ಸಾರಾಂಶ
ತನ್ನ ಪತ್ನಿಯನ್ನು ಮತ್ತೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಮರು ನೇಮಕ ಮಾಡಲಿಲ್ಲ ಎಂದು ಆಕ್ರೋಶದಿಂದ ಪಕ್ಷದ ಕಚೇರಿಗೆ ಪತಿ ಬೆಂಕಿ ಹಾಕಿದ್ದಕ್ಕೆ ಪತ್ನಿಗೆ ಕೆಪಿಸಿಸಿ ಶಿಕ್ಷೆ ನೀಡಿದೆ. ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಯಾದಗಿರಿ: ತನ್ನ ಪತ್ನಿಯನ್ನು ಮತ್ತೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕಕ್ಕೆ ಮರು ನೇಮಕ ಮಾಡಲಿಲ್ಲ ಎಂದು ಆಕ್ರೋಶದಿಂದ ಪಕ್ಷದ ಕಚೇರಿಗೆ ಪತಿ ಬೆಂಕಿ ಹಾಕಿದ್ದಕ್ಕೆ ಪತ್ನಿಗೆ ಕೆಪಿಸಿಸಿ ಶಿಕ್ಷೆ ನೀಡಿದೆ. ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಕನಕದಾಸ ವೃತ್ತದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಮಂಜುಳಾ ಗೂಳಿ ಅವರ ಪತಿ ಬೆಂಕಿ ಹಚ್ಚಿದ್ದರು. ಇದನ್ನು ಕೆಪಿಸಿಸಿ ಭಾರಿ ಗಂಭೀರವಾಗಿ ಪರಿಗಣಿಸಿದ್ದು, ಮಂಜುಳಾ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯರೆಡ್ಡಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಮಂಜುಳಾ ಅವರ ಸ್ಥಾನದಲ್ಲಿ ಬೇರೆಯವರ ನೇಮಕ ಮಾಡಲಾಗಿದೆ. ಇದರಿಂದ ಆಕ್ರೋಶಗೊಂಡ ಅವರ ಪತಿ, ಉಪನ್ಯಾಸಕ ಶಂಕರ ಗೂಳಿ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ ಬೆಂಕಿ ಹಚ್ಚಿದ್ದರು.
ಮಂಜುಳಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಸೌಮ್ಯರೆಡ್ಡಿ ಅವರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಕಿ ಹಚ್ಚಿದ ಘಟನೆಯಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ಬಾಬುಗೌಡ ಆಗತೀರ್ಥ ನಾಪತ್ತೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಶನಿವಾರ ಬೆಳಗಿನ ಜಾವ ಕಚೇರಿ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿತ್ತು. ಇವರಿಂದ ಬೆಲೆ ಬಾಳುವ ಎಸಿ, ಸೋಫಾ, ಟೇಬಲ್ ಕುರ್ಚಿಗಳು, ಕಂಪ್ಯೂಟರ್ ಮತ್ತು ಇತರೆ ದಾಖಲೆಗಳು ಬೆಂಕಿಗೆ ಸುಟ್ಟು ಭಸ್ಮವಾಗಿದೆ.