ಹುಬ್ಬಳ್ಳಿ:

ಕಳೆದ 46 ವರ್ಷಗಳಿಂದ ಯಾವುದೇ ಕಪ್ಪುಚುಕ್ಕೆ ಇಲ್ಲದಂತೆ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಅಧಿಕಾರದ ಕುರ್ಚಿಗೆ ಅಂಟಿಕೊಂಡು ಕುಳಿತವನಲ್ಲ. ಮುಖ್ಯಮಂತ್ರಿಗಳು ಸೂಚಿಸಿದರೆ ತಕ್ಷಣ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ಇದ್ದರೆ ನನ್ನನ್ನು ಬದಲಿಸಲಿ ಎಂದು ಹೇಳಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಂದಲೂ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಬಂದಿಲ್ಲ. ಇದು ಕೇವಲ ಗಾಳಿ ಸುದ್ದಿ ಎಂದು ಸ್ಪಷ್ಟಪಡಿಸಿದರು.

ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಯಲ್ಲಿದ್ದಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅದನ್ನು ಹೊರತುಪಡಿಸಿ ಬೇರೆ ಏನು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವವರೆಗೂ ಸಭಾಪತಿ ಸ್ಥಾನದಲ್ಲಿರುವಷ್ಟು ಅಧಿಕಾರದ ಹಪಾಹಪಿ ನನಗಿಲ್ಲ. ಈ ಹಿಂದೆ ಸರ್ಕಾರ ಬದಲಾದಾಗಲೂ ವಿಧಾನಪರಿಷತ್ ಸಭಾಪತಿಯನ್ನು ಅಧಿಕಾರದ ಅವಧಿಗಿಂತ ಮುನ್ನವೇ ಕೆಳಗಿಳಿಸಿದ ಉದಾಹರಣೆ ಇಲ್ಲ. ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಸೂಕ್ತ ಕಾರಣ ಬೇಕು ಎಂದ ಅವರು, ಸಭಾಪತಿ ಆಗಲು ಹೆಚ್ಚಿನ ನಾಯಕರು ಈ ಹಿಂದೆ ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಕೆಲವರಿಗೆ ಸಭಾಪತಿ ಸ್ಥಾನದ ಮೇಲೆ ಪ್ರೀತಿ ಹೆಚ್ಚಿದಂತಿದೆ. ಇಬ್ಬರು ಕಾಂಗ್ರೆಸ್ ಸದಸ್ಯರು ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರೇ ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ನೀವು ಸಭಾಪತಿ ಸ್ಥಾನದಲ್ಲಿ ಮುಂದುವರಿಯಲು ನಮ್ಮ (ಕಾಂಗ್ರೆಸ್) ಕೆಲ ನಾಯಕರು ಕಿರಿಕಿರಿ ಮಾಡುತ್ತಿದ್ದಾರೆ ಎಂದು ಈ ಹಿಂದೆ ಮುಖ್ಯಮಂತ್ರಿ ನನಗೆ ತಿಳಿಸಿದ್ದರು. ಈ ಬಗ್ಗೆ ಮಾತನಾಡೋಣ ಎಂದು ಹೇಳಿದ್ದೆ. ಅವರ ಮೇಲೆ ಒತ್ತಡ ಇದ್ದರೆ ನನ್ನನ್ನು ಬದಲಿಸಲಿ ಎಂದರು.