ಸಾರಾಂಶ
ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ‘ಸಕ್ಸಸ್ ಓವರ್ ಸ್ಟ್ರೆಸ್ : ಮೈಂಡ್ ಓವರ್ ಮ್ಯಾಟರ್’ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ‘ಸಕ್ಸಸ್ ಓವರ್ ಸ್ಟ್ರೆಸ್ : ಮೈಂಡ್ ಓವರ್ ಮ್ಯಾಟರ್’ ವಿಷಯದ ಮೇಲೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಡಾ. ಅನಿತಾ ಪಿ. ರಾವ್ ಮಾತನಾಡಿ, ಮಹಿಳೆಯರು ಕುಟುಂಬದ ಹಾಗೂ ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ. ಸುಸ್ಥಿರ ಸಮಾಜಕ್ಕೆ ಸಶಕ್ತ ಮಹಿಳೆಯ ಅಗತ್ಯತೆಯ ಕುರಿತು ತಿಳಿಸಿದರು. ಆಧುನಿಕ ಸಮಾಜದಲ್ಲಿ ಮಹಿಳೆ ಅನೇಕ ರೀತಿಯ ಒತ್ತಡಗಳನ್ನು ಎದುರಿಸುತ್ತಿದ್ದಾಳೆ. ಈ ಒತ್ತಡವನ್ನು ಕಡಿಮೆ ಮಾಡುವಲ್ಲಿ ಯೋಗ ಮತ್ತು ಧ್ಯಾನ ಸಹಕಾರಿ ಎಂದು ತಿಳಿಸಿದರು. ಇನ್ನೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕಿ ಲಕ್ಷ್ಮೀ ಜಿ. ನಾಯಕ್, ವಿದ್ಯಾರ್ಥಿಗಳಿಗೆ ಯೋಗ ಮತ್ತು ಧ್ಯಾನದ ಪ್ರಾತ್ಯಕ್ಷಿಯನ್ನು ನಡೆಸಿಕೊಟ್ಟರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಮಿಥುನ್ ಚಕ್ರವರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಎಲ್ಲಾ ಮಹಿಳಾ ಸಿಬ್ಬಂದಿಗೆ ಹೂ ನೀಡಿ ಶುಭ ಹಾರೈಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮ ಸಂಯೋಜಕರಾದ ಇತಿಹಾಸ ಉಪನ್ಯಾಸಕಿ ಪ್ರಶಾಂತಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಬಿಸಿಎ ಉಪನ್ಯಾಸಕಿ ಕುಮಾರಿ ದೇವಿಕಾ ಯು. ಉಡುಪ ವಂದಿಸಿದರು.