ಸಾರಾಂಶ
ಮುಂಡರಗಿ: ದೇಶ ಉಳಿಸಲು ಬಿಜೆಪಿಗೆ ಮತ ಹಾಕಿ ಎಂದು ಗದಗ- ಹಾವೇರಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಅವರು ಮುಂಡರಗಿ ತಾಲೂಕಿನ ಕೊರ್ಲಹಳ್ಳಿ, ಶಿಂಗಟಾಲೂರು, ಬಾಗೇವಾಡಿ, ಬಿಡನಾಳ, ಹಮ್ಮಗಿ ಗ್ರಾಮಗಳಲ್ಲಿ ರೋಡ್ ಶೋ ಮಾಡುವ ಮೂಲಕ ಮತಯಾಚನೆ ಮಾಡಿ ಮಾತನಾಡಿದರು.ಕಳೆದ ಹತ್ತು ವರ್ಷದಲ್ಲಿ ದೇಶದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಯುಪಿಎ ಅವಧಿಯಲ್ಲಿ ದೇಶದ ಯಾವ ಭಾಗದಲ್ಲಿ ನೋಡಿದರೂ ಭಯೋತ್ಪಾದನಾ ಚಟುವಟಿಕೆಗಳು ನಡೆಯುತ್ತಿದ್ದವು. ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿದರೆ ಅಂದಿನ ಪ್ರಧಾನಿ ಮನಮೋಹನ ಸಿಂಗ್ ಪಾಕಿಸ್ತಾನಕ್ಕೆ ಪತ್ರ ಬರೆದು, ನಿಮ್ಮವರು ದಾಳಿ ಮಾಡಿದ್ದಾರೆ, ಅವರಿಗೆ ಹೇಳಿ ಎನ್ನುತ್ತಿದ್ದರು. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮೂಲಕ ನಿಮ್ಮ ದೇಶದ ಒಳಹೊಕ್ಕು ನಾವು ಹೊಡೆಯುತ್ತೇವೆ ಎಂಬ ಸಂದೇಶ ನೀಡುತ್ತಾರೆ. ಹೀಗಾಗಿ ಭಾರತದ ಬಗ್ಗೆ ಅವರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ ಎಂದು ಹೇಳಿದರು.
ಪ್ರಚಾರದ ನಡುವೆಯೆ ಮುಂಡರಗಿ ತಾಲೂಕಿನ ಶಿಂಗಟಾಲೂರಿನ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಶಾಸಕ ಡಾ.ಚಂದ್ರು ಲಮಾಣಿ ಹಾಜರಿದ್ದರು.ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಮುಖಂಡರಾದ ಲಿಂಗರಾಜಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ರವೀಂದ್ರ ಉಪ್ಪಿನಬೆಟಗೇರಿ, ಕೊಟ್ರೇಶಪ್ಪ ಅಂಗಡಿ, ವೀರಣ್ಣ ತುಪ್ಪದ, ಹೆಚ್ ವಿರುಪಾಕ್ಷಗೌಡ, ಮೈಲಾರಪ್ಪ ಉದಂಡಿ, ಕೋಪಣ್ಣ ಕೊಪ್ಪಣ್ಣವರ, ಚನ್ನವೀರಪ್ಪ ಎಲಿಗಾರ, ಭೀಮಸಿಂಗ್ ರಾಠೋಡ, ಬಸವರಾಜ ಬಿಳಿಮಗ್ಗದ, ಪ್ರಶಾಂತಗೌಡ ಗುಡದಪ್ಪನವರ, ರವೀಂದ್ರಗೌಡ ಪಾಟೀಲ, ರಜನಿಕಾಂತ್ ದೇಸಾಯಿ, ಶ್ರೀನಿವಾಸ ಅಬ್ಬಿಗೇರಿ, ಕುಮಾರಸ್ವಾಮಿ ಹಿರೇಮಠ, ಕೊಟ್ರೇಶ ಬೊಳ್ಳೊಳ್ಳಿ, ಹನುಮಂತ ಚಬ್ಬಿ, ಅಶೋಕ ಶಿಗೇನಹಳ್ಳಿ, ದೇವ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದಲ್ಲಿ ರೋಡ್ ಷೋ ಮಾಡುವ ಮೂಲಕ ಮತ ಯಾಚನೆಯನ್ನು ಮಾಡಿದರು. ಮತ ಯಾಚನೆಯ ಪೂರ್ವದಲ್ಲಿ ಗ್ರಾಮದ ಶಿಬಾರಗಟ್ಟಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡರು.