ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

7ನೇ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬದಿಯ ಉದ್ದಕ್ಕಿರುವ ಆನೆಕಾಡುವಿನಿಂದ ಬಂದ ಕಾಡಾನೆಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಅಕ್ಕಪಕ್ಕದ ನಿವಾಸಿಗಳು, ವಾಹನ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ. ನಿತ್ಯವೂ ಹೆದ್ದಾರಿಯಲ್ಲಿ ರಾಜಾರೋಷವಾಗಿ ತಿರುಗಾಡುವ ಆನೆ ಇತ್ತೀಚೆಗೆ ರಾತ್ರಿ ವೇಳೆ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ವ್ಯಕ್ತಿ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದೆ. ಸಮಯ ಪ್ರಜ್ಞೆಯಿಂದ ಸವಾರ ಪಾರಾಗಿದ್ದಾರೆ. ಇದೇ ಸಂದರ್ಭ ಮತ್ತೊಂದು ಕಾಡಾನೆಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಗಿಳೀಟ್ಟು ಪಕ್ಕದ ತೋಟದೊಳಗೆ ಹೊರಟು ಹೋಗಿದೆ. ಕಾಡಾನೆ ಪ್ರತಿ ದಿನ ರಾತ್ರಿ ಎಂಟರ ಬಳಿಕ ತನ್ನ ನಿತ್ಯ ದಾರಿ ಮೂಲಕ ಹೆದ್ದಾರಿಗೆ ಇಳಿದು ಮೇಟ್ನಹಳ್ಳದ ಕಡೆಗೆ ಬಂದು ಆಹಾರವನ್ನು ಅರಸುತ್ತ ಪಕ್ಕದ ತೋಟಗಳ ಕಡೆಗೆ ಹೋಗುತ್ತದೆ. ಮೇಟ್ನಹಳ್ಳದ ರಸ್ತೆ ಬದಿಯಲ್ಲೇ ಆನೆ ಕಾವಲು ಕೇಂದ್ರ ಇದೆ. ಆದರೆ ಇದು ಕಳ್ಳಬೇಟೆ ತಡೆಯುವ ತಪಾಸಣಾ ಕೇಂದ್ರವಾಗಿದ್ದು, ಇವರಿಗೆ ಕಾಡಾನೆಗಳನ್ನು ಓಡಿಸುವ, ಈಗಾಗಲೇ ಅಳವಡಿಸಿರುವ ಬ್ಯಾರಿಕೇಡ್ ಅನ್ನು ಸುಸ್ಥಿತಿಯಲ್ಲಿಡುವ ಅಧಿಕಾರ ಇಲ್ಲ ಎಂಬ ವ್ಯಂಗ್ಯ ಮಾತು ಕೇಳಿಬರುತ್ತಿದೆ.

ಕೊಡಗು ಪ್ರವಾಸೋದ್ಯಮಕ್ಕೆ ತೆರೆದುಕೊಂಡ ಮೇಲೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಇಲ್ಲಿನ ಹೊಂಸ್ಟೇ, ರೆಸಾರ್ಟ್, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ಘರ್ಷಣೆ, ಹೊಡೆದಾಟ, ಸಾವು ನೋವುಗಳು ಸಂಭವಿಸಿದ್ದು ಇದೆ.

ಕೊಡಗರಹಳ್ಳಿ ಮತ್ತು ಉಪ್ಪುತೊಡು 7ನೇಹೊಸಕೋಟೆ ಹಾಗೂ ಕಂಬಿಬಾಣೆ, ಕೆದಕಲ್ ಹಾಗೂ ಹೊರೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮೀತಿ ಮಿರಿದ್ದು, ಕಾಫಿ ಬೆಳೆಗಾರರು, ಕೂಲಿ ಕೃಷಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಆನೆ ಮತ್ತು ಸಂಘರ್ಷ ಮಾಡು ಇಲ್ಲವೇ ಮಡಿ ಎಂಬ ಸ್ಥಿತಿಗೆ ತಲುಪಿದೆ.

ಯಾವುದೇ ಪರಿಹಾರ ಕ್ರಮಗಳು ಕಾಡಾನೆ ಹಾವಳಿಗೆ ಪರಿಹಾರವಲ್ಲ. ಆನೆಗಳನ್ನು ಸ್ಥಳಾಂತರಿಸಿ ಇಲ್ಲವೇ ನಮ್ಮನ್ನು ಸ್ಥಳಾಂತರಿಸಿ ಎಂಬ ಕೂಗು ಕೇಳಿಬರುತ್ತಿದ್ದು, ಜನರು ಸಂಘಟಿತರಾಗಿ ಬೀದಿಗಿಳಿಯಲು ಸಜ್ಜಾಗುತ್ತಿದ್ದಾರೆ. ಕಾಡಾನೆಗಳ ಸಂತತಿ 3 ಪಟ್ಟು ಹೆಚ್ಚಾಗಿದ್ದು, ಇತ್ತೀಚೆಗೆ ನಡೆದ ಗಜಗಣತಿ ಪ್ರಕಾರ ಕೊಡಗಿನಲ್ಲಿ ಅಂದಾಜು 1200ಕ್ಕೂ ಹೆಚ್ಚು ಕಾಡಾನೆಗಳು ನೆಲೆಕಂಡುಕೊಂಡಿವೆ.


ಶಾಸಕರ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು, ಸಂತ್ರಸ್ತರ ಸಭೆ ನಡೆದಿದ್ದರೂ ಯಾವುದೇ ಪರಿಹಾರ ಕ್ರಮಗಳು ಜಾರಿಗೊಳ್ಳದಿರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ನಿತ್ಯ ಸಂಚರಿಸುವ ಕಾಡಾನೆ ಬಗ್ಗೆ ಮಾಹಿತಿ ಬಂದಿದ್ದು, ಆನೆಯ ಚಲನವಲನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಹೆರೂರು, ನಾಕೂರು, ಕೊಡಗರಹಳ್ಳಿಯ ಅಂದಗೋವೆ ಪೈಸಾರಿಯಲ್ಲಿ ಸಂಚರಿಸಿ ಮರಳಿ ಆನೆಕಾಡುವಿಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆನೆಯನ್ನು ಸೆರೆಹಿಡಿಯುವ ಅಥವಾ ಪರ‍್ಯಾಯ ಮಾರ್ಗಗಳ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಮಾಹಿತಿ ನೀಡಿದ್ದಾರೆ.