ಕನ್ನಡಪ್ರಭ ವಾರ್ತೆ ಅಥಣಿ

ತಾಲೂಕಿನ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಶ್ರಮಿಕರ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. 18 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಂಡು ಕಾರ್ಮಿಕ ಸಚಿವರಿಂದ ಲೋಕಾರ್ಪಣೆ ಮಾಡಿಸಲಾಗುವುದು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ತಾಲೂಕಿನ ಚಿಕ್ಕಟ್ಟಿ ಬಳಿ ಸರ್ಕಾರಿ ಜಾಗದಲ್ಲಿ ಕಾರ್ಮಿಕ ಇಲಾಖೆಯ ಶ್ರಮಿಕರ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಥಣಿ ತಾಲೂಕಿನಲ್ಲಿ ನೋಂದಾಯಿತ ಏಳು ಸಾವಿರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನ ಪಡೆಯುವ ಜೊತೆಗೆ ಅವರ ಮಕ್ಕಳಿಗೆ 6 ರಿಂದ 12ನೇ ತರಗತಿಯವರಿಗೆ ಉಚಿತ ಶಿಕ್ಷಣ, ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುತ್ತದೆ. 350 ಮಕ್ಕಳ ಸಾಮರ್ಥ್ಯದ ಈ ಶಾಲೆಯ ನಿರ್ಮಾಣಕ್ಕೆ 8 ಎಕರೆ ಸರ್ಕಾರಿ ಜಾಗ ಪಡೆಯಲಾಗಿದೆ. ಬಾಲಕಿಯರ ಮತ್ತು ಬಾಲಕರ ಪ್ರತ್ಯೇಕ ವಸತಿ ಗೃಹಗಳು, ತರಗತಿಯ ಕೋಣೆಗಳು, ಗ್ರಂಥಾಲಯ, ಅಡುಗೆ ಕೋಣೆ, ಗೋದಾಮು, ಶೌಚಾಲಯ, ನೀರು ಮತ್ತು ನೈರ್ಮಲ್ಯ, ವ್ಯವಸ್ಥಿತವಾದ ಆಟದ ಮೈದಾನ, ರಸ್ತೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾರ್ಮಿಕರ ಮಕ್ಕಳ ಉಜ್ವಲ ಭವಿಷ್ಯಕ್ಕೆ ಬೆಳಕಾಗಲಿದೆ ಎಂದು ಹೇಳಿದರು.ತಂತ್ರಜ್ಞಾನ ಬೆಳದಂತೆ ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ. ಎಐ ತಂತ್ರಜ್ಞಾನ ಬಂದಿರುವುದರಿಂದ ಅನೇಕ ವಲಯದಲ್ಲಿನ ಉದ್ಯೋಗವಕಾಶಗಳು ನಿಂತುಹೋಗುವ ಆತಂಕ ಜನರನ್ನ ಕಾಡುತ್ತಿದೆ. ಆದ್ದರಿಂದ ಕೃಷಿಕರು ಮತ್ತು ಶ್ರಮಿಕ ವರ್ಗದವರು ಆಧುನಿಕ ಪದ್ಧತಿಯ ಶಿಕ್ಷಣ ಪಡೆಯಬೇಕು ಎಂಬ ಕನಸು ಹೊಂದಿರುತ್ತಾರೆ. ಅಂತಹ ಶಿಕ್ಷಣವನ್ನ ಮಕ್ಕಳಿಗೆ ನೀಡಬೇಕಾಗಿದೆ ಎಂದರು.ಮುಖಂಡ ಪ್ರಕಾಶ ಮಹಾಜನ ಮಾತನಾಡಿದರು. ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಆಶೀರ್ವಚನ ನೀಡಿದರು. ಈ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್‌, ಉಪಾಧ್ಯಕ್ಷೆ ಭುವನೇಶ್ವರಿ ಯಕoಚ್ಚಿ, ಕಾರ್ಮಿಕ ಕಲ್ಯಾಣ ಮಂಡಳಿಯ ಉಪ ಆಯುಕ್ತ ಪಿ.ಜಿ.ನಾಗೇಶ್, ಜಿಲ್ಲಾ ಕಾರ್ಮಿಕ ನಿರೀಕ್ಷಕ ಮಲ್ಲಿಕಾರ್ಜುನ ಜೋಗೇರಿ, ತಾಲೂಕ ಕಾರ್ಮಿಕ ನಿರೀಕ್ಷಕಿ ಭುವನೇಶ್ವರಿ ಢಾಲೆ, ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ರಾಜು ಗುಡೋಡಗಿ, ಸಯ್ಯದ ಅಮೀನ ಗದ್ಯಾಳ, ರಿಯಾಜ್ ಸನದಿ, ಆಸಿಫ್ ತಾಂಬೋಳಿ, ಮಲ್ಲಿಕಾರ್ಜುನ ಬುಟಾಳಿ, ಮಹಾಂತೇಶ ಟಕ್ಕಣ್ಣವರ, ತಾಲೂಕ ಕಟ್ಟಡ ನಿರ್ಮಾಣ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ ನಿಕ್ಕಂ, ಸುರೇಶ್ ಮೋಪಗಾರ, ಕುಮಾರ್ ಬಡಿಗೇರ್, ಅಪ್ಪಾಸಾಬ ಬೊಮ್ಮನಾಳ, ಕುಮಾರ ಮಾಳಿ, ಚಂದ್ರಶೇಖರ ಐಗಳಿ, ಗುತ್ತಿಗೆದಾರ ಪಿ.ಗಿರೀಶ್ ಸೇರಿ ಅನೇಕರು ಉಪಸ್ಥಿತರಿದ್ದರು.-----

ಕೋಟ್‌

ಅಥಣಿ ಪಟ್ಟಣದ ಟ್ರಾಫಿಕ್‌ ನಿಯಂತ್ರಣಕ್ಕೆ ₹ 24 ಲಕ್ಷ ವೆಚ್ಚದಲ್ಲಿ ಎಐ ತಂತ್ರಜ್ಞಾನದ ಹೈಟೆಕ್ ಕ್ಯಾಮೆರಾ ಸಿಗ್ನಲ್‌ ಅಳವಡಿಸುವ ಯೋಜನೆ ಹೊಂದಲಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಈ ಹೈಟೆಕ್ ಸಿಗ್ನಲ್ ಅಳವಡಿಸಲಾಗುವುದು. ಈಗಾಗಲೇ ₹1.25 ಕೋಟಿ ವೆಚ್ಚದಲ್ಲಿ ಪಟ್ಟಣದ ಹಸಿರು ಗಿಡಗಳನ್ನು ನೀಡಲಾಗುತ್ತಿದೆ. - ಲಕ್ಷ್ಮಣ ಸವದಿ, ಅಥಣಿ ಶಾಸಕರು