ಸಾರಾಂಶ
ಭಟ್ ಅವರು ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರಿಗೆ ಪತ್ರ ಬರೆದಿದ್ದು, ಸಿಬಿಐ, ಇಡಿ ಇನ್ನಿತರ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಯಶ್ಪಾಲ್ ಹೇಳಿರುವುದು ಪ್ರಶಂಸಾರ್ಹವಾಗಿದೆ. ಆದರೆ ತನಿಖೆ ನಡೆಸುವ ಮೊದಲೇ ಸಂತ್ರಸ್ತರು ಪೊಲೀಸರಿಗೆ ನೀಡಿರುವ ದೂರಿನ ಎಫ್ಐಆರ್ ಮೇಲೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು, ಅದನ್ನು ತೆರವುಗೊಳಿಸಿ, ತನಿಖೆಗೆ ಸಹಕರಿಸಬೇಕು.
ಕನ್ನಡಪ್ರಭ ವಾರ್ತೆ ಉಡುಪಿ
ಮಹಾಲಕ್ಷ್ಮೀ ಕೋಆಪರೇಟಿವ್ ಬ್ಯಾಂಕ್ನ ಸಾಲ ಪತ್ರದಲ್ಲಿರುವುದು ನಮ್ಮ ಸಹಿ ಅಲ್ಲ ಎಂಬುದಾಗಿ ಸಂತ್ರಸ್ತರು ದಾಖಲಿಸಿರುವ ಎಫ್ಐಆರ್ಗೆ ಮಹಾಲಕ್ಷ್ಮೀ ಬ್ಯಾಂಕ್ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಹೈಕೋರ್ಟ್ನಿಂದ ತಂದಿರುವ ತಡೆಯಾಜ್ಞೆಯನ್ನು ಹಿಂಪಡೆದು ತನಿಖೆ ಎದುರಿಸಲಿ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ ಸವಾಲು ಹಾಕಿದ್ದಾರೆ.ಭಟ್ ಅವರು ಬ್ಯಾಂಕ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಅವರಿಗೆ ಪತ್ರ ಬರೆದಿದ್ದು, ಸಿಬಿಐ, ಇಡಿ ಇನ್ನಿತರ ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಯಶ್ಪಾಲ್ ಹೇಳಿರುವುದು ಪ್ರಶಂಸಾರ್ಹವಾಗಿದೆ. ಆದರೆ ತನಿಖೆ ನಡೆಸುವ ಮೊದಲೇ ಸಂತ್ರಸ್ತರು ಪೊಲೀಸರಿಗೆ ನೀಡಿರುವ ದೂರಿನ ಎಫ್ಐಆರ್ ಮೇಲೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದು, ಅದನ್ನು ತೆರವುಗೊಳಿಸಿ, ತನಿಖೆಗೆ ಸಹಕರಿಸಬೇಕು.ಸಂತ್ರಸ್ತರ ಸಾಲದ ಅರ್ಜಿಗಳಲ್ಲಿ ಹಾಗೂ ಸಾಲದ ದಾಖಲಾತಿಗಳಲ್ಲಿ ಸಂತ್ರಸ್ತರು ತಮ್ಮ ಸಹಿ ಅಲ್ಲ ಎಂದು ಹೇಳುತ್ತಿದ್ದು, ಅವುಗಳ ಸತ್ಯಸತ್ಯತೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಆದುದರಿಂದ ತಡೆಯಾಜ್ಞೆಯನ್ನು ಹಿಂಪಡೆದು ನ್ಯಾಯಯುತ ತನಿಖೆ ನಡೆಯಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.------------------ಹೈಕೋರ್ಟ್ ತಡೆಯಾಜ್ಞೆ ಪ್ರತಿಯನ್ನು ರಘುಪತಿ ಭಟ್ ನೀಡಲಿ: ಯಶ್ಪಾಲ್ ಸುವರ್ಣಕನ್ನಡಪ್ರಭ ವಾರ್ತೆ ಉಡುಪಿ
ಮಾಜಿ ಶಾಸಕ ರಘುಪತಿ ಭಟ್ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ತನ್ನ ಸುಸ್ತಿದಾರರ ಎಫ್ಐಆರ್ ವಿರುದ್ಧದ ಹೈಕೋರ್ಟ್ ಮೂಲಕ ತಡೆಯಾಜ್ಞೆ ತಂದಿದೆ, ಅದನ್ನು ತಕ್ಷಣ ತೆರವು ಮಾಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಪತ್ರ ಬರೆದು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿದ್ದು, ಈ ತಡೆಯಾಜ್ಞೆ ಪ್ರತಿಯನ್ನು ರಘುಪತಿ ಭಟ್ ಬಳಿ ಇದ್ದರೆ ತಕ್ಷಣ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಾಧ್ಯಮಗಳಿಗೆ ನೀಡುವಂತೆ ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸವಾಲು ಹಾಕಿದ್ದಾರೆ. ರಘುಪತಿ ಭಟ್ ಆಧಾರ ರಹಿತ ಆರೋಪಗಳಿಗೆ ಬ್ಯಾಂಕಿನ ಆಡಳಿತ ಮಂಡಳಿ ಉತ್ತರ ನೀಡಿ ಯಾವುದೇ ತನಿಖೆಗೆ ಸ್ವಾಗತ ಎಂದು ತಿಳಿಸಿದರೂ, ಹತಾಶ ಮನಸ್ಥಿತಿಯ ರಘುಪತಿ ಭಟ್ ಇದೀಗ ನ್ಯಾಯಾಂಗ ವ್ಯವಸ್ಥೆಯನ್ನೇ ತಿರುಚಿ ಸುಳ್ಳು ಸುದ್ದಿ ಸೃಷ್ಟಿಸಿ ಮಾಧ್ಯಮಗಳು ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ. ರಘುಪತಿ ಭಟ್ ಅವರು ಇದೀಗ ತಮ್ಮ ಸ್ವಾರ್ಥ ಸಾಧನೆಗಾಗಿ ಇಡೀ ಸಹಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದು, ಇದು ಇಡೀ ಸಹಕಾರಿ ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.