ಸಾರಾಂಶ
ಕಳ್ಳರು ತಾಲೂಕಿನ ಕರಲಹಳ್ಳಿ ಬಸವಣ್ಣನ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ.
ಮಾಗಡಿ: ಹಾಡುಹಗಲೇ ಮಹಿಳೆಯನ್ನು ಅಡ್ಡಗಟ್ಟಿ ಸರಗಳ್ಳತನ ಮಾಡಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಕಳ್ಳರು ತಾಲೂಕಿನ ಕರಲಹಳ್ಳಿ ಬಸವಣ್ಣನ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ.ಎರಡು ಬೈಕ್ನಲ್ಲಿ ಬಂದಿದ್ದ ಸರಗಳ್ಳರು ಬಸಣ್ಣನ ದೇವಾಲಯಕ್ಕೆ ಹೋಗುವ ರಸ್ತೆ ಯಾವುದೆಂದು ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಂದಿಗೆ ಮಾತನಾಡುತ್ತಲೇ ಅಂದಾಜು 30 ಗ್ರಾಂ. ತೂಕದ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ತಾಲೂಕಿನ ಸುಬ್ಬಾಶಾಸ್ತ್ರಿಪಾಳ್ಯದ ಪ್ರಭಾವತಿ ಎಂಬ ಮಹಿಳೆ ಕರಲಮಂಗಲ ಗ್ರಾಮಕ್ಕೆ ಹೋಗಿ ಸ್ವಗ್ರಾಮ ಸುಬ್ಬಾಶಾಸ್ತ್ರಿಪಾಳ್ಯಕ್ಕೆ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಹಿಂಬಾಲಿಸಿಕೊಂಡುಬಂದ ಸರಗಳ್ಳರು ಚಿನ್ನದ ಸರ ಕದ್ದು ಬೆಂಗಳೂರಿನ ಕಡೆ ಪರಾರಿಯಾಗಿದ್ದಾರೆ. ಡ್ಯೂಕ್ ಬೈಕ್:
ಕೆಂಪು ಬಣ್ಣದ ಡ್ಯೂಕ್ ಬೈಕ್ ಮತ್ತು ಪಲ್ಸರ್ ಬೈಕ್ನಲ್ಲಿ ಮೂವ್ವರು ಸರಗಳ್ಳರ ತಂಡ ಬಂದು ದರೋಡೆ ನಡೆಸಲಾಗಿದೆ ಎಂದು ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕತ್ತಿನಲ್ಲಿದ್ದ ಅಂದಾಜು 80 ಗ್ರಾಂ ಎರಡು ಎಳೆ ಚಿನ್ನದ ಸರದಲ್ಲಿ ಅರ್ಧ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದಾರೆ. ಉಳಿದ 50 ಗ್ರಾಂ ತೂಕದ ಚಿನ್ನದ ಸರ ಮಹಿಳೆಯ ಬಳಿಯೇ ಉಳಿದಿದೆ.ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಪ್ರವೀಣ್ ಮತ್ತು ಸಿಐ ಗಿರಿರಾಜ್ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದರು. ಸಿಸಿ ಕ್ಯಾಮೆರಾ ದೃಶ್ಯಾವಳಿಗಳಲ್ಲಿ ದರೋಡೆಕೋರರ ಚಲನವಲನಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸರಗಳ್ಳರ ಪತ್ತೆಗಾಗಿ ಎರಡು ಪೊಲೀಸರ ತಂಡಗಳು ಕಾರ್ಯಾಚರಣೆಗೆ ಬಿಡಲಾಗಿದ್ದು ಮಾಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.----
27ಕೆಆರ್ ಎಂಎನ್ 2.ಜೆಪಿಜಿಮಾಗಡಿ ತಾಲ್ಲೂಕಿನ ಕರಲಹಳ್ಳಿ ಬಸವಣ್ಣನ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿ ಮಹಿಳೆಯ ಸರಗಳ್ಳತನ ಆದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವುದು.