ಸಾರಾಂಶ
ಮಾಹೆ ಮಣಿಪಾಲ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗ ಮತ್ತು ಮೂಲ ವೈದ್ಯಕೀಯ ವಿಜ್ಞಾನಗಳ ವಿಭಾಗಗಳ ವತಿಯಿಂದ ವಿಶ್ವ ಅಂಗರಚನಾಶಾಸ್ತ್ರ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆ ಮಣಿಪಾಲ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಅಂಗರಚನಾಶಾಸ್ತ್ರ ವಿಭಾಗ ಮತ್ತು ಮೂಲ ವೈದ್ಯಕೀಯ ವಿಜ್ಞಾನಗಳ ವಿಭಾಗಗಳ ವತಿಯಿಂದ ವಿಶ್ವ ಅಂಗರಚನಾಶಾಸ್ತ್ರ ದಿನವನ್ನು ಆಚರಿಸಲಾಯಿತು.ಈ ಸಂಭ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಛಾಯಾಗ್ರಹಣ, ಚಿತ್ರ, ಕತೆ ಬರಹ ಸ್ಪರ್ಧೆಗಳು ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಾನವ ದೇಹದ ವಿವಿಧ ವ್ಯವಸ್ಥೆಗಳನ್ನು ತೋರಿಸುವ ಪ್ರದರ್ಶನ - ಪ್ರಾತ್ಯಕ್ಷಿಕೆಯು ದಿನದ ಮುಖ್ಯಾಂಶವಾಗಿತ್ತು. ಈ ಪ್ರದರ್ಶನವನ್ನು 800ಕ್ಕೂ ಹೆಚ್ಚು ಮಂದಿ ವೀಕ್ಷಿಸಿದರು.ಮಂಗಳೂರಿನ ಕೆಎಂಸಿ ಡೀನ್ ಡಾ.ಬಿ.ಉನ್ನಿಕೃಷ್ಣನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಂಗರಚನಾ ಶಾಸ್ತ್ರದ ಪಿತಾಮಹ ಆಂಡ್ರಿಯಾಸ್ ವೆಸಾಲಿಯಸ್ ಅವರಿಗೆ ಗೌರವ ಸಲ್ಲಿಸಲು ಪ್ರತಿವರ್ಷ ಅ.15ರಂದು ವಿಶ್ವ ಅಂಗರಚನಾ ಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ. ಅಂಗರಚನಾ ಶಾಸ್ತ್ರವನ್ನು ಹೆಚ್ಚು ಸುಲಭವಾಗಿ ಮತ್ತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಪರಿಚಯಿಸುವಲ್ಲಿ ಮಾಹೆಯ ಪ್ರಯತ್ನಗಳ ಕುರಿತು ಮಾತನಾಡಿದರು. ವೈದ್ಯಕೀಯ ಕಾಲೇಜುಗಳಿಗೆ ಮಾನವ ದೇಹದಾನದ ಮಹತ್ವವನ್ನು ಅವರು ಒತ್ತಿ ಹೇಳಿದರು.ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ.ಕೆ.ರಾಮನಾರಾಯಣ್, ಮೆಲಕಾ ಮಣಿಪಾಲ್ ವೈದ್ಯಕೀಯ ಕಾಲೇಜಿನ ಡೀನ್ ಡಾ. ಉಲ್ಲಾಸ್ ಕಾಮತ್ ಮತ್ತು ಅಂಗರಚನಾಶಾಸ್ತ್ರ ವಿಭಾಗದ ಸಂಯೋಜಕ ಡಾ.ಬಿನ್ಸಿ ಎಂ. ಜಾರ್ಜ್ ಉಪಸ್ಥಿತರಿದ್ದರು.ಸ್ನಿಗ್ಧಾ ಮಿಶ್ರಾ ಕಾರ್ಯಕ್ರಮ ನಿರೂಪಿಸಿದರು. ಡಾ.ಸುರೇಖಾ ಡಿ. ಶೆಟ್ಟಿ ಸ್ಪರ್ಧೆಯ ವಿಜೇತರನ್ನು ಘೋಷಿಸಿದರು ಮತ್ತು ಡಾ. ಅಶ್ವಿನಿ ಐತಾಳ್ ಪಿ. ವಂದಿಸಿದರು.