕ ಬೀದಿನಾಟಕ ಅಕಾಡೆಮಿ, ಕರ್ನಾಟಕ ಸಂಘ, ಅನಿಕೇತನ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ನಡೆದ ಸಿಜಿಕೆ ಬೀದಿರಂಗ ದಿನ ನಾಟಕ, ಸಿಜಿಕೆ ರಂಗ ಪುರಸ್ಕಾರ ಹಾಗೂ ಹೋರಾಟದ ಹಾಡುಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಜಿಕೆ ಅವರು ಪೌರಾಣಿಕ ನಾಟಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಇದರ ಭಾಗವಾಗಿಯೇ ಹವ್ಯಾಸ ರಂಗ ಭೂಮಿಯಲ್ಲಿ ಬೀದಿ ನಾಟಕಗಳಿಗೆ ಒತ್ತು ನೀಡಿ ರಾಜ್ಯಾದ್ಯಂತ ಹೆಸರು ಮಾಡಿ ಗಮನ ಸೆಳೆದರು. ಸಾಣೇಹಳ್ಳಿಯಲ್ಲಿ ಸಿಜಿಕೆ ಅವರ ರಂಗಪ್ರೇಮ ಎಂತಹದ್ದು ಎಂಬುದು ತಿಳಿಯುತ್ತದೆ ಎಂದರು.ಮಂಡ್ಯದಲ್ಲಿ ಒಂದು ನಾಟಕ ಮಾಡಿ ಸಿಜಿಕೆ ಅವರೇ ಎಂದು ಕೇಳಿಕೊಂಡಾಗ ತಬರನ ಕಥೆಯನ್ನು ಕೇವಲ ಒಂದೇ ವಾರದಲ್ಲಿ ಪ್ರಸ್ತುತ ಪಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೇಣೀಕೃತ ಸಮಾಜದಲ್ಲಿರುವ ನಾವು ಹಿಂದುಳಿದ ವರ್ಗದ ಕಲಾವಿದರನ್ನು ಬೆಳೆಸಿದ್ದ ಸಿಜಿಕೆ ಅವರ ಸರಳತೆ ಇಂದಿಗೂ ಪ್ರಸ್ತುತ. ಸಿಜಿಕೆ ಅವರ ಕಾರ್ಯಕ್ರಮಗಳನ್ನು ತಲೆಮೇಲೆ ಹೊತ್ತು ಮಾಡುತ್ತಿರುವ ಸಂಸ ಸುರೇಶ ಅವರ ಗೌರವ ಮೆಚ್ಚಬೇಕು ಎಂದು ತಿಳಿಸಿದರು.
ಕರ್ನಾಟಕ ರಂಗ್ ಪರಿಷತ್(ಕೇಂದ್ರ ಸಮಿತಿ) ರಾಜ್ಯ ಸಂಚಾಲಕ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ, ಸಿ.ಜಿ.ಕೃಷ್ಣಸ್ವಾಮಿ ಅವರು ನಿಜವಾದ ಮುತ್ತು. ಇವರು ಹುಟ್ಟಿದ್ದು ಮಂಡ್ಯದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಹೆಸರು ಮಾಡಿದ್ದು ಕರ್ನಾಟಕದಾದ್ಯಂತ ಎಂದರು.ಮೈಸೂರು ರಂಗ ಸಂಘಟಕ ಕೆ.ಆರ್.ಗೋಪಾಲಕೃಷ್ಣ ಮಾತನಾಡಿ, ಸಾಮಾಜಿಕ ಬದುಕಿನೊಂದಿಗೆ ರಂಗ ಗೀತೆಯ ಮೂಲಕ ಬೀದಿ ನಾಟಕ ಪ್ರದರ್ಶನ ಮಾಡಿ ಜನಮನ್ನಣೆಗಳಿಸಿದ ಸಿಜಿಕೆ ಅವರು ಎಲ್ಲರಿಗೂ ಪ್ರೇರಣೆಯಾಗಿದ್ದರು ಎಂದು ಶ್ಲಾಘಿಸಿದರು.
ಇದೇ ವೇಳೆ ರಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಂ.ಬಾಲಕೃಷ್ಣ(ಇವರ ಪರವಾಗಿ ಸಹೋದರ ಯೋಗಾನಂದ), ಹುರುಗಲವಾಡಿ ರಾಮಯ್ಯ, ವಳಗೆರೆಹಳ್ಳಿ ಲೋಕೇಶ್, ಅಶ್ವಥ ನಾರಾಯಣ ಪಾಂಡವಪುರ, ಮಂಜುಳಾ ಆಲದಹಳ್ಳಿ ಅವರಿಗೆ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಅವರಿಗೆ ಸಿಜಿಕೆ ರಂಗಪುರಸ್ಕಾರ ಪ್ರಶಸ್ತಿ ನೀಡಿದರು.ಕಾರ್ಯಕ್ರಮದಲ್ಲಿ ಧನಗೂರು ಷಡಕ್ಷರ ಪೀಠ ಡಾ.ಕೂಡ್ಲೂರು ವೆಂಕಟಪ್ಪ, ಚಿತ್ರ ಕಲಾವಿದ ಕೃಷ್ಣರಾಯಚೂರ್, ಕರ್ನಾಟಕ ಬೀದಿನಾಟಕ ಅಕಾಡೆಮಿ ರಾಜ್ಯ ಸಂಘಟಕ ಸಂಸ ಸುರೇಶ್ ಭಾಗವಹಿಸಿದ್ದರು.