ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣವನ್ನು ಹಸಿರೀಕರಣಗೊಳಿಸುವುದರ ಜೊತೆಗೆ ಉದ್ಯಾನಗಳ ಅಭಿವೃದ್ಧಿ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ನಾವು ಶುದ್ಧ ಗಾಳಿ ಮತ್ತು ನೀರು ಒದಗಿಸಲು ಸಾಧ್ಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್.ಗೊಂಬಿ ಹೇಳಿದರು.

ಪುರಸಭೆಯ ಸಭಾಭವನದಲ್ಲಿ ೨೦೨೬-೨೭ನೇ ಸಾಲಿನ ಪುರಸಭೆ 2ನೇ ಆಯವ್ಯಯ ಮಂಡನೆ ನಿಮಿತ್ತ ಪುರಸಭೆ ಮುಖ್ಯಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೌಜಲಗಿ ನಿಂಗಮ್ಮ ಭವನ ಅಭಿವೃದ್ಧಿಪಡಿಸಿ ಅದನ್ನು ಬಳಕೆಯಾಗುವಂತೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ನೇಕಾರ ಮುಖಂಡ ಶಿವಲಿಂಗ ಟಿರ್ಕಿ ಮಾತನಾಡಿ, 2ನೇ ಬಜೆಟ್ ಸಭೆಗೆ ಉಪವಿಭಾಗಾಧಿಕಾರಿ ಬಂದಿಲ್ಲ ಹಾಗಾದರೆ ನಮ್ಮ ಸಮಸ್ಯೆಗಳನ್ನು ಪರಿಹರಿಸುವವರು ಯಾರು? ಎಂದು ಪ್ರಶ್ನಿಸಿದ ಅವರು, ಸಭೆಯನ್ನು ಬಹಿಸ್ಕರಿಸುತ್ತೇವೆಂದು ಹೇಳಿ ಸಭೆಯಿಂದ ಹೊರಹೋಗಲು ಎದ್ದು ನಿಂತರು. ಉಪವಿಭಾಗಾಧಿಕಾರಿ ಸಾರ್ವಜನಿಕ ಕುಂದುಕೊರತೆ ಸಭೆಗೆ ಬರಬೇಕು ಎಂದು ಒತ್ತಾಯಿಸಿದರು.

ನಂತರ ಪಟ್ಟಣದ ಚರಂಡಿ, ರಸ್ತೆ ಅಭಿವೃದ್ಧಿ, ಫುಟ್‌ಪಾತ್‌, ನಿವೇಶನ ಒದಗಿಸುವ, ನೀರಿನ ಟ್ಯಾಂಕ್‌ ದುರಸ್ತಿ, ರಾಯರ ಮಂದಿರದ ಹತ್ತಿರ ರಸ್ತೆ ಅಭಿವೃದ್ಧಿ, ಗಾಂಧಿ ವೃತ್ತ ಮತ್ತು ಡಬಲ್ ರಸ್ತೆಯಲ್ಲಿನ ವಿದ್ಯುತ್ ದೀಪ ಅಳವಡಿಕೆ, ಹಿಂದೂ ರುದ್ರ ಭೂಮಿಯ ಸ್ವಚ್ಛತೆ, ಪ್ರಮುಖ ವೃತ್ತಗಳಲ್ಲಿನ ಶೌಚಾಲಯ ಕಾಮಗಾರಿ, ಉದ್ಯಾನಗಳ ನಿರ್ವಹಣೆ, ಈಜುಕೊಳ, ರಸ್ತೆ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸುವುದು, ಸಂತೆಗಳಲ್ಲಿ ಸ್ವಚ್ಛತೆ ಮತ್ತು ರಸ್ತೆ ಅಗಲೀಕರಣ, ರಬಕವಿ ರಸ್ತೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು, ಎನ್‌ಕ್ರೋಚಮೆಂಟ್ ಗೆ ತಡೆ ಹೀಗೆ ವಿವಿಧ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.


ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀವು ಹೇಳಿದ ಎಲ್ಲ ಸಮಸ್ಯೆಗಳ ಕುರಿತು ಉಪವಿಭಾಗಾಧಿಕಾರಿಯೊಂದಿಗೆ ಚರ್ಚಿಸಿ ಕೈಲಾದ ಮಟ್ಟಿಗೆ ಪಟ್ಟಣದ ಅಭಿವೃದ್ಧಿಯ ಕಾಮಗಾರಿ ಮಾಡಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಸಿದ್ದು ಶಿರೋಳ, ಈಶ್ವರ ಮುರುಗೋಡ, ಚನಮಲ್ಲಪ್ಪ ಕರಡಿ, ಶಿವಾನಂದ ಹುನಶ್ಯಾಳ, ಪ್ರಕಾಶ ಕಾಗಿ, ಶಶಿಕಾಂತ ಜಗದಾಳ, ರಾಜೇಂದ್ರ ಮಿರ್ಜಿ ಸೇರಿದಂತೆ ಪುರಸಭೆ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.