ಸಿದ್ದಾಪುರ: ಮಾಲ್ದಾರೆ ಗ್ರಾಪಂ ವ್ಯಾಪ್ತಿಯ ಬಾಡಗ ಬಾಣಂಗಾಲ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಶುಕ್ರವಾರ ಯಶಸ್ವಿಯಾಗಿ ಕಾಡಿಗೆ ಅಟ್ಟಿದೆ.

ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಹೊರಬಂದು ಕಾಫಿ ತೋಟದತ್ತ ಹೆಜ್ಜೆ ಹಾಕುತಿದ್ದ 2 ಮರಿಗಳು ಸೇರಿದಂತೆ ಒಟ್ಟು 9 ಕಾಡಾನೆಗಳ ಹಿಂಡಿನ್ನು ಸುರಕ್ಷಿತವಾಗಿ ಕಾಡಿಗೆ ಮರಳಿಸಲಾಯಿತು.ಕಾಡಾನೆಗಳ ಹಿಂಡು ತೋಟಕ್ಕೆ ಬರುತ್ತಿರುವ ಮಾಹಿತಿ ದೊರೆತ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಕಾರ್‍ಯಪ್ರವೃತ್ತರಾಗಿ ಕಾಡಾನೆಗಳನ್ನು ಸುರಕ್ಷಿತವಾಗಿ ಮರಳಿ ಅರಣ್ಯ ಪ್ರದೇಶದತ್ತ ಓಡಿಸುವಲ್ಲಿ ಯಶಸ್ವಿಯಾದರು. ಕಾರ್‍ಯಾಚರಣೆ ವೇಳೆ ಶಬ್ದ ಬಾಂಬ್‌ಗಳು ಸೇರಿದಂತೆ ವಿವಿಧ ಸುರಕ್ಷತಾ ಕ್ರಮಗಳನ್ನು ಬಳಸಲಾಯಿತು.ಕಾಡಾನೆಗಳ ಹಿಂಡು ಗ್ರಾಮ ಪ್ರದೇಶದಿಂದ ದೂರ ಸರಿದ ಹಿನ್ನೆಲೆಯಲ್ಲಿ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.ಕಾರ್‍ಯಾಚರಣೆಯನ್ನು ಚೆನ್ನಂಗಿ ಸೆಕ್ಷನ್‌ನ ಉಪ ವಲಯ ಅರಣ್ಯಾಧಿಕಾರಿ ಪಿ.ಟಿ. ಶಶಿ ನೇತೃತ್ವದಲ್ಲಿ ಆರ್‌ಆರ್‌ಟಿ ಸಿಬ್ಬಂದಿ ಯಶಸ್ವಿಯಾಗಿ ನಡೆಸಿದರು.