ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆ ಸಂಚರಿಸುತ್ತಿದ್ದರೆ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡು ಮನೆಯಲ್ಲಿ ಸಾಕಿದ ನಾಯಿಯನ್ನು ಎಳೆದುಕೊಂಡು ಹೋಗುತ್ತಿವೆ.

ಶನಿವಾರಸಂತೆ: ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೆ ಕಾಡಾನೆ ಸಂಚರಿಸುತ್ತಿದ್ದರೆ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡು ಮನೆಯಲ್ಲಿ ಸಾಕಿದ ನಾಯಿಯನ್ನು ಎಳೆದುಕೊಂಡು ಹೋಗುತ್ತಿವೆ. ಕೆಲವು ದಿನಗಳಿಂದ ಮಾಲಂಬಿ ಗ್ರಾಮದ ದೊಡ್ಡೆರೆ ಮೀಸಲು ಅರಣ್ಯದಿಂದ ಬರುವ ಕಾಡಾನೆಗಳು ಸಂಜೆಯಾದಂತೆ ಮುಖ್ಯ ರಸ್ತೆ ದಾಟಿ ಊರೊಳಗೆ ನುಸುಳುತ್ತಿದ್ದು, ಇದರಿಂದ ವಾಹನ ಸವಾರರು ಸೇರಿದಂತೆ ನಡೆದುಕೊಂಡು ಹೋಗುವ ಪಾದಚಾರಿಗಳು ಭಯಬೀತರಾಗಿದ್ದಾರೆ. ಸೋಮವಾರ ಬೆಳಗ್ಗೆ ದೊಡ್ಡರೆ ಮೀಸಲು ಅರಣ್ಯದಿಂದ ಬಂದ ಒಂಟಿ ಸಲಗವೊಂದು ಮಾಲಂಬಿ ಗ್ರಾಮದ ಗಿರಿಜನ ಹಾಡಿ ಮೂಲಕ ಸಂಚರಿಸಿ ಮುಖ್ಯ ರಸ್ತೆಯನ್ನು ದಾಟಿ ಪಕ್ಕದ ತೋಟದೊಳಗೆ ಹೋಗಿದೆ. ಈ ವೇಳೆ ಜನರು ಕೂಗಿಕೊಂಡಾಗ ಆನೆ ಅರಣ್ಯದೊಳಗೆ ಹೋಗಿದೆ. ಕೆಲವು ದಿನಗಳಿಂದ ಮಾಲಂಬಿ ದೊಡ್ಡೆರೆ ಅರಣ್ಯದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಸಂಜೆ ವೇಳೆ ಹೊಸಗುತ್ತಿ ರಸ್ತೆಯನ್ನು ದಾಟುತ್ತಿರುವುದನ್ನು ನೋಡಿ ವಾಹನ ಸವಾರರು ಆತಂಕಗೊಂಡಿದ್ದಾರೆ.

ರಾತ್ರಿ ಚಿರತೆ ಕಾಟ: ಕೆಲವು ದಿನಗಳಿಂದ ಮಾಲಂಬಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಸಾಕು ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸುತ್ತಿದೆ. ಮಾಲಂಬಿ ಗ್ರಾಮದ ಜಿ.ಎನ್. ವಸಂತ್ ಎಂಬವರ ಮನೆಯ ನಾಯಿ ನಾಪತ್ತೆಯಾಗಿದೆ ಮತ್ತು ವಸಂತ್ ಅವರ ಮನೆ ಅಂಗಳದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದೆ. ಒಟ್ಟಾರೆ ಕಾಡಾನೆ ಮತ್ತು ಚಿರತೆ ಕಾಟದಿಂದ ಮಾಲಂಬಿ ಗ್ರಾಮಸ್ಥರು ಕಂಗಲಾಗಿದ್ದಾರೆ.