ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಗುರುವಾರ ಯುವ ರೆಡ್ ಕ್ರಾಸ್ ಘಟಕ, ಐಕ್ಯೂಎಸಿ ಹಾಗೂ ಇಂಡಿಯನ್ ಡೆಂಟಲ್ ಅಸೋಶಿಯೇಶನ್ ಉಡುಪಿ ಜಿಲ್ಲೆ ಆಶ್ರಯದಲ್ಲಿ ‘ಮಹಿಳಾ ದಂತ ಆರೋಗ್ಯ ರಕ್ಷಣೆ ಮತ್ತು ಮಹಿಳಾ ಸಬಲೀಕರಣ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಉಡುಪಿ ಜಿಲ್ಲಾ ಇಂಡಿಯನ್ ಡೆಂಟಲ್ ಅಸೋಶಿಯೇಶನ್ ಅಧ್ಯಕ್ಷರಾದ ಡಾ. ಜಗದೀಶ್ ಜೋಗಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಹಲ್ಲಿನ ಮುರಿತಕ್ಕೆ ಕಾರಣವಾಗುವ ರಸ್ತೆ ಅವಘಡ ಮತ್ತು ಇತರ ಸಂದರ್ಭದಲ್ಲಿ ವಹಿಸಬೇಕಾದ ಜಾಗೃತಿ ಮತ್ತು ಪ್ರಥಮ ಚಿಕಿತ್ಸೆಯ ಕುರಿತು ಅರಿವು ಮೂಡಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್. ಮಾತನಾಡಿ, ವಿದ್ಯಾರ್ಥಿನಿಯರಿಗೆ ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಡಾ. ಶ್ರುತಿ ಆಚಾರ್ಯ ಅವರು ವಿದ್ಯಾರ್ಥಿನಿಯರಿಗೆ ತಮ್ಮ ದಂತದ ಆರೋಗ್ಯದ ಬಗ್ಗೆ ಪಾಲನೆ ಮತ್ತು ಪೋಷಣೆ ಮಾಡುವ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಇಂ.ಡೆಂ. ಅಸೋಶಿಯೇಶನ್ ಸಹಕಾರ್ಯದರ್ಶಿ ಡಾ. ಭಾರ್ಗವಿ, ಕೋಶಾಧಿಕಾರಿ ಡಾ. ವಿಜೇಶ್ ಶೆಟ್ಟಿ ಹಾಗೂ ಕಾಲೇಜಿನ ವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್. ಬಲ್ಲಾಳ್ ಉಪಸ್ಥಿತರಿದ್ದರು. ಕಾಲೇಜಿನ ನಿರ್ವಹಣಾ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ದಿವ್ಯ ಎಂ.ಎಸ್. ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡುಗಳನ್ನಾಡಿದರು. ಶ್ರಾವಣ್ಯ ಮೊಗವೀರ ನಿರೂಪಿಸಿದರು. ಮೇಘನಾ ಅವರು ವಂದಿಸಿದರು.