ಪತಿಗೆ ಮಂತ್ರಿಗಿರಿ ದೊರೆಯಲೆಂದು ಪ್ರಾರ್ಥಿಸಿ ಅಲಾಯಿ ದೇವರ ಮೊರೆ ಹೋಗಿ ಸಕ್ಕರೆ ಓದಿಕೆ ಮಾಡಿಸಿದ್ದಾರೆ

ಕನಕಗಿರಿ: ಶಾಸಕ ಶಿವರಾಜ ತಂಗಡಗಿಗೆ ಸಚಿವ ಸ್ಥಾನ ದೊರೆಯಲೆಂದು ಪ್ರಾರ್ಥಿಸಿ ತಾಲೂಕಿನ ಕನ್ನೇರಮಡು ಗ್ರಾಮದ ಹುಸೇನಭಾಷಾ ಅಲಾಯಿ ದೇವರಿಗೆ ಪತ್ನಿ ವಿದ್ಯಾ ತಂಗಡಗಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.

ಚುನಾವಣಾ ಪೂರ್ವದಲ್ಲಿ ಪ್ರಚಾರಕ್ಕೆ ಬಂದಿದ್ದಾಗ ಈ ಗ್ರಾಮದ ಹುಸೇನಭಾಷಾ ಅಲಾಯಿ ದೇವರಿಗೆ ಪತಿ ತಂಗಡಗಿ ಅವರನ್ನು ಗೆಲ್ಲಿಸುವಂತೆ ಬೇಡಿಕೊಂಡಿದ್ದರು. ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಳಿಕ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇದೀಗ ಪತಿಗೆ ಮಂತ್ರಿಗಿರಿ ದೊರೆಯಲೆಂದು ಪ್ರಾರ್ಥಿಸಿ ಅಲಾಯಿ ದೇವರ ಮೊರೆ ಹೋಗಿ ಸಕ್ಕರೆ ಓದಿಕೆ ಮಾಡಿಸಿದ್ದಾರೆ.

ಇಲ್ಲಿಯೇ ಪೂಜೆ ಏಕೆ?

ಕನ್ನೇರಮಡು ಗ್ರಾಮ ಮಾತ್ರವಲ್ಲದೇ ಸುತ್ತಮುತ್ತಲಿನ ಬಹುತೇಕ ಗ್ರಾಮಗಳ ಜನ ಇಲ್ಲಿ ಬೇಡಿಕೊಂಡರೆ ಇಷ್ಟಾರ್ಥಗಳು ಪೂರೈಸುತ್ತವೆ ಎಂಬ ನಂಬಿಕೆ ಹೊಂದಿದ್ದಾರೆ. ಮುಸಲ್ಮಾನರಿಗಿಂದ ಹೆಚ್ಚು ಹಿಂದೂಗಳು ಈ ಅಲಾಯಿ ದೇವರಿಗೆ ನಡೆದುಕೊಳ್ಳುತ್ತಿದ್ದರಿಂದ ಎಲ್ಲ ಕಾರ್ಯ ಸಿದ್ಧಿಯಾಗಿವೆ. ಈ ಹಿಂದೆ ಹಲವು ಪವಾಡಗಳು ನಡೆದಿದ್ದರಿಂದ ಈ ದೇವರಿಗೆ ಭಕ್ತರ ಸಂಖ್ಯೆ ಹೆಚ್ಚಿದೆ ಎಂದು ಗ್ರಾಮದ ಹಿರಿಯರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.