ಪುರುಷ ಪ್ರಧಾನ ವ್ಯವಸ್ಥೆಯಲ್ಲೂ ಮಹಿಳೆಯರ ಸಾಧನೆ: ಶಂಕರ ಹಲಗತ್ತಿ

| Published : Mar 24 2025, 12:34 AM IST

ಪುರುಷ ಪ್ರಧಾನ ವ್ಯವಸ್ಥೆಯಲ್ಲೂ ಮಹಿಳೆಯರ ಸಾಧನೆ: ಶಂಕರ ಹಲಗತ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಹಿತ್ಯ, ಸಂಗೀತ, ಶಿಕ್ಷಣ, ಉದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಅವಕಾಶ ಸಿಗದ ಸಂದರ್ಭದಲ್ಲೂ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ಪ್ರಶಂಸನೀಯ ಎಂದು ಶಂಕರ ಹಲಗತ್ತಿ ಹೇಳಿದರು.

ಧಾರವಾಡ: ಪುರುಷ ಪ್ರಧಾನ ವ್ಯವಸ್ಥೆಯಿರುವ ಇಂದಿನ ಕಾಲಘಟ್ಟದಲ್ಲೂ ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ಶೈಲಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ತಮ್ಮ ಸ್ಥಾನ ಭದ್ರಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಮಹಿಳೆಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಇಲ್ಲಿಯ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ನಾವೀಕಾ ರಂಗಭೂಮಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಾಂಸ್ಕೃತಿ ಉತ್ಸವ ಉದ್ಘಾಟಿಸಿದ ಅವರು, ಸಾಹಿತ್ಯ, ಸಂಗೀತ, ಶಿಕ್ಷಣ, ಉದ್ಯಮ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಅವಕಾಶ ಸಿಗದ ಸಂದರ್ಭದಲ್ಲೂ ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಂಡು ಮಹಿಳೆಯರು ಮೇಲುಗೈ ಸಾಧಿಸುತ್ತಿರುವುದು ಪ್ರಶಂಸನೀಯ ಎಂದರು.

ಕರ್ನಾಟಕ ಇನ್ಸಿಟ್ಯೂಟ ಆಫ್ ಕೋ ಆಪರೇಟಿವ ಮ್ಯಾನೇಜಮೆಂಟನ ಉಪನ್ಯಾಸಕಿ ರೂಪಾ ಪ್ರಶಾಂತ, ಸಹನೆಯ ಸಾಕಾರಮೂರ್ತಿಯಾದ ನಾರಿ, ನಾಡಿನ ಸಂಸ್ಕಾರ-ಸಂಸ್ಕೃತಿ ಉಳಿಸಿ,ಬೆಳೆಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾಳೆ. ಹಲವಾರು ಕ್ಷೇತ್ರಗಳಲ್ಲಿ ನಿರಂತರ ಶ್ರಮ,ಛಲದಿಂದ ಸಾಧನೆಗೈದ ಸಾಧಕಿಯರೆಲ್ಲರೂ ನಮಗೆ ಮಾದರಿ ಎಂದರು.

ರಂಗಭೂಮಿ ನಟ ಮಕಬೂಲ್ ಹುಣಸಿಕಟ್ಟಿ ಮಾತನಾಡಿ, ಜೀವನದಲ್ಲಿ ನಡೆದ, ನಡೆಯುವ ಅಥವಾ ನಡೆಯಲಿರುವ ಕಾಲ್ಪನಿಕ ಸನ್ನಿವೇಶಗಳನ್ನು ನಾಟಕದಲ್ಲಿ ಕಾಣುತ್ತೇವೆ.ರಂಗಭೂಮಿ ದೈಹಿಕ ಹಾಗೂ ಮಾನಸಿಕವಾಗಿ ನಮ್ಮನ್ನು ಸದೃಢಗೊಳಿಸುತ್ತದೆ ಹಾಗೂ ಸಂಬಂಧ ಗಟ್ಟಿಗೊಳಿಸುತ್ತದೆ ಎಂದರು.

ನಂತರ ಲೋಹಿತ ನಾಯ್ಕರ್ ರಚಿಸಿದ ಸಿ.ಡಿ. ಜಿಗಜಿನ್ನಿ ನಿರ್ದೇಶನದಲ್ಲಿ ನಾ ಬದುಕಲಿಕ್ಕೆ ಒಲ್ಲೆ ನಾಟಕ ಪ್ರದಶನಗೊಂಡಿತು. ಹಿರಿಯ ಕಲಾವಿದೆ ಕ್ಷಮಾ ಆನಂದ ಹೊಸಕೇರಿ ಅವರನ್ನು ಸನ್ಮಾನಿಸಲಾಯಿತು. ಅಶ್ವಿನಿ ಹಿರೇಮಠ ನಿರೂಪಣೆ, ಆರತಿ ದೇವಶಿಖಾಮಣಿ ಸ್ವಾಗತ, ಪದ್ಮಾವತಿ ದೇವಶಿಖಾಮಣಿ, ಎನ್.ರಾಜೇಶ್ವರಿ ಸುಳ್ಯ,ಸುಮಿತ್ರಾ ಬಡಿಗೇರ, ಕಮಲ ಕಂಚಗಾರ ಇದ್ದರು.