ಕೌಟುಂಬಿಕ ವ್ಯವಸ್ಥೆಗೆ ಮಹಿಳೆಯರು ಮಾದರಿ

| Published : Mar 22 2024, 01:02 AM IST

ಸಾರಾಂಶ

ಹಾಸನದ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಜಂಟಿಯಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಯೋಜಿಸಲಾಗಿತ್ತು.

ನ್ಯಾ.ಬಿ.ಎನ್. ಅಮರನಾಥ್ । ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ । ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಗುತ್ತಿರುವ ಮಹಿಳೆಕನ್ನಡಪ್ರಭ ವಾರ್ತೆ ಅರಸೀಕೆರೆ

ಶಿಕ್ಷಣ ಕಲಿತ ಹೆಣ್ಣು ಮಗಳು ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಗುರುವಾಗುವುದರ ಮೂಲಕ ಕೌಟಂಬಿಕ ವ್ಯವಸ್ಥೆಗೆ ಮಾದರಿಯಾಗಬಲ್ಲಳು. ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳ ಮೂಲಕ ತನ್ನನ್ನು ತಾನು ಗುರುತಿಸಿಕೊಳ್ಳುವುದರ ಮೂಲಕ ಸಮಾಜದ ಮುಖ್ಯ ವಾಹಿನಿಯಲ್ಲಿ ಸಾಗುತ್ತಿರುವುದು ಸ್ವಾಗತಾರ್ಹ ಎಂದು ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಎನ್.ಅಮರನಾಥ್ ಹೇಳಿದರು.

ನಗರದ ನ್ಯಾಯಾಲಯ ಆವರಣದಲ್ಲಿರುವ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ಮತ್ತು ವಕೀಲರ ಸಂಘ ಜಂಟಿಯಾಗಿ ಬುಧವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣೊಂದು ಕಲಿತರೆ ಮನೆಯಲ್ಲಿ ಒಂದು ಶಾಲೆಯೇ ತೆರೆದಂತೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಾರಂಭದಿಂದ ಇಂದಿನವರೆಗೂ ಹಂತ ಹಂತವಾಗಿ ಮಹಿಳೆಯರಿಗೆ ನ್ಯಾಯ ಸಿಗಲು ಪ್ರಾರಂಭವಾಗಿದೆ. ಈ ಬೆಳವಣಿಗೆಯಿಂದ ತಮ್ಮ ಹಕ್ಕುಗಳನ್ನು ಪಡೆಯಲು ಸಾದ್ಯವಾಗುತ್ತಿದೆ. ತಾನು ಹುಟ್ಟಿ ಬೆಳೆದ ಮನೆಗೆ ಮಗಳಾಗಿ, ಮದುವೆ ನಂತರ ಗಂಡನ ಮನೆಯಲ್ಲಿ ಸೊಸೆಯಾಗಿ ನಿಜವಾದ ಜವಾಬ್ದಾರಿಯೊಂದಿಗೆ ಕರ್ತವ್ಯ ಅರಿತು ಅರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ, ಕೌಟುಂಬಿಕವಾಗಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜೀವನ ರೂಪಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿರುವ ಮಹಿಳೆಯರು ಸಾಧನೆ ಮತ್ತು ಯಶಸ್ಸಿನೊಂದಿಗೆ ಗುರುತರ ನೆನಪುಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಹೆಣ್ಣು ಮಕ್ಕಳು ಕೌಟಂಬಿಕ ವ್ಯವಸ್ಥೆಯಲ್ಲಿ ಜ್ಞಾನವಂತೆಯಾಗಿ ಹಿರಿಯ, ಕಿರಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿ ಬೆಳೆಸಿದಲ್ಲಿ ದೇಶಕ್ಕೆ ಮತ್ತು ಸಮಾಜಕ್ಕೆ ಮಾದರಿಯಾಗುವ ಮೂಲಕ ಬೇರೆಯವರಿಗೂ ಉತ್ತೇಜನಕಾರಿ ಆಗಲು ಸಾದ್ಯವಿದೆ. ಕಳೆದ ಬಾರಿ ನ್ಯಾಯಾಂಗ ಇಲಾಖೆ ಮೂಲಕ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಅರಸೀಕೆರೆಗೆ ಪ್ರಥಮ ಸ್ಥಾನ ದೊರೆತಿದೆ. ಈ ಯಶಸ್ಸಿನ ಹಿಂದೆ ಎಲ್ಲ ವಕೀಲರ ಪಾತ್ರವಿದ್ದು, ಮುಂದಿನ ದಿನಗಳಲ್ಲಿ ಇದೇ ರಿತೀಯ ಸಹಕಾರ ಇರಲಿ ಎಂದರು.

ಅಪರ ಸಿವಿಲ್ ನ್ಯಾಯಾಧೀಶ ರಫೀಕ್ ಆಹಮದ್ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆ ಮೂಲಕ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಹಕ್ಕನ್ನು ನೀಡಲಾಗಿದೆ. ಈ ಹಕ್ಕುಗಳ ಮೂಲಕ ಹೆಚ್ಚು ಜವಾಬ್ದಾರಿಗಳನ್ನು ಹೊಂದುತ್ತಿರುವ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಸಾಧನೆ ಗುರುತುಗಳನ್ನು ಮೂಡಿಸುತ್ತಿದ್ದಾರೆ. ಮಹಿಳೆಯರು ತಮ್ಮ ಹಕ್ಕುಗಳನ್ನು ಎಷ್ಟು ಜಾಗ್ರತೆಯಾಗಿ ಸದುಪಯೋಗ ಮಾಡಿಕೊಳ್ಳುತ್ತಾರೆಯೋ ಅಲ್ಲಿ ಆರೋಗ್ಯಕರ ವಾತಾವರಣವನ್ನು ಕಾಣಬಹುದಾಗಿದೆ. ಹಕ್ಕುಗಳನ್ನು ಆರೋಗ್ಯಕರವಾಗಿ ಸದುಪಯೋಗ ಮಾಡಿಕೊಂಡಲ್ಲಿ ಜಾರಿಗೆ ಬಂದಂತಹ ವಿಶ್ವ ಮಹಿಳಾ ದಿನಾಚರಣೆಗೆ ಮಹತ್ವ ಬರಲು ಸಾದ್ಯವಾಗುತ್ತದೆ ಎಂದರು.

ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಧೀಶೆ ಜಿ.ಅನಿತಾ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಬಿ.ಜಿ. ರೂಪರಾಜ್, ಕಾರ್ಯದರ್ಶಿ ಜಿ.ಕೃಷ್ಣಮೂರ್ತಿ, ಹಿರಿಯ ವಕೀಲರಾದ ಕಲ್ಗುಂಡಿ ಹಿರಿಯಣ್ಣ, ವೈ.ಬಿ.ಚಂದ್ರಶೇಖರ್, ಆರ್.ವಿಜಯ ಕುಮಾರ್, ಸಿದ್ದಮಲ್ಲಪ್ಪ, ಪಿ.ನಟರಾಜು ಮಾತನಾಡಿದರು.

ವಕೀಲರಾದ ಅಮೂಲ್ಯ ನಿರೂಪಿಸಿದರು, ಪ್ರೀತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಎಸ್ ಮಲ್ಲೇಶ್, ಕೆ.ಎಸ್ ಲೋಕೇಶ್ ಕುಮಾರ್, ಎಂ.ಆರ್ ಸರ್ವೇಶ್, ರವಿ, ಓ.ಎ.ಶಿವಕುಮಾರ್, ಸವಿತಾ, ಗೀತಾ, ಶ್ವೇತಾ, ಉಮಾದೇವಿ, ಮಮತ, ರೋಜಾ, ಲಕ್ಷ್ಮೀ, ನ್ಯಾಯಾಂಗ ಇಲಾಖೆಯ ಮಹಿಳಾ ಸಿಬ್ಬಂದಿ ಮತ್ತು ವಕೀಲರು ಇದ್ದರು.ಅರಸೀಕೆರೆಯ ನ್ಯಾಯಾಲಯ ಆವರಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಅನಿತಾ ಉದ್ಘಾಟಿಸಿದರು.