ಬಂಟ್ವಾಳ: ಯೋಗವು ಭಾರತ ವಿಶ್ವಕ್ಕೆ ನೀಡಿರುವ ಅಮೂಲ್ಯ ಕೊಡುಗೆಯಾಗಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವ ಪರಿಪೂರ್ಣ ವಿಜ್ಞಾನವಾಗಿದೆ ಎಂದು ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ನೀಡಿದ ಸಂದೇಶದಲ್ಲಿ ಅವರು, ಮಹರ್ಷಿ ಪತಂಜಲಿಯವರು ಯೋಗಶಾಸ್ತ್ರದ ಮೂಲಪುರುಷರಾಗಿದ್ದು, ಯೋಗಸೂತ್ರಗಳ ಮೂಲಕ ಮಾನವ ಕುಲಕ್ಕೆ ಅಪೂರ್ವ ಮಾರ್ಗದರ್ಶನ ನೀಡಿದ್ದಾರೆ ಎಂದರು.ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅವೆರಡರ ಸಮತೋಲನ ಜೀವನದ ಯಶಸ್ಸಿಗೆ ಅತ್ಯಗತ್ಯವಾಗಿದೆ. ಪ್ರಾಚೀನ ಭಾರತೀಯ ಪರಂಪರೆಯಲ್ಲಿ ಅಂತರಂಗದ ಸುಖ, ಶಾಂತಿ ಹಾಗೂ ಆತ್ಮಸಾಕ್ಷಾತ್ಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಹೇಳಿದರು.ಅಷ್ಟಾಂಗ ಯೋಗದ ಅಭ್ಯಾಸವು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ವೃದ್ಧಿಸುವುದರೊಂದಿಗೆ ಆಧ್ಯಾತ್ಮಿಕ ಬದುಕಿನತ್ತ ನಮ್ಮನ್ನು ಕೊಂಡೊಯ್ಯುತ್ತದೆ. ಯೋಗದ ಮೂಲಕ ವ್ಯಕ್ತಿಯು ಸಮತೋಲನಯುತ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಶ್ರೀಗುರುದೇವಾನಂದ ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.