ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಎಸ್ಡಿಎನ್ ಹೋಟೆಲ್ನಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನೀಲಕಂಠರಾಯ ಯಲ್ಹೇರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್ ಮಾತನಾಡಿ, ಅದು ಬಿಜೆಪಿಯ ಆರಂಭಿಕ ಕಾಲಘಟ್ಟ. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳು ಜಿಲ್ಲೆಯಲ್ಲಿ ಉತ್ತುಂಗದಲ್ಲಿದ್ದ ಸಂದರ್ಭ. ಯಲ್ಹೇರಿ, ಹಳ್ಳಿಹಳ್ಳಿ ಸುತ್ತಾಡಿ ಜಾಜಾದ ಕಲ್ಲಿನಿಂದ ಪಕ್ಷದ ಚಿಹ್ನೆ ಕಮಲದ ಚಿತ್ರ ಬಿಡಿಸಿ, ಸಂಘಟನೆ ಮಾಡಿದವರು ಮತ್ತು ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು, ಹಂತಹಂತವಾಗಿ ಪದಾಧಿಕಾರಿ ಹುದ್ದೆ ಪಡೆದಿದ್ದಲ್ಲದೆ, ಸಾಕಷ್ಟು ಕಾರ್ಯಕರ್ತರನ್ನು ಗುರುತಿಸಿದವರು. ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಜಿಲ್ಲಾ ಉಪಾಧ್ಯಕ್ಷರಾಗಿದ್ದರು ಎಂದು ಸ್ಮರಿಸಿದರು.
ಮಾಜಿ ಶಾಸಕ ಡಾ.ವ ವೀರಬಸವಂತರಡ್ಡಿ ಮುದ್ನಾಳ ಮಾತನಾಡಿ, ಯಲ್ಹೇರಿ ಕೇವಲ ಬಿಜೆಪಿ ಮುಖಂಡರಾಗಿರದೆ, ಯಾದಗಿರಿ ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಗಳಾಗಿದ್ದರು. ಹಿಂದೂ ಧರ್ಮ, ರಾಷ್ಟ್ರ ಹಾಗೂ ಗ್ರಾಮೀಣ ಭಾಗದಲ್ಲಿನ ಶಿಕ್ಷಣದ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರು. ಮಾಜಿ ಸಂಸದ ಡಾ.ಬಸವರಾಜ ಪಾಟೀಲ್ ಸೇಡಂರ ಖಾಸಾ ಶಿಷ್ಯ ಬಳಗದಲ್ಲಿ ಒಬ್ಬರಾಗಿ, ಕಲಬುರಗಿ ಕಂಪು, ವಿಕಾಸ ಅಕಾಡೆಮಿ ಸಂಘಟನೆ ಜಿಲ್ಲಾ ಜವಾಬ್ದಾರಿ ಹೊತ್ತುಕೊಂಡು ಸಮರ್ಥವಾಗಿ ಮುನ್ನಡೆಸಿದ್ದರು. ಎಂದು ತಿಳಿಸಿದರು.ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಬೆಳಗಾವಿ ವಿಭಾಗದ ಪ್ರಭಾರಿ ಬಸವರಾಜ ಯಂಕಂಚಿ, ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ, ಅಮೀನ್ ರೆಡ್ಡಿ ಯಾಳಗಿ, ಅರುಣ್ ಬಿನ್ನಾಡಿ, ನಾಗರತ್ನ ಕುಪ್ಪಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸನಗೌಡ ಯಾಡಿಯಾಪುರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಸಜ್ಜನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೆವಿಂದ್ರನಾಥ ನಾದ, ವೆಂಕಟರಡ್ಡಿ ಅಬ್ಬೆತುಮಕೂರು, ಜಿಲ್ಲಾ ವಕ್ತಾರ ಹೆಚ್.ಸಿ. ಪಾಟೀಲ್, ಶರಣುಗೌಡ ಬಾಡಿಯಾಳ, ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕರ, ಮಹಾದೇವಪ್ಪ ಅಬ್ಬೆತೂಮಕೂರ ಇತರರಿದ್ದರು.